Oct 2, 2025

ಮರುಕಳಚಿದಾಗ - ಈ ಪುಸ್ತಕ

ನನ್ನ ಗೀಚಾಣಗಳನ್ನೆಲ್ಲಾ ಕಲೆಹಾಕಿ ಒಂದು ಪುಸ್ತಕ ಮಾಡವು ಹೇಳ್ವ ಕನಸೊಂದು  ನನಸಾತು. 
ಹಿಂದೊಮ್ಮೆ ಗೀಚಿದ್ದ ಕೆಲವಷ್ಟು ಆಯ್ದ ಕಥೆಗಳ ಸಂಕಲನ ಮಾಡಿದ್ದಿ. ಅದ್ರ ಬಿಡುಗಡೆಗೆ ವಿಜಯದಶಮಿಗಿಂತಾ ಒಳ್ಳೆಯ ಮುಹೂರ್ತ ಮತ್ಯಾವದಿತ್ತು?!
ಕೆಳಗಿನ ಲಿಂಕ್ ಗೆ ಹೋಗಿ ಓದಲಕ್ಕು. ಓದಿ ಅಭಿಪ್ರಾಯ ತಿಳಿಸಿ. 
https://heyzine.com/flip-book/b62eea6ecf.html

Aug 19, 2023

ಹುಚ್ಚು ಮನಸಿನ ಹತ್ತು ಮುಖಗಳು


ಒಮ್ಮೆ ಮಗಳ ಶಾಲೆಯ ಎಡ್ಮಿಶನ್ ಸಲುವಾಗಿ ವಂದು ತಿಂಗಳ ವದ್ದಾಟದಲ್ಲಿದಿದ್ದಿ. ಕರ್ಮ - ಧರ್ಮ ಸಂಯೋಗ ಹೇಳತ್ವಲೀ... ಸಾಮಾನ್ಯವಾಗಿ ನಾವು ಯಾವುದೇ ವಂದು ವಿಷಯದಲ್ಲಿ ಮುಳುಗಿ ಹೋಗಿರತ್ವ ಆ ವಿಷಯನೇ ಪದೇ ಪದೇ ಎದುರಿಗೆ ಬಂದು ನಿಲ್ಲತು... ಅಥವ ಯಾರದ್ದೋ ಮಾತು, ಕಥೆ... ಆ ದಿನದ ಪೇಪರ್ರು... ಬಪ್ಪ ಪೋನು ಎಲ್ಲದೂ ಈ ವಿಷಯಕ್ಕೆ ಸಂಬಂಧಪಟ್ಟಿದ್ದೇಯನ ಅನಿಸಿಹೋಗತು.
   ಗಾಯ ಆದಾಗೂ ಹಾಂಗೇಯಲಿ... ಆದ ಗಾಯದ ಮ್ಯಾಲೇ ಪದೇ ಪದೇ ಮತ್ತೆ ಮತ್ತೆ ಜಪ್ಪತು... ಮತ್ತೆ ತೆರೀತು.... ಹದಾ!

     ಅದೇ ಸಮಯದಲ್ಲಿ ವಂದಿನದ ಪೇಪರಲ್ಲಿ ’ಮಕ್ಕಳಿಗಾಗಿ ಅವರ ಭವಿಷ್ಯಕ್ಕಾಗಿ ನಮ್ಮ ಭವಿಷ್ಯವನ್ನು ಪಣಕ್ಕಿಡುವುದು ಎಷ್ಟು ಸರಿ?’ ಹೇಳ ಯೆಂತೋವ ವಂದು ಲೇಖನ ಬಂತು. ಹೌದು ಅದು ಸಕಾಲಿಕವೇಯ ಯಂಗೆ. ಇಷ್ಟೆಲ್ಲ ಮಾಡಿ ವದ್ದಾಡಿ ಈ ಮಕ್ಕಳ ದೊಡ್ದ ಮಾಡಿಯಾದ ಮ್ಯಾಲೆ ಕಡೆಗೆ ಸರ್ವೇಸಾಮಾನ್ಯವಾಗಿ ಅಪ್ಪದೆಂತಪಾ ಕೇಳಿರೆ ದೊಡ್ಡಾದ ಹುಡ್ರು ಹೇಳತ - "ಅಪ್ಪ ಅಮ್ಮ ಯಂಗೆ ಯೆಂತೂ ಮಾಡಿದ್ವಿಲ್ಲೆ... ಹೋಗ್ಲಿ ಯಾಂ ಮಾಡದಕ್ಕೂ ಸಪೋರ್ಟ್ ಮಾಡಿದ್ವಿಲ್ಲೆ. ಯೆಂತ ಮಾಡಿಡದು ಬ್ಯಾಡದಪ...  ನಾ ಮಾಡದಕ್ಕೆ ಅಡ್ದ ಬರದ್ದೇ ಇದ್ರೆ ಸಾಕಾಗಿತ್ತು." ಹೀಂಗೆ ಸಾಗತು ಅವರ ಮಾತಿನ ಧಾಟಿ. ಅಲ್ಲ ಇಂವ ಎಂತಾ ಮಾಡ್ತ ಹೇಳಿ ಅಪ್ಪಂಗೆ ಗೊತ್ತಿಲ್ಲೆ... ಅಪ್ಪ ಯೆಂತಕೆ ಸಪೋರ್ಟ್ ಮಾಡಿದ್ನಿಲ್ಲೆ ಹೇಳಿ ಮಗಂಗೆ ಗೊತ್ತಿಲ್ಲೆ. ವಟ್ಟೂ ಇದೊನ್ನಮನಿ ಕಮ್ಯೂನಿಕೇಶನ್ ಗ್ಯಾಪ?? ಅಥವ ಜನರೇಷನ್ ಗ್ಯಾಪ?? ಹೇಳೆಲ್ಲ ಯೋಚನೆ ಯನ್ನ ತಲೆಲಿ ವಂದೇಸಲ ಬಂದು ಹೋತು.

   ಹೌದು  ’ಮಕ್ಕಳಿಗಾಗಿ... ಅವರ ಭವಿಷ್ಯಕ್ಕಾಗಿ... ನಮ್ಮ ಭವಿಷ್ಯವನ್ನು ಪಣಕ್ಕಿಡುವುದು ಎಷ್ಟು ಸರಿ?’
   ಈಗ ಮಕ್ಕಳ ಮ್ಯಾಲೆ ಹಾಕಿದ ಖರ್ಚು ವೆಚ್ಚ ಯೆಲ್ಲ ಲೆಕ್ಕ ಇಡಲೆ ಬತ್ತ?? ಅಥವ ಅದನ್ನ ’ಮುಂದೆ ವಂದಿನ ಯನ್ನ ಮಗ/ಮಗಳು ನಂಗಳಿಬ್ಬರನ್ನ ಸಾಕತ’ ಹೇಳಿ ನಂಬಕ್ಯಂಡು ಅದೊನ್ನಮನಿ ಹೂಡಿಕೆ ಹೇಳಿ ಸುರಿಯದ? ಅಲಾ... ಪೋಸ್ಟಾಪೀಸಿನ ಠೇವಣಿ ಆರೂ ಹನಿ ವಂಚೂರು ಬಡ್ಡಿ ಸಮೇತ ಕೊಡತು. ಈ ಮಕ್ಕ ಹಾಂಗ? ಹುಂ ಸಾಕತ್ವ ಬಿಡತ್ವ ಗ್ಯಾರಂಟಿ ಅಂತೂ ಗೊತ್ತಿಲ್ಲೆ. ಆದರೆ ಯಂಗಳ ಕರ್ತವ್ಯ ಹೇಳಿ ಅವರನ ಸಾಕದೇ ಆತಲಿ ... ಮಕ್ಕಳ ಸಾಕಲಾಗದ್ದೇ ಇದ್ದವು ಮಕ್ಳ ಹೆತ್ತಿದ್ದೆಂತಕೆ ಕೇಳ್ತು ಸಮಾಜ ಹೇಳಿ ಕಣ್ ಮುಚ್ಗ್ಯಂಡು ಕಲೀಸದೇಯಾ.
    ಸರಿ ಕಲಿಸದಾದರೂ ಹ್ಯಾಂಗೆ?? ಸೊಕಾಸುಮ್ಮನೇ ಚೊಲೋ ಶಾಲೆ ಕಾನವೆಂಟು ಹೇಳಿ ದುಡ್ಡು ಸುರಿಯದೆಷ್ಟು ಸರಿ?? ನಮ್ಮ ಹೊಟ್ಟೆ ಕಟ್ಟಾದ್ರೂ ಸರಿ ಮಕ್ಕಗೆ ಕಮ್ಮಿ ಮಾಡಲಾಗ ಹೇಳಿ ಖರ್ಚು ಮಾಡದೆಂತಕ್ಕೆ ಹೇಳೆಲ್ಲ ಯೆಂತೆಂತೋವ ತಲೆಲಿ ಹುಳ.

    ಭಾವನೆಗೆ ಬಲಿ ಬಿದ್ದು ವಾಸ್ತವವಂತೂ ಮರೆಯಲಾಗ. ಶಿಕ್ಷಣ, ಸಂಸ್ಕಾರ ಕೊಡದು ನಮ್ಮ ಕರ್ತವ್ಯ. ಇಲ್ಲೆ, ಮಕ್ಕ ಅಡ್ಡದಾರಿ ಹಿಡಿತಾ ಇದ್ದ ಅಂದಾಗ ತಿದ್ದುವ ಪ್ರಯತ್ನ ಮಾಡಿ, ಉದ್ಧಾರಪ್ಪವಲ್ಲಾ ಹೇಳಿ ಗೊತ್ತಾದಮೇಲೆ ನಮ್ಮ‌ಭವಿಷ್ಯವ, ನಮ್ಮ ಸಮಯವ ಹಾಳು ಮಾಡ್ಕಂಬದರಲ್ಲಿ ಅರ್ಥ ಇಲ್ಲೆ.
ಒಟ್ನ ತಲೆಮೇಲೆ ಮಕ್ಕಳ ಮೇಲ್ನ ಪಾಶವ ಸ್ವಲ್ಪ ಹದಕ್ಕಿಡದೇ ನಮ್ಮ ಸ್ವಾಸ್ಥ್ಯಕ್ಕೆ ಒಳ್ಳೇದು. 

-ಶ್ಯಾಂ ಭಡ್ತಿ
(ಹಿಂದೊಮ್ಮೆ ಗೀಚಿದ್ದು)
19 -08 - 2023

Aug 6, 2022

ಹೆಡ್ ಮಾಸ್ತರರ ಕುರ್ಚಿ

     ಸಣ್ಣ ಹುಡ್ರಿಗೆ ಅಪ್ಪನ ಆಪೀಸಿಗೋಪದು ಅಂದ್ರೆ ಮಜಾ. 
     ನಾ ಕಂಡ ಮೊದಲ ಆಪೀಸು ನನ್ನಪ್ಪನ ಶಾಲೆಯ ಸ್ಟಾಪ್ ರೂಮೇಯ. ಅಲ್ಲಿ ಯಾವಾಗಲೂ 5-6 ಜನ ಮಾಸ್ತರು ಅಕ್ಕೋರು ಇರ್ತ ಯಾವಾಗೂವ. ನಾ ಸಣ್ಣಿದ್ದಾಗಿಂದ ಹೋಪಲೆ ಇಷ್ಟಪಟ್ಟ ಆಪೀಸು ಅದು. ಅಪ್ಪನಂತ ಆಪೀಸ್ ಇರವು ಯಂಗೆ.. ಒಂದು ಕುರ್ಚಿ ಟೇಬಲ್ಲು. ಅಲ್ಲಿ ಬರೆಯಲೆ ರಾಶೀ ನಮನಿ ಪೆನ್ನು. ಆ ಪೆನ್ನಿಡಲೆ ಸ್ಟಾಂಡು. ಗೀಚಲೆ ರಾಶೀ ರಾಶೀ ಪಟ್ಟಿ. ಹೀಂಗೇ ಕನಸು ಆವಾಗ. 
    ಅಪ್ಪನ ಆಪೀಸಿಗೋದ್ರೆ ಅದೆಂತದೋ ವನ್ನಮ್ನಿ ಖುಷಿ. ಕಾರಣ ಅಲ್ಲಿ ನಮಗೆ ಸಿಕ್ಕುವ ರಾಜಮರ್ಯಾದೆ. ಎಲ್ಲಾ ಮಾತಾಡಸ್ತ. ಅಪ್ಪ ಜೀವಮಾನದಲ್ಲಿ ಕೊಡಿಸಿರದ ಚಾಕಲೇಟ್ ಕೊಡತ್ರು ಜಾನಕಕ್ಕೋರು. ಹೊಸ ಪೆನ್ನು ಕೊಡತ್ರು ಕಾಳೆ ಮಾಸ್ತರು. ಅವಧಾನಿ ಮಾಸ್ತರರ ಕಥೆ ಪುಸ್ತಕ. 
      ಹೀಂಗೇ ಒಂದಿನ ಅಪ್ಪ ಕೂತ್ಗಂಬ ಆ ಕುರ್ಚಿ ಮೇಲೊಂದ್ಸಲ ಕೂತ್ಗಳವು ಹೇಳಾಗೋಗಿತ್ತು ಯಂಗೆ. ಆ ದಿನ ಬರದ್ದೇ ಹೋಗ್ತ! ನಾನೂ, ನನ್ನ ಕನಸು, ನನ್ನ ಹಠ, ನನ್ನ ತೀರ್ಮಾನ ಸಾಕಾರ ಅಪ್ಪ ದಿನ ಬರಲೇಬೇಕಲಿ.  ಹಗಲಗನಸೊಂದ ಪದೇ ಪದೇ ಕಂಡರೆ ಸಾಮಾನ್ಯವಾಗಿ ಅದು ನನಸಾಗ್ತು ಹೇಳ್ತ ಹದಾ ?! 

       ಆ ದಿನ ಆದಿತ್ವಾರ. ಅಪ್ಪಂಗೆ ಶಾಲೆಲಿ ಎಂತೋ ಕೆಲಸಿತ್ತು. "ನಾನೂ ಬತ್ತೆ" ಹೇಳದ್ದಕ್ಕೆ ಅಪ್ಪ ಬೇಡ ಹೇಳಿದ್ನಿಲ್ಲೆ.... ಬದಲಿಗೆ "ಬಂದ್ಕಂಡು ಎಂತಾ ಮಾಡ್ತೆ ಹುಡಗ್ರು ಯಾರೂ ಬತ್ವಿಲ್ಲೆ ಅಲ್ಲಿ ಆಡುಲೆ" ಅಂದ. 
"ಇಲ್ಲೆ ನಾನೂ ಬತ್ತೆ ಆದ್ರೂವ" ಅಂದೆ, ಮತ್ತೆ  ಬೆನ್ನ ಬಿಟಿದ್ನಿಲ್ಲೆ. ಸರಿಯಪಾ ಅಂದ ಕರ್ಕ ಹೋದ ಅಪ್ಪ. ಶಾಲೆಗೋಗಿ ಎಂತದೋ ಫೈಲ್ ಎಲ್ಲಾ ತೆಗದು ಎಂತದೋ ಬರೀತಾ ಕೂತಿದಿದ್ದ. 

       ಆಗ ಯಂಗೆ ಯನ್ನ ಕನಸು ನೆನಪಾತು.. ಅಪ್ಪನ ಕುರ್ಚಿಲಿ ಅಪ್ಪ ಕೂತಿದ್ದ.. ಹಂಗಾಗಿ  ಅಲ್ಲಿ ಕೂತ್ಗಂಬಲಾಗ್ತಿಲ್ಲೆ.. ಹೆಡ್ ಮಾಸ್ತರ್ರ ಕುರ್ಚಿ ಖಾಲಿ ಇದ್ದು.. ಅಲ್ಲೇ ಕೂತ್ಗಂಬನ ಕಂಡ್ತು. ಕನಸು ಕಂಡದ್ದಕ್ಕೂ ಜಾಸ್ತಿ ದಕ್ಕುವ ನಮನಿ ಇದ್ದಕು ಹೇಳಿ ಖುಷಿನೇ ಆತು. ಹೆಡ್ ಮಾಸ್ತರ ಕುರ್ಚಿ ಹತ್ರ ಹೋಗಿ ನಿಂತಿ. ಆ ಕುರ್ಚಿ ಮುಟ್ಟಿ ನೋಡದಿ.. ಮೆತ್ತಗಿನ ದಿಂಬ ಹಾಕಿಟ್ಟಿದ್ರು ಹೆಡ್ ಮಾಸ್ತರು.. ಆದರೂ ಸೀದಾ ಹೋಗಿ ಕೂತ್ಗಂಬಲೆ ಹೆದ್ರಕೆ. ಅಪ್ಪ ಬೈದ್ರೆ?! 
"ದಾದಾ" ರಾಗ ಎಳದಿ. 
ಮಕ ಎತ್ತಿ ಕೆಳಗಿಳಿಸಿದ ಕನ್ನಡಕದ ಮೇಲಿಂದ ನೋಡ್ದ ಅಪ್ಪ. 
"ಹೀ ಹೀ" ಮಾಡ್ದಿ. 
"ಎಂತದಾ?" ಕೇಳ್ದ ಅಪ್ಪ
"ಕೂತ್ಗಳ್ಳ?" ಕೇಳ್ದಿ ಧೈರ್ಯ ಮಾಡಿ ಹೆಮಾ ರ ಕುರ್ಚಿ ಬದಿಗೆ ಬೆಳ್ಳು ತೋರಸಗ್ಯಂಡು. 
"ಪಳದಿ, ಇಚ್ಚಿಗೆ ಬಾ ಹೆಡ್ ಮಾಸ್ತರು ಕಂಡ್ರೆ ರಣಿ ಹೊಡೆತ್ರು" ಅಂದಾ
ಅಂವ ಹೆದ್ರಸಿದ್ನ .. ಕುಶಾಲ್ ಮಾಡದ್ನ  ಅಂದಾಜಾಜಿಲ್ಲೆ.. ಹೆಡ್ ಮಾಸ್ತರರಿಗೆ ಹೆಂಗೆ ಗೊತಾಗ್ತು?  ಅವರಿಲ್ಲೆ ಇಲ್ಲಿ ಇವತ್ತು ಬತ್ರಿಲ್ಲೆ ಆದಿತ್ವಾರ... ಈ ದಾದ ಕುಶಾಲ್ ಮಾಡ್ತ ಬಿಡು ಹೇಳಿ ತಡ ಮಾಡದೇ ಹೋಗಿ ಕುತ್ಬುಟಿ. ಅಪ್ಪ ಬೈದ್ರೆ ಇಳದ್ರಾತು ಮತ್ತೆಂತ ! ಹೇಳಿ ಐಡಿಯಾ. 

ದಣಿ ಕೂತಿದ್ನನ. ಅಪ್ಪ ತಲೆ ಬಗ್ಗಿಸಿ ಅವನ ಕೆಲಸ ಮಾಡ್ಕತಿದ್ದ.‌ ನಾ ಕೂತದ್ದ ಗ್ರೆಂಸಿದ್ನಿಲ್ಲೆ... ಹೇಳೇ ಖುಷಿಲಿ ಇದಿದ್ದಿ.. ಅಷ್ಟತ್ತಿಗೆ ಯಾರೋ ಬಾಗಲ ಹತ್ರ ಬಂದಂಗಾತು.. ಒಳಗೇ ಬಂದ ... ಯಾರು ನೋಡಿರೆ ಹೆಡ್ ಮಾಸ್ತರು!! ಯಂಗೆ ಒಂದೇ ಸಲ ಒಂದು ಎರಡು ಎಲ್ಲಾ ಬಂದಂಗಾಗೋತು.  ಎಂತಾ ಮಾಡವು ತಿಳಯದ್ದೇ ಬಡಬಡಾ ಕುರ್ಚಿಂದ ಹಾರಿ ಅಪ್ಪನತ್ರ ಬಂದು ನಿಂತಿ.. ಬಾಯಲ್ಲಿ "ಸ್ಸಾರಿ ಸ್ಸಾರಿ" ಹೇಳ್ತಿದ್ದಿ... ಧ್ವನಿ ಹೆರಗೇ ಬೀಳ್ತಿಲ್ಲೆ. 

ಅಷ್ಟತ್ತಿಗೆ ಹೆಡ್ ಮಾಸ್ತರು
"ಭಟ್ರೆ, ನಮ್ಮ ಶಾಲೆಗೆ ಹೊಸ ಹೆಡ್ ಮಾಸ್ಟರ್ ಬಂದಾರೆ ?" ಅಂದ್ರು. ಆವಾಗ ಅಪ್ಪ ನನ್ನ ಬದಿಗೆ ಮತ್ತೆ ಕುರ್ಚಿ ಬದಿಗೆ ನೋಡದ ನೋಡು.. ಅವನ ಕಣ್ ಕೆಂಪಾಗಿದ್ದ ನೋಡಿ ಯಂಗೆ ಎಲ್ಲೆಲ್ಲೋ ಕೆಂಪಾಗೋಗಿತ್ತು ಆ ಕ್ಷಣಕ್ಕೆ. ಆದ್ರೆ ಪಾಪ ಹೆಡ್ ಮಾಸ್ತರಿಗೆ ನನ್ನ ಮೇಲೆ ಪ್ರೀತಿ.  ಅವರೇ ಸಂಭಾಳ್ಸಿದ್ರು ಆವಾಗ. ನನ್ನತ್ರ ಬಂದು ತಲೆ ಮೇಲೆ ಕೈಯಿಟ್ಟು "ಅಡ್ಡಿಲ್ಲ ಶಾಮ.. ನೀನೂ ಒಂದಿನ ಆ ಕುರ್ಚಿ‌ ಮೇಲೆ ಕೂತ್ಗೊಳ್ಳುವೆ" ಅಂದ್ರು. 
ಆಗ ನನ್ನ ಬಾಯಿಂದ ಹೊರ ಬಂತು ಸಮಾವ "ಸ್ಸಾರೀ ಸರ್. ತಪ್ಪಾಯ್ತು" 😳
ಇವತ್ತಿಗೂ ನೆನಪಾದ್ರೆ ಹೆದ್ರಕತ್ತು.. ನಗೆನೂ ಬತ್ತು. 

ಶಿಕ್ಷಕ ಸಮೂದಾಯ ಯಾವತ್ತೂ ಸುಖವಾಗಿರಲಿ 🙏🙏🙏🙏
**************************

(FB ಹವಿಹಾಸ್ಯ ಬಳಗದಲ್ಲಿ ಬರೆದ ಲಘುನಗು. 
05/08/2022 )

Jul 8, 2022

ಬ್ರಹ್ಮ (ಅಕ್ಷರನಮನ)

#ಬ್ರಹ್ಮೂರು 
#ಅಕ್ಷರನಮನ 
     'ಬರೆಯ ಕೂತರೆ ಹುಚ್ಚ ... ಪ್ರೀತಿಯಲ್ಲಿ ಬಾಡದ ಹೂ ನಾನು' ಎನ್ನುತ್ತಿದ್ದ.
ನಿಂತಲ್ಲಿ ನಿಲ್ಲದ..‌ ಕುಂತಲ್ಲಿ ಕೂರದ ವಾಮನ ಮೂರ್ತಿ. ಚುರುಕಿಗೇ ಇನ್ನೊಂದು ಹೆಸರು ಬ್ರಹ್ಮ ಇನ್ನು‌ ನೆನಪು ಮಾತ್ರ. ಹೂಗಳು ಬಾಡಿದ ಆ ಹೊಂಗೆಮರದ ಶೃಂಗಾರ ಇನ್ನಿಲ್ಲ ಎಂಬುದ ನಂಬಲು ಎರಡು ದಿನ ಬೇಕಾಯ್ತು ನನಗೆ 😓

      ಕೆಲ ವರ್ಷಗಳ ಪರಿಚಯ... ಒಂದು ವರ್ಷದ ಹಿಂದೆ ಯಾವುದೋ ಒಂದು ಅಂಕಣದ ಸಾಥಿಯಾಗಿ ಆದ ಆತ್ಮೀಯನಿಗೆ ಆತನ ಸಾವಿನಲ್ಲಿ ಅಶ್ರುತರ್ಪಣವೀಯುವ ಪ್ರಸಂಗ ಬರಬಹುದೆಂದುಕೊಂಡಿರಲಿಲ್ಲ.
      
      ಮೊನ್ನೆಯಿಂದ ಸಂತಾಪಗಳ ಮಹಾಪೂರ ನೋಡಿದೆ.. ಆತನ ಪುಟ್ಟ ಜೀವನದ ಮಹಾನ್ ಸಾಧನೆಗಳ ಕಂಡು ಬೆರಗಾಗಿದ್ದೇನೆ. ಕೇವಲ ಒಂದು ದಶಕದಲ್ಲೇ ಬೃಹದಾಕಾರವಾಗಿ ಬೆಳೆದ ಬ್ರಹ್ಮನ ಸಾಧನೆ ಸಾಮಾನ್ಯರಿಗೆ ಸುಲಭ ಸಾಧ್ಯವಾದುದಲ್ಲ. . ಬಹುಮುಖ ಪ್ರತಿಭೆಯಾದರೂ ಏನಿರಲಿಲ್ಲ ಈತನಲ್ಲಿ?! 
     ಅಕ್ಷರ ರಾಕ್ಷಸನೇ ಆದರೂ ರವಿಬೆಳಗೆರೆಯ ನಸೀಬ ಈತನಿಗಿರಲಿಲ್ಲ... 
     ಕಥೆಗಾರನಾದರೂ ಯೋಗರಾಜ ಭಟ್ಟರ ಯೋಗ ಈತನಿಗೆ ಎಟುಕಲಿಲ್ಲ...
     ಉಪೇಂದ್ರನಂತೇ ಹುಚ್ಚಿದ್ದರೂ ಲಕ್ಷ್ಮೀ ಒಲಿಯಲಿಲ್ಲ... 
     ಪ್ರತಿಭೆಗಳ ಆಗರವಾಗಿದ್ದರೂ ಮುಖ್ಯವಾಗಿ ಆಯುಸ್ಸೇ ಇರಲಿಲ್ಲ. 

      ಮತ್ತೆ ಹುಟ್ಟಿ ಬಾ ಎನ್ನಲಾರೆ. ಮತ್ತೊಬ್ಬ  ವಿನಾಯಕ ಬ್ರಹ್ಮೂರು ಬೇಕಿಲ್ಲ ನನಗೆ.  ಬೇರೊಂದು ಜನ್ಮದಲ್ಲಿ ಜೊತೆಯಾಗುವ ಹೆಬ್ಬಯಕೆಯೂ ಇಲ್ಲ. ಆತನ ಕೆಲವು  ಅನುಸರಿಸಬಹುದಾದ ಹೆಗ್ಗುಣಗಳಿವೆ.. ಅವು ನನ್ನ ಜೀವನದಲ್ಲಿ ಸದಾ ಜೊತೆಯಾಗಿದ್ದುಬಿಡಲಿ.  ಆತನ ಚಂದದ ಬರಹಗಳಿವೆ.. ಆ ಶೈಲಿಯ ಬರಹದ ಹುಚ್ಚು ನನಗೊಲಿಯಲಿ. ಅದನ್ನನುಸರಿಸುವ ಶಕ್ತಿ ನನ್ನದಾಗಲೀ. ಆತನ ಕಿರುಚಿತ್ರಗಳೆಂಬ ಮುತ್ತುಗಳು ನೆನಪಿನ ಹಾರವಾಗಿರಲಿ. 

    ಬ್ರಹ್ಮ ನಿನ್ನ ಗುರಿಯ ನೀ ತಲುಪಿದೆಯೆಂಬ ಸಮಾಧಾನ ನನಗಿರಲಿ 
🙏🙏🙏

(ಆತನ ಬ್ಲಾಗ್ ಲಿಂಕ್ ಇಲ್ಲಿದೆ) 
https://brahmur.blogspot.com/?m=1

Jul 2, 2022

ವರ


**ನಿದ್ರೆ ಒಂದು ವರ ಯಂಗೆ**
 ಹೀಂಗೇಳಿ ನನ್ನ ಹೃದಯದ ಒಡತಿಯೂ ಹೇಳ್ತು... ನನ್ನ ಆಸ್ತಿಯ ಒಡತಿಯೂ ಹೇಳ್ತು. 😍 ಎಂತಕೆ ಅಂದ್ರೆ ಎಷ್ಟೊತ್ತಿಗೆ ಬೇಕಾರೂ ಬಿದ್ಕೂಳೆ ವರಕ ಯಂಗೆ. ಅವ್ಕೆ ಹೊಟ್ಟೆಕಿಚ್ಚು 😌

      ನನ್ನ ಜೀವನದ ಹೆಚ್ಚೂ ಕಮ್ಮಿ 20 ವರ್ಷ ಪ್ರಯಾಣದಲ್ಲಿ ಕಳದೋಜನ. ಸಿಕ್ಕ ನೌಕರಿಯೂ ಅಂತದ್ದೇಯ. ಬಸ್ಸಲ್ಲಿ ಕುಂತು ಡ್ರೈವರ ಬಸ್ ಡುರ್ ಗೆಡಸಿ 3 ನೇ ಗೇರಿಗೆ ಹಾಕ್ದ ಅಂದ್ರೆ ಯಂಗೆ ವರಕ.  ಟ್ರೇನಲ್ಲಿ ನಿಯಮಿತವಾಗಿ ಡಗ್ ಡಗ್ ಶುರು ಆತು ಅಂದ್ರೆ ನಾ ವರಗ್ದೆ ಹೇಳೇ ಲೆಕ್ಕ..‌ ವಿಮಾನ ಟೇಕ್ ಆಫ್ ಅಪ್ಪಲಿವರಿಗಷ್ಟೇ ಎಚ್ರ ಇರ್ತು😍😂😜
 ಮೊದಲಿಂದ ಹಂಗೇಯ

**ಕಾಲೇಜು ಜೀವನ 1998:
ಆವತ್ತೊಂದಿನ ಕುಮಟಾದಿಂದ 3 ಗಂಟೆಯ ಚಿಪ್ಪಿಹಕ್ಕಲ ಬಸ್ಸಿಗೆ ಹತ್ತಿ ಕುಂತಿದ್ದೆ.‌ ಮಾಡಗೇರಿ ಹತ್ರ ಎಚ್ಚರಾಗಿತ್ತು..‌ ಅಂ ಮನೆಗಿನ್ನೂ ಸುಮಾರು ದೂರಿದ್ದಲೀ ಹೇಳಿ ಮತ್ತೆ ಕಿಡಕಿಗೆ ವರಗಿದ್ದೆ. ಕಡೆಗೆ ಕೊಳಪೆಹೊಂಡ ದಾಟದ ಮೇಲೆ ಕಂಡಕ್ಟರ ಬಂದು 'ಹಾ ಎಲ್ಲಿ ಇಳೂದು ತಮಾ?' ಅಂದಮೇಲೆ ಎಚ್ರಾಗಿ ಕಿಡಕಿಲಿ ನೋಡಿರೆ ಅವಧಾನಿ ಶಾನಭೋಗರ ಮನೆ ಬ್ಯಾಣ ! ಎಚ್ರ ಮಾಡ್ದ ಕಂಡಕ್ಟರಂಗೆ ಧವಾ ಹೇಳದ ಬಿಟ್ಟಿಕ್ಕೇ ಹುಳಚಪ್ಪೆ ಮಕಾ ಮಾಡ್ಕಂಡು 'ಹಿಹಿ' ಹೇಳಿ ಕಿಸದು, ಮನಸಲ್ಲೇ ನಗೆ ಬಂದರೂ... ತಡಬಡಸಿ  ಎದ್ದು ಇಳದು‌ ವಾಪಸ್ 1 ಕಿಮೀ‌ ಮನೆಗೆ ನಡ್ಕ ಬಂದದ್ದಿದ್ದು. ಇಡೀ ಬಸ್ಸನವೆಲ್ಲ ನಗ್ಯಾಡಿದ್ದ ಹೇಳದು ಯಂಗೆ ಗೊತ್ತಾಗ್ದೇ ಹೋಜಿಲ್ಲೆ ಮತೇ😀

    **ಹೊನ್ನಾವರ 2000: 
ಎನೋ ಕೆಲಸದ ನಿಮಿತ್ತ ಎಲ್ಲಿಗೊ ಹೋಗಿ ಬಂದಿಳಿದಿದ್ದ ರಾತ್ರಿ ನಾನೂ ನನ್ನಣ್ಣ..  ಬೆಳಿಗ್ಗೆ 5 ಗಂಟೆಗೆ ಅವಂಗೆ ವಾಸ್ಕೋ ಹೋಪ ಬಸ್ಸು. ಹಂಗಾಗಿ ಮನೆಗೆ ಹೋಗದೇ ಕಾಮತ್ ಹೊಟೆಲಲ್ಲೇ ರೂಂ‌ ಮಾಡಿ ವಳ್ದ.  ನನ್ನ ವಾಚಲ್ಲಿ ಅಲಾರ್ಮ್ ಇಟ್ಟು‌ ಮಲಗಿದ್ದೊಂದು ಗೊತ್ತು... ಬೆಳಗ್ಗೆ ಎಚ್ರಾದಾಗ ಎಂಟೂಕಾಲು. ಅಲಾರ್ಮ್‌ ನೋಡಿರೆ ಬಂದ್ ಮಾಡಿದ್ದ ಯಾರೋವ... ವರ್ಕಣಾಶಿಲಿ ನಾನೇ ಬಂದ್ ಮಾಡಿರವು.. ನನ್ನ ಬುರ್ಡೆಗೆ ವಂದ್ ತಟ್ಟಿಕ್ಕೇ ಶಿಟ್ ಶಿಟ್ ಮಾಡ್ಕಂಡು ಹೋದ ಅಣ್ಣ..‌ ಬುರ್ಡೆಗೆ ತಿಂದೂ ನಗ್ಯಾಡಿದ್ದು ಅಂದ್ರೆ ಅದೇ ಮದ್ಲಾಗಿಕ್ಕು ಯಾನು 😂😜

   **ಮುಂಬೈ 2002: 
ಮುಂಬೈಲಿದಿದ್ದೆ ಕೆಲ ವರ್ಷ. ಊರಿಗೆ ಬಪ್ಪ ಮತ್ಸ್ಯಗಂಧಾ ರೈಲ ಹಿಡದು ಶೆಡ್ಯೂಲ್ ಪ್ರಕಾರ ಹೊನ್ನಾವರ ಸ್ಟೇಶನ್ನಲ್ಲಿ ಇಳಿಯವು ನಾನು. ಅಂಕೋಲಾದಲ್ಲಿ ಎಚ್ರಾಗಿತ್ತು. ಯನ್ನ ವರ್ಕ ಗೊತ್ತಿದದ್ದರಿಂದ ಅಲಾರಾಂ ಇಟ್ಟಿದಿದ್ದೆ.  ಅದು ಬಡ್ಕಂಡ್ರೂ ಅದನ್ನ ಸ್ನೂಜ್ ಮಾಡಿ ಮತ್ತೆ ಮಲ್ಗಿದಿದ್ದೆ... ಎರ್ಡ್ ನಿಮಿಷನೂ ಆಜಿಲ್ಯನ ಅಚಾನಕ್ಕಾಗಿ ರೈಲಿನ ಶಬ್ದ ಬದಲಾಗಿ ದಡಾಬಡಾ ಅಗಿದ್ದರಿಂದ ಎಚ್ರಾತು.. ರೈಲು ಬ್ರಿಜ್‌ ಮೇಲೆ ಜಾಸ್ತಿನೇ ಶಬ್ದ ಮಾಡ್ತು. ಒಹೋ ಅಘನಾಶಿನಿ ಬಂತು ಹೇಳಿ ಎದ್ದು ಕುಂತೆ. ನಿಮಿಷದೊಳಗೇ ಗೊತ್ತಾತು..‌ ಶರಾವತಿ ಇದು ಹೇಳಿ.. ಕೈ‌ ಮುಗದೆ.... ಮನಸಲ್ಲೇ ನಗೆ ಬಂತು.. ಮುರ್ಡೇಶ್ವರಕ್ಕೆ ಹೋಗಿ ಇಳದು, ಬಸ್ ಹಿಡದು ಮನೆಗೆ ಬಂದ್ರೆ ಆಯಿ ಕೇಳ್ತು -
"ಟ್ರೇನ್ ಲೇಟನ ತಮಾ!?" 
"ಹೌದೇ... ಇಲ್ಯೇ ಸಾಯ್ಲಿ" ಅಂದೆ ಒಳಗೊಳಗೇ ನಗ್ಯಾಡ್ತವ 😜

   ದಿಲ್ಲಿ 2007:
ಕಾರ್ಯ ನಿಮಿತ್ತ ಎಲ್ಲೋ ಹೋಗಿದ್ದೆ.  ವಾಪಸ್ ದಿಲ್ಲಿಗೆ ರೈಲ ಪ್ರಯಾಣ.. ಅಪ್ಪರ್ ಬರ್ಥ್...  ಯಥಾಪ್ರಕಾರ ನಿದ್ದೆ .. ಅಲಾರಮ್ಮು ಬೇಡ ಈ ಸಲ ಹೇಂಗದ್ರೂ ನಯಿದಿಲ್ಲಿ ಲಾಸ್ಟ್ ಸ್ಟೇಷನ್ನು ಹೇಳಿ ಧೈರ್ಯ. ಅಚಾನಕ್ಕಾಗಿ ಸುಖನಿದ್ದೆಯ ಮಧ್ಯ ಒಬ್ಬ ಎಬ್ಸದ ಸತ್ತಂವಾ..‌ "ಓಯೇ ಪೆಹಲವಾನ್ .. ಜಾಗೋ..  ದಿಲ್ಲಿ ಚಲಾ ಗಯಾ .. ವಾಶೀಂಗ್ ಮೇ ಗಾಡೀ ಖಡೀ ಹೇ" ಅಂದ. ಕೊನೆಯ ಸ್ಟೇಷನ್ನಲ್ಲಿ ರೈಲು ನಿಂತು ಎಲ್ಲಾ ಇಳಿದ ಮೇಲೆ ಟ್ರೇನು ವಾಶಿಂಗ್ ಲೇನಿಗೆ ಹೋಗಿ ನಿಲ್ತು.. ಅಲ್ಲಿಂದ ನಡ್ಕಂಡು ಹತ್ರದ ಮುಖ್ಯರಸ್ತೆಗೆ ಬಂದು ಅಟೋ ಹಿಡ್ಕಂಡು ಮನೆಗೆ ಬಂದೆ.. ಯಮ್ಮನೆದ್ರದ್ದು ಅದೇ ಪ್ರಶ್ನೆ 
" ಟ್ರೇನ್ ಲೇಟ?" 
ಯಂದೂ ಅದೇ ಉತ್ರ "ಹೌದೇ... ಇಲ್ಯೇ ಸಾಯ್ಲಿ"...  ಒಳಗೊಳಗೇ ನಗೆ 😂😜

ನಿದ್ರೆ ವಂದು ವರ ಯಂಗೆ 😂😂
-ಶ್ಯಾಂ ಭಟ್, ಭಡ್ತಿ
2 ಜೂನ್ 2022, ಹವಿಹಾಸ್ಯ - ಲಘುನಗು 

ಚಿಪ್ಪಿಹಕ್ಕಲ ಬಸ್ಸು

ತಿರ್ಗಾಟದಲ್ಲಿ ನಗೆ 
       ಕಾಲೇಜು ದಿನಗಳಲ್ಲಿ ಮನೆ ಮೇಲೆ 8:40 ಕ್ಕೆ ಚಿಪ್ಪಿಹಕ್ಕಲ ಬಸ್ಸು ಬತ್ತಿತ್ತು. ನಾನು ಯೋಳದೇ ಯೋಳೂಮುಕ್ಕಾಲಿಗೆ. ಆಸ್ರಿ‌ ಕುಡದು, ನಿತ್ಯಕರ್ಮ ಮುಗ್ಸಿ, ಮಿಂದ್ಕಂಡು, ದೇವರ ತಲೆ ಮೇಲೊಂದು ಹೂವ ಹೊತಾಕಿ, ಗಂಟೆ ತೂಗಿ ಪ್ಯಾಂಟ್ ಹಾಕಕಾರೇ ಶ್ರೀಧರ ಮಡವಾಳ (ಬಸ್ಸಿನ ಡ್ರೈವರ) ಫರ್ಲಾಂಗ್ ದೂರದಿಂದ ಬೋಂಕ್ ಬೋಂಕ್ ಮಾಡ್ತಿದ್ದ. ಅವಂಗೆ ಗೊತಿದ್ದು.. ಓಡಿ ಬಂದು ಬಸ್ ಹತ್ತಂವಾ ಇಂವ ಹೇಳಿ. ಹೆದ್ದಾರಿ ಹತ್ತಿ ಓಡಿ ಬಪ್ಪದ ನೋಡಿರೂ ಗಾಡಿ‌ ನಿಲ್ಸಿ ಕರ್ಕಂಡು ಹೋಗ್ತಿದ್ದ ಪಾಪಾ. ಉಸ್ರು ಬಿಡ್ತಾ  ಬಸ್ ಹತ್ತಿದ ಗಳ್ಗೆಲಿ ಶ್ರಿಪಾದಣ್ಣ (ಕಂಡಕ್ಟರ) "ದಿನಾ ವಂದ್ ಹತ್ ನಿಮಿಷ ಬೇಗ ಏಳೂಲಾಗ್ತಿಲ್ಯನ ಶಾಮ"
"ಥೋ ದಿನಾ ಇದೇ ಕಥೆ ಆಗೋತಲಾ" 
"ನಾಳಿಂದ ನಿಲ್ಲಸ್ತ್ನಿಲ್ಯೋ ಗಾಡಿಯ"  ಹೇಳೆಲ್ಲ ಹೇಳ್ತಿದ್ದ... ನಾ 'ಹೀ' ಹೇಳಿ‌ ಕಿಸೀತಿದ್ದೆ. ಉತ್ರ ಕೊಡದಾದ್ರೂ ಎಂತ! 

ನಮ್ಮನೆ ಹತ್ರದ ಸ್ಟಾಪಿಗೆ (ಕೊಳಪೆಹೊಂಡ) ಹೋಗಿ ನಿಂತ ದಾಖಲೆನೇ ಇಲ್ಲೆ ಯಾನು. ಈ ಕಂಡಕ್ಟರಣ್ಣಯ್ಯ ಪಾಪ ದಿನಾ ಹೇಳ್ತ ಹೇಳಿ ಆವತ್ತೊಂದಿನ ಸ್ಟಾಪಿಗೇ ಹೋಗಿ ನಿಂತುಬಿಟಿದ್ದಿ. ಬಸ್ ಹತ್ತಿದ್ದೇ ಡ್ರೈವರ ಕಂಡಕ್ಟರನ ಹತ್ರ ಹೇಳ್ತಾ "ಓ‌ ವಡ್ಯಾ, ಇವತ್ತು ಸೂರ್ಯ ಯಾಬದಿಗೆ ಹುಟ್ಟಾನೆ?! ...‌ಮಾಸ್ತರ್ ಮನೆ ಮಾಣಿ ಕೊಳಪೆಹೊಂಡಕ್ ಬಂದ್ಬುಟಾನೆ...‌ ಪ್ರಳಯ ಹತ್ರ ಬಂತನ್ರೋ !!?" 😂😂😜😝

ಅವ್ಕಿಬ್ರಿಗೂ ಆಗ ನನ್ನ ಮೇಲಿಪ್ಪ ಕಾಳಜಿಗೂ, ನನ್ನಪ್ಪನ ಮೇಲಿಪ್ಪ ಅವರ ಗೌರವಕ್ಕೂ ಸಂಬಂಧ ಇತ್ತು. ಅವರ ಮೈಮನಗಳು ಸದಾ  ಹಾಯಾಗಿರಲಿ 🙏🙏😍💕

- ಶ್ಯಾಂ ಭಟ್, ಭಡ್ತಿ
1 ಜೂನ್ 2022, ಹವಿಹಾಸ್ಯ - ಲಘುನಗು

ಬಾಂಬ್ ಬ್ಲಾಸ್ಟ್


#ತಿರ್ಗಾಡೂಲೋದಾಗ_ನಗ್ಯಾಡೂಯೋಗ 
(ಈಗ ನಗೆ ಬತ್ತು.. ಆವಾಗ ಹಾರ್ಟ್ ಬಾಯಿಗೆ ಬಂದಿತ್ತು) 

ಮುಂಬೈ ಪುಲೀಸ್ - ದೇಶದಲ್ಲೇ ಅತೀ ಖತರ್ನಾಕ್‌ ಪೋಲೀಸ್ ಹೇಳಿ ಖ್ಯಾತಿ. 
2002-03 ಆಗಿರವು .. ಮಾಯಾನಗರಿಯ ಲೋಕಲ್ ಗಳಲ್ಲಿ   ಬಾಂಬ್ ಬ್ಲಾಸ್ಟ್ ಆದ ಟೈಮಪ ಅದು. ಆ ದಿನ ಓನ್‌ಡ್ಯೂಟೀ ನಾಗಪುರಕ್ಕೆ ಹೊರಟಿದಿದ್ದಿ. ಸಂಜೆ 7:50 ರ ಟ್ರೇನ್ ಹಿಡಿಯವು ಹೇಳಿ CST ಲಿ ಇಳದು ನನ್ನ ಟ್ರೇನಿನ ಫ್ಲ್ಯಾಟ್ ಫಾರ್ಮಿನ ಕಡೆ ದೌಡ್ ಓಡತಾ ಇದಿದ್ದಿ.... 
ಅಷ್ಟರಲ್ಲಿ ಯನ್ನ ತಡೆದ ಒಬ್ಬ ಮಪುಸೇ ಹವಾಲ್ದಾರ. 
"ಎಟಾಚಿ ಮಧೆ ಕಾಯ್ ಬಗಾ " ಹೇಳೆಂತೋ ಮರಾಠಿಲಿ ಹೇಳ್ದ..
"ಹಾಂ?" ಅಂದಿ 
"ಎಟಾಚಿ ಮೇ ಕ್ಯಾ ಹೇ?" ಅಂದ ಹಿಂದಿಲಿ.. ಆಗ ಅರ್ಥಾತು. 
ಹೀಂಗೇ ಕುಶಾಲಿನ ಲೆಕ್ಕಕೆ  "ಬಾಂಬ್ ತೊ ನಹಿ ಹೇ ಭಾಯ್ ಸಾಬ್" ಹೇಳಿ ಹಲ್ಕಿಸದಿ... ಅದೇ ನಾ‌ ಮಾಡಿದ ದೊಡ್ಡ ತಪ್ಪು ಹೇಳಿ ಮುಂದಿನ ಮೂರು ತಾಸಿನ ಮೇಲೆ ಅರ್ಥಾತು. 

"ಖೋಲೋ ಖೋಲೋ" ಅಂದ. 
ಸರಿ ಅಮಾಯಕನಂಗೆ ತೆಗದು ತೋರಸ್ಬುಟಿ .. ಅದರಲ್ಲಿದಿದ್ದು... ನಮ್ಮ ಡೆಂಟಲ್ ಮಶೀನಿನ ಕೆಲವು ಸರ್ಕೀಟ್ ಬೋರ್ಡ್ ಗಳು, ರಿಮೋಟು ಮತ್ತೆ ಟೂಲ್ಸು. ಯಂಗೆಂತಾ ಗೊತಿತ್ತು ಈ‌ ಪುಣ್ಯಾತ್ಮ ಅದನ್ನ ಬಾಂಬ್ ತಯಾರಿಕೆಯ ಸಾಧನ‌ ಹೇಳಿ ತಿಳ್ಕಂಗು ಹೇಳಿ!! 😳😳

    ಮದಾಲು ಗಚ್ಚಾಗಿ ಯನ್ನ ರಟ್ಟೆ ಹಿಡದವನೇ, ನನ್ನ  ಎಟಾಚಿ ದೂರ ಇಡು ಅಂದ. 
"ಪೀಂ ಪೀಂ‌ ಪೀಂ" ಹೇಳಿ ಶಿಟೀ ಹೊಡದೇಬುಟ.. ಪೋಲೀಸನ ರಟ್ಟೆ ಶಕ್ತಿ ಮುಂದೆ ಯಂದೆಂತಾ.?! ಅಲ್ಲಾ ತಪ್ಪಸ್ಗಳವು ಹೇಳ ಯೋಚ್ನೆ ಏನೂ ಬಂಜಿಲ್ಲೆ ಯಂಗೆ. 
     ತಕ್ಷಣ ಅಲ್ಲಿ ಒಂದು ಇಡೀ ಬಟಾಲಿಯನ್ನೇ ಒಟ್ಟಾಗ್ಬುಟ.  ಅಷ್ಟೆಲ್ಲಾ ಜನ, ಅವರ ಕೈಯಲ್ಲೆಲ್ಲಾ ಹೆದರ್ಕಂಬಂತಾ ಖತರ್ನಾಕ್ ಬಂದೂಕುಗಳು, ಮಶೀನ್ ಗನ್ನುಗಳು. ಆ ಕ್ಷಣದಲ್ಲಿ ಎಂತೆಂತೋ ಕ್ರಿಮಿನಲ್ ಸಿನೆಮಾ ಸೀನ್ ಗಳು ನೆನಪಾಗೋತು.. ವಟ್ಟೂ ಯನ್ನ ಬಾಂಬ್ ಬ್ಲಾಸ್ಟ್ ಕೇಸಲ್ಲಿ ಫಿಟ್ ಮಾಡಬುಡ್ತ ಇವು.. ಅಪ್ಪ ಅಬ್ಬೆಗೆ ಹೆಂಗೆ ಮುಖ ತೋರ್ಸದು? ಯನ್ನ ವುಡ್‍ಬೀ ಗೇ ಹೆಂಗೆ ಸಮಜಾಯ್ಸದು !! ಹೇಳೆಲ್ಲವಾ 

ಪರಿಪರಿಯಾಗಿ ಬೇಡಕಂಡಿ. ನಾನು ಓನ್ ಡ್ಯೂಟಿ ಹೋಗ್ತಾ ಇಪ್ಪಂವ.. ಇದ್ನೋಡಿ ಯನ್ನ ಐ ಕಾರ್ಡೂ.. ಆದ್ರೂ ಕೇಳದ್ದೇ ನನ್ನ ಅಲ್ಲೇ ಸೂಟಕೇಸ್ ಜೊತೆಲೇ ಕೂರಸಬುಟ... ಸುತ್ತಲೂ ಬಟಾಲಿಯನ್ನು. ಪೋನ್‌ ಮಾಡನ ನೋಡ್ದಿ..‌ ಯನ್ನ ಮೊಬೈಲ್ ಕಸ್ಗಬುಟ. 

ಕಡಿಗೆ ಅಂತೂ ಕಾಡೀ ಬೇಡಿ ತೀಡಿದ ಮೇಲೆ  ಅವರಲ್ಲೇ ಒಬ್ಬಂಗೆ ಕನಿಕರ ಬಂತಕು.    
ಪೋನ್‌ ಮಾಡಲೆ ಬಿಟ್ಟ.‌ ಫೋನ್‌ ಮಾಡಿರೆ ಯನ್ನ  ಸೀನಿಯರಾಗ್ಲೀ, ಬಾಸಾಗ್ಲೀ ಪೋನ್ ಎತ್ತಿದ್ವಿಲ್ಲೆ.‌ ಕಡಿಗೆ ಒಬ್ಬ ಮರಾಠಿ ಡಾಕ್ಟರಿಗೆ ಪೋನ್‌ಮಾಡಿ ಅವ ಭರವಸೆ ಕೊಟ್ಟ ಮೇಲೆ ಬಿಟ್ಟ. 
(ಈಗ ನಗೆ ಬತ್ತು ದುಖ್ ತಿಂದೋಪ್ಲೆ 😂 )

- ಶ್ಯಾಂ ಭಟ್, ಭಡ್ತಿ
1 ಜೂನ್ 2೦22, ಹವಿಹಾಸ್ಯ - ಲಘುನಗು

ಕಾರ್ಯದ ನಡುವೆ ನಗು

#ಲಘುನಗು -3 

ಜಸ್ವಂತನ ವಸ್ವಂತ
------------------------
     ಕೆಲಸದ ನಡುವೆ ನಗೆ ಮೂಡಿಸಿರ್ತು ಕೆಲ ಮಾತುಗಳು... ಘಟನೆಗಳು.. ಪ್ರಸಂಗಗಳು.

        ನಮ್ಮ ಆಪೀಸಲ್ಲಿ ಯಂಗೆ ಒಬ್ಬ ಅಸಿಸ್ಟಂಟ್ ಇದ್ದ... ಹೆಸರು ಜಸ್ವಂತ. ಮಹಾನ್ ವಾಕ್ಚತುರ.. ಚಾರ್ವಾಕ. 'ತಗ ಇದೊಂದು ಕೋರಿಯರ್ ಮಾಡು' ಅಂದ್ರೆ... "ಸರಿ ಸರ್.. ಎಡ್ರೆಸ್ ಬರ್ಕೊಡಿ" ಅಂಬ. (ಎಡ್ರೆಸ್ ಬುಕ್ ಲ್ಲಿ ಎಡ್ರೆಸ್ ಬರ್ಕಂಡಿರ್ತು... ಅದ್ನ ಬರೆಯಲೆ ಆಳಸಿ ಅಂವಾ !!) 😳
'ನಿನ್ನ ಖರ್ಚಿನ ಲೆಕ್ಕ ಕೊಡು' ಅಂದಿ ಒಂದಿನ 
"ಸರೀ ಸರ್ ಬರ್ಕಳಿ" ಅಂದ.. (ನಾನೇ ಬರಿಯದಾದ್ರೆ ನೀ ಎಂತಕಿದ್ದೆ ?! ನಾ ಎಂತ ನಿನ್ನ ಕಾರಕೂನನ ?) 😳

     ಆ ದಿನ "ನಾಳೆ ಬೆಳಗ್ಗೆ ಬೆಳಗ್ಗೆ ಬೇಗ ಒಂದು ಸೈಟ್ ವಿಸಿಟ್ಟಿಗೆ ಹೋಗವು ಬೆಳಗ್ಗೆ 8 ಗಂಟಿಗೇ ಬಾ" ಅಂದಿ... "ಸರ್ ಹೋಗ್ತಾ ಹೋಗ್ತಾ ನನ್ನೂ ಪಿಕ್‌ಅಪ್ ಮಾಡ್ಕಬುಡಿ" ಅಂದ. (ಎಲಾ ಇವನ! ನಾ ಇವನ ಡ್ರೈವರು!!😳) 

        ಎಷ್ಟೋ ಸಲ ಯಂಗೆ ಅನಿಸಿದ್ದಿದ್ದು... ಅಲಾ ಅಂವ ಯನ್ನ ನೌಕರನ.. ಯಾನೇ ಅವನ‌ ಆಳ ಹೇಳಿ ! 😳😬😇
"ಅಲಾ ಇದೆಲ್ಲ ನಾ ಮಾಡದಾದ್ರೆ ನೀ ಎಂತಕಾ ತಮ?" ಅಂದಿ. 
"ಸರ್ ಒಬ್ರಕ್ಕಿಂತ ಇಬ್ರಿದ್ರೆ ಒಳ್ಳೇದಲಾ ಸರ್" ಅಂದಾ 😬😅

     ಒಂದಿನ ತಡದು 11 ಗಂಟೆಗೆ ಆಪೀಸಿಗೆ ಬಂದ... "ಏನೋ‌ ಲೇಟು?" ಅಂದಿ. 
"ಸರ್ ರಾತ್ರಿ‌ ನಿದ್ದೆ ಸಮ ಆಗಿರ್ಲಿಲ್ಲ.. ಅದ್ಕೆ ಬೆಳಗ್ಗೆ ಮಲ್ಕೊಂಡೆ" 
"ಆಫೀಸಿಗೆ ಹೋಗ್ಬೇಕು ಅಂತ ನೆನಪಿಲ್ವ?"
"ನೋಡಿ ಸರ್ .. ನಿದ್ದೆ ಪೂರಾ ಆಗ್ದೋದ್ರೆ ಕೆಲಸ ಯಾವದೂ ಸರಿ ಆಗೂದಿಲ್ಲ ಅಲ್ವ ಸರ್?" (ಅಲಾ ಇಂವ ಯಾವಾಗ ಕೆಲಸ ಸಮ ಮಾಡಿದ್ದ ಹೇಳದು ಬ್ಯಾಡದ!!  ನಿದ್ದೆ ಸಮ ಆದ್ರೂ ಇಂವ ಮಾಡದೆಲ್ಲ ಹಾಳ್ಗೆಡಕೇಯಾ.. ಎಂತಾ ಅವನ ಬಾಯಿಗೆ ಬೀಳದು ಹೇಳಿ ಸುಮ್ನಾದಿ😬)  

       ಅದೊಂದಿವ್ಸ ಒಬ್ಬ ಟೆಕ್ನಿಶಿಯನ್ನು ಮತ್ತೆ ಇಂವ ಇಬ್ರೂ ಕೂತ್ಗ ಎಂತದೋ ಕೆಲಸ ಮಾಡ್ತಾ ಮಾತುಕಥೆ ಇವರದ್ದು... 
ಟೆಕ್ಕಿ - "ಅರೇ ಯಾರ್..  ನಮ್ಮನೆ ಟಿವಿ ವಂದು ಬದಲಿಸ್ಬೇಕು ಮಾರಾಯ" 
ಇಂವ - "ಏನು, ಎಂತಾ ಆಯ್ತು! ಹಳೇ ಟಿವಿಲಿ ಎಂತಾ ಪ್ರೊಬ್ಲೆಮ್?" 
ಟೆಕ್ಕಿ - "ಟೀವಿಲಿ ಪ್ರೊಬ್ಲೆಮ್‌ ಇಲ್ಲ ಮಾರಾಯ. ಹೆಣ್ತಿನೇ ಸಮಸ್ಯೆ.. ಬೆನ್ ಬಿದ್ಬುಟದೆ.. ತಲೆ ತಿಂತದೆ..  LED ಟಿವಿ ತರಬೇಕಂತೆ"
ಇಂವ - "ಯೇ..  ಹಂಗಾರೆ ಟಿವಿ ಅಲ್ಲ.. ಹೆಣ್ತಿ ಬದಲ್ಸುವ ಅವಶ್ಯಕತೆ ಅದೆ.... ಯಾವ್ದರಲ್ಲಿ ಪ್ರೋಬ್ಲೆಮ್‌ ಉಂಟೋ ಅದನ್ನ ಚೇಂಜ್ ಮಾಡ್ಬೇಕಾ ಮಾರಾಯಾ" 😅😝 

ಕ್ಯಾಬಿನ್ನಲ್ಲಿ ಕುಂತು ಇದನ್ನೆಲ್ಲ ಕೇಳಸ್ಗತಿದ್ದ ನನ್ನತ್ರನೂ ನಗೆ ತಡೆಯಲಾಜಿಲ್ಲೆ. 😅😅😅

✍️ - ಶ್ಯಾಂ ಭಟ್, ಭಡ್ತಿ.
26 ಮೇ 2022, ಹವಿಹಾಸ್ಯ  - ಲಘುನಗು

ಅವಸ್ಥೆ



Poornima ತ್ಗೆಯ ಕಥೆಯಿಂದಾಗಿ ನೆನಪಾತು .. ಮತ್ತೊಂದು ಘಟನೆ 

ವಂದು ಸಲ ಗೋಕರ್ಣದ ಹತ್ರ ಬಂಕಿಕೊಡ್ಲಲ್ಲಿ ವಾಲಿಬಾಲ್ ಟೂರ್ನಾಮೆಂಟ್ ಆಗಿತ್ತು. ನಮ್ಮೂರಿನ ಟೀಂನ ಸಂತಿಗೆ ಹೋಗಿದಿದ್ದೆ ನಾನು. ನಮ್ಮ‌ ಟೀಮಲ್ಲಿ ಮೂರೇ ಜನ ಬ್ರಾಹ್ಮಣರು ನಾವು. ನಾನೂ, ದೀಕ್ಷಿತ, ನಾರಣಣ್ಣ. 

ವಾಲೀಬಾಲ್ ಟೂರ್ನಮೆಂಟಲ್ಲಿ ಊಟದ ವ್ಯವಸ್ಥೆ ಇರ್ತು. ಹಂಗಾಗಿ ಎಲ್ಲರ ಸಂತಿಗೆ ಊಟಕ್ಕೆ ಹೋಗಿ ಕುಂತ್ಯ ನಂಗವೂವ. 

ಬಾಳೆ ಹಾಕುದಲ್ಲ ಅಲ್ಲಿನ ಪದ್ದತಿ.. ಕೊಡದು.. ಕೊಡವ್ವು ಗೌಡಗ ... ಇರಲಿ‌ ತೊಂದರಿಲ್ಲೆ ಹೇಳಿ ಕುಂತಾತು. ಬಡಸ್ವವೂ ಅವೇಯ ಹೇಳಿ‌ ಕಡಿಗೆ ಗೊತ್ತಾಗಿದ್ದು 😬

      ತಗ ಉಪ್ಪು ಹಾಕ್ದ 
ಉಪ್ನಕಾಯಿ ಆತು ಬಾಳೆಗೆ. ಗಂಡಸ್ರೇ ಬಡ್ಸಿದ್ದ.. ಹಂಗಾಗಿ ಗೌಡ್ಗ ಹೇಳಿ ಗೊತ್ತಾಜಿಲ್ಲೆ ಯಂಗಕ್ಕಿಗೆ.  ಅಲ್ಲೇ ವಂದೆರಡ್ ಜನ ಗೌಡತಿಯಕ್ಕ ಇದಿದ್ದ..‌
"ಯೇ ಗೌಡ್ತಿಯಕ್ಕ ಬಡಸ್ತ್ವನ?" ಅಂದ ನಮ್ಮ‌ ಮೆನೇಜರ ನಾರಣಣ್ಣ. 
 "ಬಹುಶಃ ಚೊಕ್ಕ ಮಾಡಲೆ ಸಾರ್ಸಲೆ ಆಗಿರವ ತಡ್ಯಾ" ಅಂದೆ ನಾನು 
"ಇಲ್ಯ ಟೂರ್ನಾಮೆಂಟಲೆಲ್ಲ ಭಟ್ರೇ ಅಡಗೆ ಮಾಡೂದು" ಅಂದ ಧೀಕ್ಷಿತ. 
ಹೀಂಗೇ 
ನಮ್ಮಲ್ಲೇ ನಮಗೆ ಸಮಾಧಾನ ಮಾಡ್ಕಂಡಾತು
      ತಗಳ ... ಗೌಡ್ತಿ ಅನ್ನದ ಚರಗೆ ಹಿಡ್ಕ ಬಂದೇಬುಡ್ತು. 
ಚರಗೆ ವಳಗೆ ಹುಟ್ಟೂ ಇಲ್ಲೆ... ಕೈಯಲ್ಲೇ ಬಡಸದು. 
ಯೇ ದೇವರೇ 
ಬೇಕ ನಮ್ಮ ಅವಸ್ಥೆ ?! ಎದ್ದು ಹೋಪಂಗೂ ಇಲ್ಲೆ 
" ಯೇ ನಂಗ್ ಬ್ಯಾಡದೋ ಊಟಾ" ಅಂದ ದೀಕ್ಷಿತ ಎದ್ದೇ ನಡದ. 
ನಾನೂ ಮ್ಯಾನೇಜರ ವಳ್ದ. ಮಕ‌ಮಕ ನೋಡ್ತವ 

ಅಷ್ಟತ್ತಿಗೆ ಬಂದು ನನಗಿಂತ ಮದಾಲು ಕುಂತ ಮೆನೇಜರಂಗೆ ವಂದ್‌ ಮುಷ್ಟಿ ಬಡಸೇಬುಟ್ಲು ಗೌಡ್ತಿ. 
ತಗ ಈಗ ನನ್ನ ಬಾರಿ.‌  ನಾನು ಎರಡೂ ಕೈಯ ಬಾಳೆ ಮೇಲೆ ಇಟ್ಗಂಡು "ಬ್ಯಾಡಾ ನಾ ಉಂಬೂದಿಲ್ಲ 
ಪಾಯ್ಸ ಅದೇ ? ಇದ್ರೆ ಬಡಸೂ" ಅಂದಿ

ಪಾಯಸ ಅಂತೂ ಕೈಯಲ್ಲಿ ಬಡ್ಸಲಾಗ್ತಿಲ್ಯಲೀ... ಹುಟ್ಟಲ್ಲೇ ಹಾಕಗು. ಹೆಂಗಂದ್ರೂ ಅಡಗೆ ಮಾಡದ್ದು ಭಟ್ರೇಯ ಹೇಳಿ ಧೈರ್ಯ ಯಂಗೆ ಧೀಕ್ಷಿತ ಕೊಟ್ಟಿದಿದ್ನಲೀ
 "ಅಬಬಬ ಅಣಾ ... ನಮಸ್ಕಾರ .. ಯೇನ್ ತಲೆಯೋ!" ಅಂದ ಮೆನೇಜರ ಎರಡೂ ಕೈ ಜೋಡಸಿ ಕೈಯೇ ಮುಗ್ದಿಗಿದ. 

ಅಷ್ಟರಲ್ಲಿ ತಗಳಾ ಹುಳಿ ತಂದು ಸುರ್ಗೇಬುಡ್ತು ಮತ್ತೊಂದ್ ಗೌಡತಿ ಅವನ ಬಾಳೆಯ ಅನ್ನದ ಮ್ಯಾಲೆ. ಮತ್ತೆ ಯನ್ನ ಮಕ ನೋಡ್ತ ಇಂವಾ 😝
ಆ ಮಕ ನಿಸ್ಸಹಾಯನಾಗಿ ಕೊಡ್ಲಿಗೆ ಬಿದ್ದವನ ನಮನಿ ಇತ್ತು.

    ಅಂತೂ ಪಾಯ್ಸ ಬಂತು.. ಪುಣ್ಯಕ್ಕೆ ಅದನ್ನ ಹುಟ್ಟಲ್ಲೇ ಬಡ್ಸಿದ್ದು ಗೌಡತಿ. ಅದನ್ನೇ ತಿಂದ ಶಾಸ್ತ್ರ ಮಾಡಿ ಎದ್ದು ಬಂದಾತು. ಮರ್ದಿನ ಮನೆಗೆ ಬಂದು ಜನಿವಾರ ತಗಂಡ್ರೂ ವನ್ನಮನೀ ಜಾತಿಗೆಟ್ಟ ಅನುಭವ ಸುಮಾರು ದಿನ ಇತ್ತು. 😝😝 

(ಯನ್ನ ಈ ಕಥೆಯ ಮತ್ತೆಲ್ಲೂ ಹೇಳ್ಕಂಬಂಗಿತ್ತಿಲ್ಲೆ 🙆)
🙏
- ಶ್ಯಾಂ ಭಟ್, ಭಡ್ತಿ
2 ಮೇ 2022, ಹವಿಹಾಸ್ಯ - ಲಘುನಗು

ಅಪ್ಪಿಅಣ್ಣ

ಯಮ್ಮನೆ ಅಪ್ಪಿ ಅಣ್ಣ.‌ 
#############
        ಅವನ ಹೆಸರು ವೆಂಕಟ್ರಮಣ ಹೇಳಿ ಯಾರಿಗೂ ಗೊತ್ತಿಲ್ಲೆ.. ಇಡೀ ಊರಿಗೇ ಅಪ್ಪಿ ಅಣ್ಣ ಅಂವಾ. 
       ಯನ್ನಪ್ಪ ಹೋದಾಗಿಂದ ಸತತ 16 ವರ್ಷದವರಿಗೆ ಯನ್ನ ಅನುಪಸ್ಥಿತಿಲಿ ಯನ್ನಬ್ಬೆಯ ಹೆರಿ ಮಗನಾಗಿ ಸೇವೆ ಮಾಡಿದ ಪುಣ್ಯಾತ್ಮ ಅಂವಾ. ಯನ್ನಬ್ಬೆಯ ಬಲಗೈ ಅಂವಾ...  'ಅಪ್ಪಿ' ಅಂವಾ. 

    ಅವನೇ ಹೋಲ್ ಎಂಡ್ ಸೋಲ್ ಯಮ್ಮನೆಯ ಉಗ್ರಾಣದ ಮಾಲಿಕ.  5 ತಿಂಗಳ ಹಿಂದೆ ಯನ್ನ ಕಾಕನ ಅಂತ್ಯಕಾರ್ಯದ ದಿನಗಳ ಸುದ್ದಿ ಇದು. ಇಂವ ಬೆಳಬೆಳಗ್ಗೆ 5 ಗಂಟೆಗೆ ಬಂದ್ಬುಡ್ತಾ. "ಇನ್ನೂ ಯಜ್ರಿಲ್ಲೆ! ಸೂರ್ಯ ತಲೆಮೇಲೆ ಬಂದ...  ಅಕ್ಕಚ್ಚು ಮಾಡ್ತಿದ್ದೆ ಯಾರಿಗೆಲ್ಲ ಚಪ್ಪೆ?!? " ಕೇಳ್ತ. ಅವನ ಗುಡ್ ಮಾರ್ನಿಂಗ್ ಹೇಳ್ವ ಪದ್ದತಿ ಅದೇಯ. 
      ಬೆಳಿಗ್ಗೆ ಆಸ್ರಿಗೆಯ ತಯಾರಿಗೆ ಮುಂಚಿನ ದಿನ ರಾತ್ರಿನೇ ಕೇಳ್ತ "ಅತ್ಗೇ ನಾಳೆ ಬೆಳಿಗ್ಗೆ ದಾಣಿಗೆ ಎಂತದೂ ?ಅಕ್ಕಚ್ಚಿಗ್ಗೆಂತದೂ?" 😝 
ಹಂಗೇ ರಾತ್ರಿ ಮನೆಗೆ ಹೋಗಕಾರೆ "ಎಲ್ಲಾ ಬಿದ್ಕಳೀ.. ಬೆಳಗಪ್ಪದ್ರೊಳಗೆ ಅಡ್ಗೊರಳ ಹಾಕಡಿ ಮತೇ" ಹೇಳ್ತ..‌  ಅವನ ಗುಡ್ ನೈಟ್ ಹೇಳ್ವ ಸ್ಟೈಲ್ ಇದೇಯ. 

    ಹೀಂಗೇ ಯಂಗಕ್ಕೆಲ್ಲ ಅಕ್ಕಚ್ಚು ಹೊಯ್ದಾದ ಮೇಲೆ "ದಾಣಿ ತಯಾರಿದ್ದೂ .. ಪಟಾಪಟಾ ಬನ್ನಿ.. ತಿಂದಾರೂ ಹಾಳ ಮಾಡ್ವ" ಅಂಬ. 
     ಅದಾದ ಮೇಲೆ ಅವಂದು ಊಟದ ಅಡಿಗೆ ತಯಾರಿ.. "ಅತ್ಗೆ ಪಟಪಟ ಮುರಗು ಕೊಚ್ಕೊಡೀ.. ಹಿಂಡಿ ಬೀಸ್ವವು ಯಾರು.. ಕಡೆಗೆ ಕರೆಂಟು ರಾಮಚಂದ್ರಪ್ಪಚ್ಚೀದಲ್ಲಾ" ಅಂಬ (ರಾಮಚಂದ್ರಪ್ಪಚ್ಚೀ ಅವನ ಅಪ್ಪ).  ಅವನ ಮಾತಿನ ಧಾಟಿನೇ ಹಂಗೆ.‌ ಇಡೀ ದಿನ ಖುಷಿಯಾಗಿಪ್ಪ.. ಉಳಿದವರನ್ನೂ ನಗ್ಯಾಡಸ್ತಾ ಇಪ್ಪ ವ್ಯಕ್ತಿತ್ವದ ಈ ನಮನಿ ಕುಶಾಲಗುಣ ಹುಟ್ಟಾ ಬಂದದ್ದೇಯಾಗಿಕ್ಕು 😬. 

      11 ನೇ ದಿನದ ಕಾರ್ಯಕ್ರಮ ಆ ದಿವ್ಸ. ಆ ದಿನ ಪಂಚಗವ್ಯ ಕೊಟ್ಟು, ಜನಿವಾರ ತೊಡ್ಸಿ ಮನೆ - ಮನಷರನ್ನೆಲ್ಲ ಶುದ್ಧ ಮಾಡಾದ ಮೇಲೆ ಒಂದು ಆಸ್ರಿಗೆ ತಗಂಡ ಭಟ್ರು ಉಳಿದ ಕಾರ್ಯಗಳ ಮುಂದುವರಿಸ್ತ್ರು. ರಾಶೀ ಕೆಲಸ ಇರ್ತು ಆ ದಿನ ಪಾಪಾ.
    ಎಲ್ಲರಕಿಂತ ಮದಾಲು ಅಪ್ಪಿ ಅಣ್ಣ ಶುದ್ಧ ಆಗವಲೀ... ಭಟ್ರಿಗಿಂತ ಜಾಸ್ತಿ ಇವಂಗೇ ಗಡಬಡೆ.. "ಭಟ್ರೇ ಇವತ್ತೇ ನೀವು ಗೋಮೂತ್ರ ಗೋಮಯ ಹಾಕತ್ರ ?" ಕೇಳ್ದಾ.
ಇವನ ಭಾಷೆ ಬಲ್ಲ ಭಟ್ರು 
"ಥೋ ಬಾರೋ ಮಾರಾಯಾ ನೀ ಮದಾಲು ತಗ.. ಹಂಗೇ ಹಗ್ಗ ಹಾಯ್ಕ" ಹೇಳಿ ಒಂದು ಜೋಡಿ ಜನಿವಾರನೂ ಕೊಟ್ರು... ಮಾತಿಗೆ ತಿರಗೇಟೂ ಕೊಟ್ರು. ಅಪ್ಪಿ ಅಣ್ಣ ಶುದ್ಧನಾಗಿ ಸೊಟಗ ಹೆಗಲೇರ್ಸಿ ಹೊಂಟ. 

   ಸಲ್ಪ ಹೊತ್ತಿಗೇ ಭಟ್ರು ಗಡಬಡೆ ಮಾಡದ್ರು.. "ಅಪ್ಪಿ ಅಣಾ  ಹಾ.. ಚಾ ಮಾಡು ಬಿರಿ ಬಿರಿನೆ.. ತಡಾ ಆತು.. ಆವಾಗೇ ಹಗ್ಗ ಹಾಯ್ಕಂಜ್ಯಲಾ" ಅಂದ್ರು.  
    ಐದೇ ನಿಮಿಷಕ್ಕೆ ಅವಲಕ್ಕಿ ಉಪ್ಪಿಟ್ಟು (ದಾಣಿ) ಮತ್ತೊಂದು ರವೆ ಪಾಯ್ಸ ಬಡಸ್ಕಂಡು ಅಪ್ಪಿ ಅಣ್ಣ... 
"ಭಟ್ರೇ ದಾಣಿ ಅಕ್ಕಚ್ಚೂ" ಅಂದಾ. 
     ಆಸ್ರಿ ಕುಡ್ಯಕಾರೆ "ಹೊಸ ನಮನಿ ರುಚಿ ಬಂಜಪಾ ರವೆ ಪಾಯ್ಸ ಅಪ್ಪಿ ಅಣಾ... ಮತ್ತೊಂದ್ ಸಲಿ ತಗ" ಅಂದ್ರು ಭಟ್ರು.
      "ಭಟ್ರೆ .. ನೀವ್ ಗಡಬಡೆ ಮಾಡದ್ರಿ.. ಗಡಬಡೆ ಮಾಡ್ಕಳಡಿ.. ಸಕಾಶ ತಗಳಿ... ಪಾಯ್ಸಲ್ಲ,  ಶಿರಾ ಅದು.. ಇವತ್ತೇ ಮಾಡದ್ದು...  ಒಂದೇ ಶೆಕೆ ಮದ್ಲೇ ಇಳಿಸಿದ್ದೆ" ಅಂದಾ ಅಪ್ಪಿ ಅಣ್ಣ. 🤣😂 

ಭಟ್ರ ಬಾಯಿಂದ ಮಾತೇ ಹೊರ್ಳಿದ್ದಿಲ್ಲೆ.. ಬಾಯಲ್ಲಿದ್ದದ್ದು ಶಿರಾ ಹೇಳಿ ತಲೆಗೇ ಹೊಳದ್ದಿಲ್ಲೆ😬😂😂 

🙏
- ಶ್ಯಾಂ ಭಟ್, ಭಡ್ತಿ 
(ಇಲ್ಲೇ ಹಲ್ಬಕಾರೆ ಮಾಡಿದ ಕಮೆಂಟುಗಳ ಸಂಘಟಿಸಿ ಒಂದು ರೂಪ ಕೊಟ್ಟಿದ್ದೆ ಅಷ್ಟೇ)
30/04/2022, ಹವಿಹಾಸ್ಯ - ಲಘುನಗು

ಛಾಯಕ್ಕನ ಛಾ



ಚಾಯಕ್ಕನ ಚಾ
*************
ಒಂದಾನೊಂದು ಕಾಲ ಅದು.
ಕಾಲೇಜಿನ ಗೋಲ್ಡನ್ ಡೇಸ್ ಮುಗ್ಸಿ ಚುಟ್ಪುಟ್ ನೌಕರಿ ಹುಡ್ಕಿ ಬೆಂಗಳೂರಿಗೆ ಕಾಲಿಟ್ಟ ಹೊಸ ದಿನಗಳು. ಮಹಾನಗರದ ಮಜ ಒಂದು ಬದಿಗಾದ್ರೆ..  ಬಪ್ಪ ಚೂರುಪಾರು ಸಂಬಳದಲ್ಲೇ  ಆ ನಗರದಲ್ಲಿ ದಿನದೂಡುವ ಅನಿವಾರ್ಯತೆ. ಹಂಗಾಗಿ ಪ್ರತೀ ಆದಿತ್ವಾರ ಎಲ್ಲಿ ಪರಾನ್ನ ಸಿಕ್ಕಗು ಹೇಳಿ ಕಾಯ್ತಾ ಇರ್ತಿದ್ದ ನನ್ನಂತ ಬ್ರಹ್ಮಚಾರಿ ಹುಡಗ್ರು. 

ತಿಂಗಳ ಅಖೈರಿನ  ವಂದು ಆದಿತ್ವಾರ...  ನಾನೂ, ಜಮದಗ್ನಿ ಮತ್ತೆ ಮಾಣಿ ಮೂರೂ ಜನರ ಕಿಶೆಲಿ ಕವಡೆ ಕಾಸಿಲ್ಲದೇ ಪರಾನ್ನ ಹುಡ್ಕಿ ಹೊಂಟ. ಯಾರ ಮನೆಗೆ ಹೋಗಕಾತು?! 🤔 ಎಲ್ಲೂ ವಿಶೇಷ ಇಲ್ಲೆ.. ಕರೆಯ ಇಲ್ಲೆ. ಮಾಣಿನೇ ಐಡಿಯಾ ಕೊಟ್ಟಂವ.  "ಯೇ ಚಾಯಕ್ಕನ ಮನೆಗೆ ಹೋಪನ.. ರಾಶೀ ದಿನಾತು ಹೋಗದೇಯ". ಬೇರೆ ಉಪಾಯ ಹೊಳಿದೇ ನಾನೂ ಜಮದಗ್ನಿ ಇಬ್ರೂ "ಅಕ್ಕು ನಡೆ" ಹೇಳೇ ಹೊಂಟ. 

ಚಾಯಕ್ಕನ ಮನೆ ಮುಟ್ಟಿದ್ದು ಅಪರಾಹ್ನ 2 ಗಂಟೆಗೆ. ಪೇಟೇಲಿಪ್ಪ ಜನರದ್ದು ಶಿಸ್ತಿನ ಜೀವನ. ಮೇಲಿಂದ ಚಾಯಕ್ಕನ ಮನೆ ಬಾವ ಲೆಕ್ಚರು. ಅಂವ ಮನಷ್ರು ಉಂಬೊತ್ತಿಗೇ ಉಂಬವನಕು. ಅವ್ರ ಮನೆಲಿ ಊಟ ಮಾಡಿ ಪಾತ್ರೆ ಕೌಂಚಿ ಆಗೋಜು ಹೇಳಿ ನಮಗೆಂತ ಗೊತ್ತಿತ್ತು?! ಹೊಟ್ಟೆಲಿ ಯಲಿ ವೋಡಾಡ್ತು ಯಂಗಕ್ಕೆ. 

ಹೋಗಿ ಓರ್ಮನೆ ಸರಕುರ್ಚಿ ಮೇಲೆ ಕುಕ್ರಸಿದ್ದೇಯ  'ಆಸ್ರಿಗೆ' ಕೇಳ ಬದಲಿಗೆ .. "ಏನ್ರೋ ಈ ಬದಿಗೆ ಸವಾರಿ ..‌ ಅದೂ ಮೂರ್ಜನ ಬ್ರಹ್ಮಚಾರಿ ಬಟ್ಟಕ್ಕ ಹೊಂಟಿದ್ರಿ?!" ಅಂದಾ ಬಾವಾ.  'ಮೂರ್ ಜನ ಹೊಂಟ ಕೆಲಸಾಗ್ತಿಲ್ಲೆ ಅಂಬ್ವಪ' ಹೇಳೂ ಸೇರಸ್ತಿದ್ನನ ಅಂವಾ... ಅಷ್ಟರಲ್ಲಿ ಒಳಗಿದ್ದ ಚಾಯಕ್ಕ ಹೆರ್ಗೆ ಬಂದು ಪುಣ್ಯ ಕಟ್ಕಂಡತು. 
"ಅತ.. ಈ ಬದಿಗೆಲ್ಲಿ ಬೆಳಗಾತ್ರೋ? ಬನ್ನಿ ಬನ್ನಿ ಆಸ್ರಿಗೆ? ಊಟಾಜ?" ಅಂತೂ. 
'ಎ ಹೆ ಎ ಬೇಡ' ಹೇಳಂವಾಗಿತ್ತು ನಾನು .. ಅಷ್ಟರಲ್ಲಿ ಈ ಜಮದಗ್ನಿ ಬೆನ್ನಿಗೆ ಚೂಂಟದ... 'ಸುಮ್ಮಂಗಿರಾ' ಹೇಳಿ ಅವನ ಸಂಜ್ಞೆ ಅದು. 
ಈ‌ ಸುಟ್ ಮಾಣಿ ಸುಮ್ಮಂಗಿರವ ಬ್ಯಾಡದ
"ಇಲ್ಲೆ ಎಂತದೂ ಬ್ಯಾಡಾ... ಉಂಡ್ಕಂಡೇ ಬಂಜ ನಂಗ" ಹೇಳವ.... ಚಾರ್ವಾಕ ಮಾಣಿ. 😳. ಇವತ್ ಮಾಣಿಯ ಬೊಜ್ಜ ಗ್ಯಾರಂಟೀ ಹೇಳಿ ಅಂದಾಜಾಗೋತು ಯಂಗೆ. ಇವ್ರಮನಿಂದ ಹೆರಬಿದ್ದ ಮೇಲೆ ಈ ಜಮದಗ್ನಿ ಆ ಮಾಣಿಯ ಬಿಟ್ರಲ್ದ! ಹೇಳಿ ಕಲ್ಪನೆ ಮಾಡ್ಕಂಡು ಮನಸಲ್ಲೇ ಬಂದ ನಗೆಯ ತಡ್ಕಂಡು ಜಮದಗ್ನಿ ಬದಿಗೆ ನೋಡಿರೆ ಅವ ನಗ್ಯಾಡ್ತ್ನೋ, ಶಿಟ್ಟಲ್ಲಿದ್ನೋ, ತೀಡತ್ನೋ ವಂದೂ ಅಂದಾಜಾಗದ ಮಕಾ. ಚಾಕೂಗೀಕೂ ಇದಿದ್ರೆ ಮಾಣಿಗೆ ಹಾಕೇಬಿಡ್ತಿದ್ದ ಅಂವಾ.
   ಒಬ್ರ ಮುಖ ಒಬ್ರು ನೋಡಿ ಬಪ್ಪ ನಗೆಯ ಅಬಗತ್ಗಂಡ... ನಂಗಳ ಈ ಸಂಜ್ಞಾ ಭಾಷೆಯ ಅಕ್ಕ ಬಾವ ಗ್ರೆಂಸಿದ್ವಿಲ್ಲೆ ಹೇಳೂಲೆ ಬತ್ತಿಲ್ಲೆ. 

ಚಾಯಕ್ಕ "ಚಾ ಮಾಡ್ತೆ ಹಂಗರೆ" ಅಂತು. ಆಗಲಪ ಅದಾರದು.
ಚಾ ಬಂತು. ಸಂತಿಗೆ ಕರೆ, ಬಿಸ್ಕೀಟು. ಆ ಪ್ಲೇಟನ್ನ ಗಬಕ್ಕನೆ ತಗಂಡು ಅಷ್ಟೂ ತಿಂದಬುಡನ ಹೇಳಷ್ಟು ಹಶಿವು ನಂಗಾದ್ರೆ ... 'ಇದು ನಂಗೊಬ್ಬಂಗೇ ಸಾಕಾಗ' ಹೇಳೂನಮ್ನಿ ಮುಖಚರ್ಯೆ ಜಮದಗ್ನಿದು. ಮಾಣಿಯ ಬದಿಗೆ ಇಬ್ರೂ ಕಣ್ಣಾಯ್ಸಿರೆ ಪ್ಲೇಟ್ ಬದೀಗೇ ದುರುಗುಟ್ಕ ಗುರಾಯಿಸ್ತಿದ್ದ ಮಾಣಿ. ಕಿಸಕ್ಕನೆ ನಗೆ ಬಂದ್ರೂ ಮತ್ತೆ ಅಬಗತ್ಗಂಡ ನಂಗವಿಬ್ರೂವ. 

ಊಟಂತೂ ಸಿಕ್ಕಿದ್ದಿಲ್ಲೆ... ಗನಾ ನೀರ ಕುಡದು.. ಆ ಚಾಯಕ್ಕನ ಚಾ ನಳಗಿ, ನಾಕ್ ಕಾಳ ಕರೆ ತಿಂದರೆ... "ಪ್ಲೇಟ್ ಖಾಲಿ ಮಾಡ್ರ ತಮಾ.. ನಿಂಗಕ್ಕೇ ಇಟ್ಟದ್ದು" ಹೇಳಿ ಸತ್ಕಾರ ಬೇರೆ ಮಾಡ್ತು ಚಾಯಕ್ಕ. 
"ಅಕ್ಕು ... ಇಲ್ಲೆ... ಬೇಡ ಬೇಡ ... ಸಾಕು.. ತಗಂಡೆ" ಹೇಳಿ ಬಿಡ್ಯ ಮಾಡ್ಕಳಕಾತಲೀ.... ಪ್ಲೇಟಲ್ಲಿಟ್ಟದ್ದಷ್ಟೂ ಬರಗಿ ತಿಂದ್ರೆ ನಂಗ ಹೋದ ಮೇಲೆ "ಹಪ್ ಚಪ್ಪರ್ಕ ಪೋರಗ" ಅಂದ್ರೆ ಚಾಯಕ್ಕ?! 😬 

ಅಂತೂ ಬಂದ ಕೆಲಸ ಆಜಿಲ್ಲೆ ಹೇಳಿ ಹಶಿದ ಹೊಟ್ಟೆಲೇ ಸವಾರಿ ಎಬ್ಬಸ್ಗ ಬಂದಾತು....
ಬರಕಾರೆ ಮಾಣಿ ಬುರ್ಡೆಗೆ  ಸಮಾಧಾನ ಅಪ್ಪಷ್ಟು ಗನ್ನಾ ನಾಕ್ ತಟ್ಟಾತು.... ಅಬಗತ್ಗಂಡಿದ್ದ ನಗೆಯನ್ನೆಲ್ಲ ಖುಲ್ಲಂ‌ ಖುಲ್ಲಾ ಬಿಟ್ಟಾತು. 

ಜಮದಗ್ನಿ ಕೈ ತಿರ್ಪಿದ ಹೊಡ್ತಕ್ಕೆ ನಾಕ್ ದಿನ ಮಲಗಿದ್ದ ಮಾಣಿ. ವರ್ಷಗಟ್ಲೆ ಕೈ‌ ನೋವು ಹೇಳ್ತಿದ್ದ ಅಟ್ರಕಾಣಿ. 😝😬😂 

🙏
- ಶ್ಯಾಂ ಭಟ್, ಭಡ್ತಿ
22/04/2022, ಹವಿಹಾಸ್ಯ - ಲಘುನಗು

ಅಜ್ಜಿ


       ತುಪ್ಪ ಬೆಲ್ಲದ ರುಚಿ ಗೊತ್ತಿಲ್ದೋದ ಹೈಗರಿಲ್ಲೆ.  ದಿನ ಬೆಳಗಾದರೆ ದೋಸೆ ಸಂತಿಗೆ ತುಪ್ಪ ಬೆಲ್ಲ ಹವ್ಯಕರ ಸಾಮಾನ್ಯ ಆಸರಿಗೆ. ಬೆಳಗಿನ ತಿಂಡಿಗೆ  'ಆಸರಿಗೆ' ಹೇಳದೇ ಸರಿಯಾದ ಹವ್ಯಕ ಶಬ್ದ. 

       ಶಣ್ಣುಡ್ರಿಗೆ ಸಾಮಾನ್ಯವಾಗಿ ಊಟ ಅಂದರೆ ವಾಯಾರ.. ಆಸರಿಗೇನೇ ಪ್ರೀತಿ. ಯಂಗೂ ಹಂಗೇಯ. ಬೆಳಿಗ್ಗೆ - ಮಧ್ಯಾಹ್ನ- ಸಂಜೆ ಹೇಳೆಲ್ಲ ಸಂಬಂಧಿಲ್ಲೆ..‌ ಇಡೀ ದಿನ ಊಟದ ಬದಲಿಗೆ ಆಸರಿಗೇ ಕೊಡ್ಲಾಗಿತ್ತು.. ಈ ದೊಡ್ಡವಕೆಲ್ಲ ತಲೆ ಇಲ್ಲೆ ಅನಸ್ತಿತ್ತು 😳
     ಸಂಜೆ ಶಾಲೆಮನೆ‌ ಬಿಟ್ಟು  ಮನೆಗೆ ಬಂದಕೂಡ್ಲೇಯ ಆ ಕ್ಷಣದ ದಿಡೀರ್ ಆಸರಿ - ಬೆಳಿಗ್ಗೆ ಎರೆದಿಟ್ಟು ಉಳಿದ ವಣಾ ದೋಸೆ ಅಥವಾ ವಣಾ ತೆಳ್ಳೇವು... ಜತಿಗೆ ತುಪ್ಪ-ಬೆಲ್ಲ.  ಬಡಸದು ಯಾರು? - ಅಜ್ಜಿ ! ಅಮ್ಮ ಹೇಳಿ ಕರೆಯದು ರೂಢಿ.  ಅದೇ ಕಾರಣಕ್ಕೆ ಈ ಅಜ್ಜಿ ಅಂದ್ರೆ ಯಂಗೆ ರಾಶೀ ಇಷ್ಟನೂವ... ಕಷ್ಟನೂವ !😀 

  ಮೇ ರಜೆಲೆಲ್ಲವ ಯಂಗಕ್ಕೆ ಸಂಜೆ 4 ಘಂಟೆಗಿಂತ ಮೊದಲೇ ಅರಕಲು ಗದ್ದೆ ಬೈಲಲ್ಲಿ ಆಟ ಆಡಲೆ ಹೋಪ ಗಡಬಡೆ.‌ ಆದರೆ ಅಜ್ಜಿಯ ಕಾನೂನಿನ ಪ್ರಕಾರ ಆಸ್ರಿಗೆ ಕೊಡಲೆ  5 ಗಂಟೆ ಆಗವು. ಮೊದಲೇ ಕೇಳಿದ್ರೆ... "ತಮಾ 5 ಘಂಟೆಯಾದ್ರೂ ಆಗ್ಲಿ, ಕಡೆಗೆ ಹಶ್ವಾಗೋಗ್ತು" ಹೇಳ್ತಿತ್ತು. ಒಂದು ವೇಳೆ ಆಸರಿ ಕುಡಿದೇ ಆಡಲೆ ಹೋದರೆ ಇದೇ ಅಜ್ಜಿ "ವಂದ್ ಹನೀ ಆಸರಿನೂ ಕುಡಿದೇ ಹೋಜ ಸುಟ್ ಪೋರಗ.." ಹೇಳೂ ಕಾಳಜಿ ಮಾಡ್ತಿತ್ತು. ಅಜ್ಜಿಯ ಈ 'ಘಂಟೆ'ಯ ಮಿತಿ ಯಂಗೆ ಮುಖ್ಯವಾಗಿ ಆಟ ಆಡಲೋಪಲೆ ಅಲವರಕೆಯಾಗಿತ್ತು. 

    ಆ ದಿನ ಈ ಸಂಕಟಕ್ಕೆ ವಂದು ಉಪಾಯ ಹುಡಕ್ದೆ. ಸುಮಾರು 4 ಘಂಟೆಯಪ್ಪ ಹೊತ್ತಿಗೇ ಗಡಿಯಾರದ ಮುಳ್ಳ 5 ಘಂಟೆಯಪ್ಪ ಹಂಗೇ  ತಿರುಗ್ಸದು. ಆಗ ಅಜ್ಜಿ ಆಸರಿಗೆ ಕೊಡ್ತಲೀ!.. ಹೇಳಿ ಲೆಕ್ಕ ಹಾಕ್ದಿ.  ಗೋಡೆ ಗಡಿಯಾರ ಸಸಾರಕ್ಕೆ ಕೈಮುಟ್ಟತಿತ್ತಿಲ್ಲೆ.‌. ಸರ್ಕಸ್ಸೇ ಮಾಡಕಾತು.‌  ಮನೆಲ್ಲಿದ್ದ ಒಂದೇ ಒಂದು ಎತ್ತರದ ಮರದ ಸ್ಟೂಲು - ಮಣಭಾರ.... ಅದನ ಹೇಂಗೆ ವಕ್ಕ ಬಂಜ್ನ ಈಗಲೂ ನೆನೆಸ್ಕಂಡ್ರೆ ಆಶ್ಚರ್ಯ ಆಗ್ತು. ಆ ಕಷ್ಟ ಯಂಗೇ ಗೊತ್ತು.‌ ಇದೆಲ್ಲ ಯಾರಿಗೂ ಕಾಣದೋದಂಗೆ ಮಾಡವು ಮತೇ. ಹಶವು ಮನಷ್ಯನತ್ರ ಎಂತೆಂತ ಮಾಡಸ್ತು ಹದಾ! 😝 

        ಅಂತೂ ಇಷ್ಟೆಲ್ಲ ಸರ್ಕಸ್ ಮಾಡಿ 4 ಘಂಟೆಗೇ "5 ಘಂಟೆಯಾತು ಅಮಾ... ನೀ ಆಸರಿ ಕೊಡ್ತ್ಯ ಇಲ್ಲ ನಾ ಹಾಂಗೇ ಉಪಾಸ ಹೋಗಿ ಸಾಯವ?"  ಹೇಳಿ ಭಾವನಾತ್ಮಕ ಪ್ರಶ್ನೆ ಹಾಕಿ... ಪಾಪ ಭಾವಾರ್ಥಿ ಅಜ್ಜಿ ಹತ್ರ ಆಸರಿ ಗಿಟ್ಟಸಗಂಡು  ಆಟ ಆಡಲೆ ಪಾರ್ಗೆಲೆ. 

     ಆಟ ಮುಗಿಸಿ ವಾಪಸ್ ಬರಕಾರೆ ರಸ್ತೆಯ ಮೇಲೆ ಡಾಕ್ಟರ್ ಮಾವನ ರಾಜದೂತ ನಿಂತಿದ್ದು.‌ ಮನೆಗೆ ಹೋಗಿ ನೋಡಿರೆ, ಅಜ್ಜಿ ಹಾಸಿಗೆಲಿ ಮಲಗಿದ್ದು. ಡಾಕ್ಟರ್ ಮಾವನೂ ಇದ್ದ‌. ಆಯಿಯ ಕೇಳ್ದಿ "ಅಮ್ಮಂಗೆಂತಾ ಆತೇ ಆಯಿ?" 😳

ಆಯಿ ಹೇಳಿದ್ದು.... 
     ನಾನು ಆಡಲೆ ಹೋದಮೇಲೆ ಅಜ್ಜಿ ಕೊಟ್ಟಿಗೆಗೆ ಹಾಲು ಕರೆಯಲೆ ಹೋಜಡ ಪಾಪ ಪ್ರತೀದಿನ ಹೋಪಂಗೇ (ಗಡಿಯಾರದ) 6 ಘಂಟೆಗೆ !! ಆದರೆ ಯನ್ನ ಯಾಪಾರ  ಗಡಿಯಾರ ಮುಂದಿತ್ತ ಇಲ್ಯ... ಹಾಲು ಕರೆಯ ಟೈಮಲ್ಲ. ಒಂತಾಸು ಮದ್ಲೇ ಹೋಜು ಅಜ್ಜಿ.  ಎಮ್ಮೆ ಚಾಳಿ ಮಾಡಿದ್ದು.... ಎಮ್ಮೆ‌ ಸೊರದ್ದಿಲ್ಲೆ - ಅಜ್ಜಿ‌ ಬಿಟ್ಟಿದ್ದಿಲ್ಲೆ.... ಮತ್ತೂ ಜಗ್ಗಿಕ್ಕು. ತಗ ಎಮ್ಮೆ ಒದ್ದಿಗಿದು - ಅಜ್ಜಿ ಬಿದ್ದಿಗಿದು.‌ 😳😀

ಅಂತೂ ಅಜ್ಜಿ ಒಂದು ವಾರ ಹಾಸಿಗೆ ಹಿಡತ್ತು.‌ ದಿನಾ ಅದ್ರ ಸೊಂಟ ತಿಕ್ಕಿದ್ದಿ... ಪಾಪ ಪರಿಹಾರ ಆಗವಲೀ‌ ಯಂಗೂವ. 
   ಯಂಗೋ ವಳಗೊಳಗೇ  ಖುಷಿಯೋ ಖುಷಿ‌ ಒಂದಬದಿಗೆ. ಆಯಿ ಆದ್ರೆ ತುಪ್ಪಕ್ಕೆ ಕಂಜೂಸಿ ಮಾಡ್ತಿಲ್ಲೆ.  ಅಜ್ಜಿ ಬಿದ್ಕಂಡಿದ್ದಷ್ಟೂ ಚೊಲೋ. 😝
ಒಂದೇ ವಾರದಲ್ಲಿ ಅಜ್ಜಿ ಚುಪರಾಗೋತು. ಗಟ್ಟಿ ಜೀಂವ ಮತೇ. 

ಆದರೆ ಈ ಘಟನೆಯ ನಂತರ ಎಂತಕ ಏನೇನ.... ಯಂಗೆ ಗಡಿಯಾರ ಮುಂದಿಡ ಮನಸ್ಸಾಜಿಲ್ಲೆ. ಹಾಂಗೇಯ ಅಜ್ಜಿಗೂ ಮೊಮ್ಮಗನ ಘನಕಾರ್ಯ ಗೊತ್ತಾಗಿತ್ತ ಏನೇನ... ನಾ ಕೇಳಿದಾಗೆಲ್ಲ ಆಸ್ರಿಗೆ ಕೊಡತಿತ್ತು.. ತುಪ್ಪನೂ ಕಂಜೂಸಿ ಮಾಡದ್ದೇ ಬಡಸತಿತ್ತು ! 

- ಶಾಂ‌ ಭಟ್, ಭಡ್ತಿ 
21/04/2022, #ಹವಿಹಾಸ್ಯ - ಲಘುನಗು

ಸಸಾರವ ಸಂಸಾರ!

#ಪಟ್ಟಂಗ 
#ಸಸಾರವ_ಸಂಸಾರ !? 
~~~~~~~~~~~~
    ವಂದ್ ಚೀಟಿ ಮಾಡ್ ಕೊಟ್ಟೆ ನಾನು ಅಡಿಗೆ ಮನೆಲೆಯ.. ಸಾಮಾನು ಖಾಲಿಯಾದಂಗೆ ಹಂಬಲಾದಗಲೆಲ್ಲ ಬರೆದಿಡು ಹೇಳಿ. 
     ಅಯ್ಯ ಅವು ಬರೆದ್ರೆ ಹೆಂಗಸರೇ ಅಲ್ಲ 
😜
     ಮದುವೆಯಾಗಿ 2 ವರ್ಷ ಈ ಐಡಿಯಾ ನಡದ್ದಿಲ್ಲೆ.  ದಿನಾ ಯುದ್ಧ ಮನೇಲಿ.
     ಅದಕ್ಕೂ ನಂತರ "ನಾ ತಪ್ಪಂವ ಅಲ್ಲ... ನೀನೇ ಎಲ್ಲ ತಂದ್ಕಳವು" ತಿಂಗಳಿಗೆ ರೇಷನ್ನಿಗೆ, ಹಾಲಿಗೆ ಇಷ್ಟು ಹೇಳಿ ಕೊಡಲು ಶುರು ಮಾಡ್ದೆ. 
    ಆದರೂ ತಿಂಗಳ ಅಖೈರಿಗೆ 'ರೇಷನ್ ಬಜೆಟ್ ಖಾಲಿ' ಹೇಳಲ್ ಹಣಕ್ತು ಹೆಂಡ್ತಿಕೂಸು. ಬಜೆಟ್ ಏರ್ಸಕಾತು. ಸರಿ ಏರಸ್ದೆ.. ಎಲ್ಲ ಸಮಾ ಆತು ಅಂದ್ಕಂಡಿದ್ದೆ. 

     ಆಶ್ಚರ್ಯ ಆಗದ್ದು ನೋಟ್ ಬಂದಾದಾಗ! 😳😳 ನನ್ನ ಬ್ಯಾಂಕ್ ಬ್ಯಾಲೆನ್ಸ್ ಗಿಂತ ಸಾಸಿವೆ ಡಬ್ಬಿ ಬ್ಯಾಲೆನ್ಸೇ ಜಾಸ್ತಿ ಇತ್ತು😳😳

   ಅಪ್ನ ಮನೆಗೋಗ್ತ ಇವು. ಹೋಪ ಬಪ್ಪ ಏರ್ - ಬಸ್ - ಟ್ರೇನ್  ಟಿಕೆಟ್ಟೂ .. ತಿಂಬುಂಬ್ಲೆ ಕೊಟ್ಟೂ...  ಮೇಲಿಂದ ಸಲ್ಪ ಕ್ಯಾಶೂ ಕೈಯಲ್ಲಿ ಹಿಡಿಸಾಗ್ತು ನಾವು.

    ವಾಪಸ್ ಬಂದ ಮೇಲೆ ಲೆಕ್ಕ ಕೇಳಲೇ ಆಗ... ಕೇಳಿರೆ ಕೆಟ್ಟ. ನಮ್ ಕೈಯಿಂದನೇ ಹೋಗ್ತು. ನಾವು ಕೊಟ್ಟದ್ದಕ್ಕಿಂತ ಜಾಸ್ತಿ ಖರ್ಚು ಹೇಳೇ ತೋರಿಸ್ತು ಯಮ್ಮನೆದು. 
ಗಣಿತ ಅಷ್ಟ್ ಗಟ್ಟಿ ಅದರದ್ದು 😳
    ಆದರೆ ತನ್ನಿಂತಾನೇ ಆ ಸಾ.ಡ. ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಆಗಿರ್ತು. 🙄🙄

ಕೇಳಿರೆ... ಅಣ್ಣ, ಅಕ್ಕ, ಅಪ್ಪನ ಮನೇಲಿ ಕೊಟ್ಟಿದ್ದು. ಅದು ಗಂಡನ ಮನೆ ಖರ್ಚಿಗೆ ಸಂಬಂಧಿಲ್ಲೇ. 😳😳
   ಯಂಗೆ ಜೀ0ವ ಹೋತೂ ಅಂದ್ರೂ ಆ ಸಾ.ಡ. ಬ್ಯಾಲೆನ್ಸ್ ಸಿಗತಿಲ್ಲೆ. 

    ಹಂಗರೆ ಅದರ ಉಪಯೋಗ ಯಾವಾಗ?
ಅಪ್ನ ಮನೇಲಿ ಯಾರಿಗಾರೂ ಭತ್ತದ ಸುಂಗು ಹೆಟ್ಟಿದಾಗ. 
😳😳😝😅

(ಯಮ್ಮನೆದು ಮಾತ್ರ ಹಂಗೆ ಹಂ... ನಿಂಗವೆಲ್ಲ ಗನಾವು... ಎದಿಗೆ ತಗಳಡಿ 😀)

06/04/2022, #ಹವಿಹಾಸ್ಯ 

ಕುನ್ನಿದು ಕುನ್ನಿದು ಬಾರೇ


#ಕೂಸಿನ‌_ಯಾಪಾರಲ್ಲ

ನಮ್ಮನೆ ಕೂಸು ಹುಟ್ಟಿ ಬೆಳೆದಿದ್ದು ದಿಲ್ಲಿಲಿ. ಹೈಗ ಕನ್ನಡ ಬಂದ್ರೂವಾ ಹಿಂದಿ ಇಂಗ್ಲೀಷಲ್ಲಿ ಹಿಡಿತ ಜಾಸ್ತಿ ಅದ್ಕೆ. ಹವ್ಯಕದಲ್ಲಿ ಜಗಳ ಮಾಡೂಲಂತೂ ಬತ್ತೇ ಇಲ್ಲೇ ಪಾಪ. 

ಈಗ 2-3 ವರ್ಷದ ಹಿಂದೆ ಯುಗಾದಿ ಹಬ್ಬದ ದಿನ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಹಾಡು ಹಂಬಲಾತು ... ಗುನಗುನಸ್ತ ಇದಿದ್ದನ್ನ ಈ ಕೂಸು ಕೇಳ್ಬುಡ್ತು.
"ಇದ್ಯಾವ ಗಾನನಾ ಪಪ್ಪಾ?" ಪ್ರಶ್ನೆ .
"ಅದು ಕನ್ನಡ ಹಾಡೇ ಕೂಸೇ" ಹೇಳ್ವಲ್ಲಿವರೆಗೆ ಕೈಲಿದ್ದ ಮೊಬೈಲ್ ಒತ್ತಿ ಯೂ ಟೂಬ್ ಲ್ಲಿ ಆ ಹಾಡ ಹುಡುಕಿ ಕೇಳುಲೆ ಶುರು ಮಾಡ್ತು. 
ಯುಗಾದಿ ಹಾಡು ಮುಗತ್ತು. ಯೂ ಟೂಬ್ ಹಾಂಗೆಯ... ಹುಷಾರಿ. ನಂಗ ಎಂತಾ ನೋಡತ್ವ ಅದಕೆ ಸಂಬಂಧ ಪಟ್ಟ ಉಳಿದ ಹಾಡನ್ನೂ 'ನೋಡಿ' ಹೇಳಿ ಶಿಫಾರಸು ಮಾಡ್ತು. 

ಅಲ್ಲೇ ಮುಂದೆ 'ರವಿವರ್ಮನ ಕುಂಚ' ಕಂಡತು. ಅದನ್ನೂ ನೋಡ್ತು, ಕೇಳ್ತು ಕೂಸು.
ಅದಕ್ಕೂ ಮುಂದೆ ಮತ್ತೂ ಕೆಲವು ಹಾಡಿನ ಶಿಫಾರಸು ಬತ್ತಾ ಇದ್ದಿತ್ತು.‌ ಇದು ವಿಡಿಯೋದ ಕೆಳಗೆ ಇಂಗ್ಲಿಷ್ ನಲ್ಲಿ ಬರೆದ ಅಡಿಬರಹ ಎಲ್ಲ ದೊಡ್ಡಕೆ ಓದ್ತಾ ಓದ್ತಾ ಹೋತು.
'ಆಕಾಶದಿಂದಾ ಧರೆಗಿಳಿದ ಗೊಂಬೆ'
'ಎಂದೆಂದೂ ನಿನ್ನನು ಮರೆತು'
'ನೀರ ಬಿತ್ತು ನೆಲದ ಮೇಲೆ' ಇತ್ಯಾದಿ‌. 

ಕಡೇಗೆ 
'ಕುನ್ನಿದು ಕುನ್ನಿದು ಬಾರೆ' ಅಂತು. 🙄😳
ನಂಗೆ ಇದ್ಯಾವ ಹಾಡಪಾ ಹೇಳೇ ಅಂತ್ ಪಾರ್ ಹತ್ತಿದ್ದಿಲ್ಲೆ. ಕೆಮಿ ಚುರ್ಕಾದ್ರೂ
ಬೊಡ್ ತಲೆ ಯಂದು. 

ಅಲ್ಲೇ ಇದ್ದ ಯಮ್ಮನೆ ಪ್ರಾಣಿ ನಗ್ಯಾಡ್ತವ
"ಯೇ ಅದು 'ಕುನ್ನಿದು ಕುನ್ನಿದು' ಅಲ್ದೇ.... "ಕುಣಿದು ಕುಣಿದು ಬಾರೇ" 

ಎಚ್ಚರ ತಪ್ಪದೊಂದು ಬಾಕಿ ನಾನು. 🤩🤩😂😂 

🙏🙏
- ಶ್ಯಾಂ‌ ಭಟ್
22/03/2022, #ಹವಿಹಾಸ್ಯ ಲಘುನಗು

ನಂಬಿಕೆ


**ಅದೊಂದು ಯುಗಾದಿ **
"ತಮಾ..... 9 ಗಂಟ್ಯಾತು...‌ ಕಾಲಾವಧಿ ಹಬ್ಬಾಗಿ ಈ‌ ಮಾಣಿ ಇನ್ನೂ ಬಿದ್ವರಗ್ತೆ ಇದ್ದಾ ನೋಡಿ..‌..." ಹೇಳ ಅಶರೀರವಾಣಿಗೆ ಕಣ್ಬಿಟ್ಟಿ. ಯಂಗೊತಿದ್ದು ಯನ್ನ ಆಯಿ ಯೋಳೂಕಾಲಕ್ಕೇ ಒಂಬತ್ ಗಂಟ್ಯಾತು ಹೇಳ್ತೂ ಹೇಳಿ.. ಇವತ್ತೆಂತಕೆ ಕೂಗ್ತಿದ್ದಪಾ.. ಯುಗಾದಿ ರಜೆ ಮೇಲಿಂದವಾ ಹೇಳಿ ಯೋಳ‌ ಮನಸಿಲ್ದೋರೂ ಮೈ‌ಮುರ್ದು ಎದ್ದಿ... ಏಳಕಾತಲೀ. ಇಲ್ದೋರೆ ಯನ್ನಬ್ಬೆ ಅಬ್ಬೆಯಾಗಿರ್ತಿಲ್ಲೆ. 'ನವದುರ್ಗೆಯರೂ ಆಹ್ವಾಹನೆ ಅಪ್ಪ ಮುಂಚೇನೇ ಎದ್ಬುಡು ತಮಾ' ಹೇಳಿ ಯಂದೇ ಅಂತರಾಳ ಕೂಗ್ತು. 😀

ಎದ್ದು ಮಿಂದು ದೇವ್ರ ಪೂಜೆ ಮಾಡ್ತಿರಕಾರೇ "ತಮಾ  ಚೌಡಿ ಪೂಜೆ ಮಾಡ್ಕ ಬಾ" ಅಶರೀರವಾಣಿ ಮತ್ತೆ. ಅದ್ರ ಶರೀರ ಬತ್ತಿತ್ತಿಲ್ಲೆ ಯನ್ನತ್ರ... ಬರೀ ಆವಾಜ್‌ ಮಾತ್ರ ಬತ್ತಿತ್ತು ಅದ್ಕಾಗೇ ಅಶರೀರವಾಣಿ ಹೇಳ್ತಿ.

 ತ್ವಾಟದ ತುದಿಗೆ ಚೌಡಿಮನೆ.. ನಾನು ಚೌಡಿ ಮನೆಗೆ ಹೋದಷ್ಟೊತ್ತಿಗೇ ಸುಬ್ರಾಯ ಭಟ್ರ ಮನೆ ತಿಮ್ಮಣ್ಣ ಪೂಜೆಗೆ ಬಂದಿದ್ದ ಪೂಜೆ ಮಾಡ್ತಿದಿದ್ದ. 
"ಹಾ.. ಹಾಂಗೇ ನನ್ನ ಕಾಯೂ ವಡೆದು ಕೊಟ್ಬುಡೊ, ಪುರೋಹಿತ ನೀನು" ಅಂದಿ. ಅಂವ ಪೂಜೆ ಮಾಡ್ತಿರಕಾರೇ ಕೇಳ್ದಿ... "ಭಟ್ರು ಹೆಂಗಿದ್ರಡೋ?"
ಸುಬ್ರಾಯ ಭಟ್ರನ್ನ ವಾರದ ಹಿಂದೆ ಮಣಿಪಾಲಕ್ಕೆ ಕರ್ಕ ಹೋಗಿದಿದ್ದ.. ಸಿರಿಯಸ್ಸು.. 

"ನಿನ್ನೆ ಆಪರೇಷನ್ ಆತಡಾ, ಇನ್ನೊಂದು ವಾರ ಬಕ್ಕು" ಅಂದ ತಿಮ್ಮಣ್ಣ ಕಾಯಿ ವಡೆತವ... ಒಂದು ಕಡಿ ಕಮಚಡಿಗಾಗಿ ಬೀಳಸ್ಬುಟಾ ಮಾಣಿ. 
 "ಒಹ.. ನಾ ಒಡೆಲನಾ?" ಅಂದೆ.  ಕಡಿ ಕಮಚಿ ಬಿದ್ದ ಮೇಲೆ ಕೇಳ ಪ್ರಶ್ನೆ ಅಲ್ಲ ಅದೂ.. ಆದರೂ ಪರಾವರ್ತಿತ ಪ್ರತಿಕ್ರಿಯೆಯಾಗಿ ಯನ್ ಬಾಯಿಂದ ಬಂತಕು. 🙆

ಅಷ್ಟಾದ ಮೇಲೆ ಊಟ ಮಾಡಿ ಕವಳ ಹಾಕ್ತೇ ಇದಿದ್ದಿ... ಎಂಬುಲೆನ್ಸ್ ಶಬ್ದ ಕೇಳ್ತು... ನಂಗ ಎಲ್ಲಾ ಮಕಮಕ‌ ನೋಡ್ಕಂಡ್ಯ... ಸೀದಾ ಮನಸಲ್ಲಿ ಬಂದದ್ದೇ  "ಸುಬ್ರಾಯ ಭಟ್ರು?!" 

ಬಡಬಡ ಎದ್ದು ರಸ್ತೆಗೆ ಹೋದ್ರೆ ಹೌದು.. ಸುಬ್ರಾಯ ಭಟ್ರೇಯ..  !! ಓಂ ಶಾಂತಿ 🙏

ನಾ ಮದಲೆಲ್ಲ ನಂಬತಿದ್ನಿಲ್ಲೆ... ಅಜ್ಜಿಯ, ಆಯಿಯ ಈ ನಮ್ನಿ ನಂಬ್ಕೆ ಎಲ್ಲವಾ. ಇದೆಲ್ಲ  ಮೂಢನಂಬಿಕೆಗಳೇ ಹೌದ? ಅಥವ ಈ  ನಮ್ಮ ಹೆರಿತಲೆಗಳು ಅವರ ಅನುಭವದಿಂದ ಇದನ್ನೆಲ್ಲಾ ಹೇಳ್ತಿದ್ವ?  ಒಂದೂ ಅರ್ಥಾಗ್ತಿಲ್ಯಪ !!

🙏🙏
- ಶ್ಯಾಂ ಭಟ್, ಭಡ್ತಿ
21-03-2022
 #ಹವಿಹಾಸ್ಯ - 
ಲಘುನಗು

Nov 27, 2021

ಡಿಎನ್ಸಿ ಮಾಡ್ಸೂ

ತಲೆಬರಹ:
ಗುನಗನ ಕಷ್ಟ ಗುನಗಂಗೆ  ಎಂಬ ಒಂದು ಕಥೆ ಬರೆದಿದ್ದೆ ಕೆಲ ದಿನಗಳ ಹಿಂದೆ. ಅದನ್ನೋದಿದ ಓದುಗ ನನ್ನಣ್ಣ ಈ ವಿಷಯವ ನೆನಪು ಮಾಡಿದ.

ಹೌದು ನಮ್ಮಲ್ಲಿ ಈ ಕಥೆಯನ್ನೂ ಹಿರಿಯರು ಹೇಳ್ತಾರೆ. ಕೇಳಿ.. ನಡೆದ ಘಟನೆಯಂತೆ ಇದು.  (ನಾ ಕೇಳಿದಂತೇ ಗೀಚಿದ್ದೇನೆ)
-----

     ರೀತಿ ರಿವಾಜುಗಳಿಂದ ಆ ವರ್ಷದ ಹಬ್ಬ ನಡೆಯುತ್ತಿತ್ತು. ಕಲಶ ಹೊರುವ ಗುನಗ ಸಲ್ಪ ಅಕ್ಷರಸ್ತ. ವ್ಯಾವಹಾರಿಕ ಜ್ಞಾನವೂ ಇತ್ತು ಅವನಿಗೆ ಎನ್ನಿ.

   ಕಲಶ ಹೊರುವವನಿಗೆ 'ಭಾರ' ಬರ್ತದೆ. 'ಭಾರ' ಬರುವುದು, ಎಂದರೆ ಮೈಮೇಲೆ ಶ್ರೀ ದೇವರ ಆಹ್ವಾಹನೆಯಾಗುವುದು ಎಂಬ ನಂಬಿಕೆಯಿದೆ.
     ಕಲ್ಲಿನ ವಿಗ್ರಹ ವರ್ಷಪೂರ್ತಿ ಮಾತನಾಡದು. ಆದರೆ ಅದೊಂದು ದಿನ (ಹಬ್ಬದ ದಿನ) ಆ ದೇವರು ಕಲಶ ಹೊತ್ತವನ ಮೇಲೆ ಆಹ್ವಾಹನೆಯಾಗುತ್ತಾನೆ !  ಹಾಗಾಗಿ ತನ್ನ ಸಂಕಷ್ಟ, ಕಾರ್ಪಣ್ಯಗಳನ್ನೆಲ್ಲ ತೋಡಿಕೊಂಡರೆ ಆ ದೇವ ಪರಿಹರಿಸಬಹುದು... ಎಂಬ ನಂಬಿಕೆ ಹುಲುಮಾನವನಲ್ಲಿ.  ಹಾಗಾಗಿಯೇ 'ಹೇಳಾಣಿಕೆ' ಆಗ್ತದೆ ಆಗ. ಆ ಸಂದರ್ಭದಲ್ಲಿ ದೇವರ ಆಹ್ವಾಹನೆಯಾದ ಗುನಗನ ಬಾಯಿಂದ ಹೊರಟ ಪರಿಹಾರ ಕ್ರಮದಿಂದ ಭಕ್ತರ ಸಮಸ್ಯೆ ಪರಿಹಾರವಾದ ನಿದರ್ಶನಗಳೂ ಇಲ್ಲದಿಲ್ಲ. ಹಾಗಾಗಿ  "ಹೇಳಾಣಿಕೆ"ಯೇ ಭಕ್ತನ ಮನಸ್ಸಿಗೊಂದು ಆಶಾ ಕಿರಣ.

  ಮಕ್ಕಳಾಗದ ಬಡ ಭಕ್ತನೊಬ್ಬ ದೇವರಲ್ಲಿಯೇ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳುವ ಬಯಕೆಯಲ್ಲಿ ಅಂದು ಬಂದಿದ್ದ. 

ಹಾಗೆಯೇ ಈ ಭಕ್ತ ತೋಡಿಕೊಂಡ ತನ್ನ ಅಳಲ - "ದೇವರೇ ನನಗೆ ಮಕ್ಕಳಾಗಲಿಲ್ಲ.. ಮದುವೆಯಾಗಿ ಐದು ವರ್ಷ ಆಯ್ತು .. ಪರಿಹಾರ ಕೊಡಬೇಕು"

ತಕ್ಷಣ ಕಲಶ ಉಲಿಯಿತು.
"ಡಿ ಎನ್ ಸಿ ಮಾಡಸೂ"  !!

ಅಡಿಬರಹ :
D&C ಅಂದ್ರೆ Dilation & Curettage is a procedure to clear uterine lining after miscarriage or abortion

ಸುಮಾರು 70- 80 ರ ದಶಕದಲ್ಲಿ .. ಪದೇ ಪದೇ ಗರ್ಭ ನಿಲ್ಲದ ಸಂದರ್ಭಗಳಲ್ಲಿ ಈ ಚಿಕಿತ್ಸೆ ಚಾಲ್ತಿಗೆ ಬಂತು.

06/09/2021
ದಿಲ್ಲಿ

Oct 13, 2021

ಸುಬ್ರಾಯ ಶೆಟ್ರು


ಬೇರೆವರ ಟೀಕೆ ಟಿಪ್ಪಣಿಗೆ ನಾವು ಎಲ್ಲಾ ಸಲ ತಲೆಬಾಗವು ಅಥವ ತಿದ್ಕಳವು ಹೇಳಿಲ್ಲೆ. ನಮ್ಮ ನಮ್ಮ ಅಭಿಪ್ರಾಯದಂತೇ ಬದುಕವು ನಾವು ಅಲ್ದ?

ವಂದು ನಿಜ ಘಟನೆ ನೆನಪಾತು.. ನಾ ಶಾಲೆಗೆ ಹೋಗಕಾರಿನ ಘಟನೆ ..

ಸುಬ್ರಾಯ ಶೆಟ್ಟಿ ಹೇಳಿ ಆಗಿನ ಕೆಎಸ್ಸಾರ್ಟೀಸಿಯ ವಬ್ಬ ಪ್ರಾಮಾಣಿಕ ಡ್ರೈವರ...  ತನ್ನ ವೃತ್ತಿ ಜೀವನದ ಕೊನೆಯಲ್ಲಿದಿದ್ದ. ಅವನ ಇಡೀ ವೃತ್ತಿ ಜೀವನದಲ್ಲಿ ಯಾವುದೇ ತಪ್ಪು ಮಾಡದ ಸರ್ಕಾರಿ ಸೇವಕ ಅಂವ (ಅವನ್ನ ನೌಕರ ಹೇಳಿರೆ ಅದು ಅವಂಗೆ ಅಗೌರವ ಆಗತು)  ಜೀವಮಾನದಲ್ಲಿ ವಂದೇ ವಂದು ಎಕ್ಸಿಡೆಂಟೂ ಮಾಡದಂವ ಹೇಳ್ವ ಹೆಗ್ಗಳಿಕೆ ಆವರೆಗೂ ಇತ್ತು ಅಂವಂಗೆ

ಕುಮಟಾ ಡಿಪೋ ದಲ್ಲಿ ತನ್ನ ಸೇವೆಯ ಕೊನೆಯ ಕೆಲ ವರ್ಷಗಳನ್ನ/ದಿನಗಳನ್ನ ಕಳೀತೇ ಇದಿದ್ದ.

ಆದರೆ ಡಿಪಾರ್ಟಮೆಂಟಿನಲ್ಲಿ ಪ್ರಾಮಾಣಿಕ ಸೀದಾ ಸರಳ ಸಹಜ ಮನುಷ್ಯನೇ ಆದರೂ  ಯಂಗಳಂಥ  ನವಯುವಕರಿಗೆ ಅಂವ "ಜಬ್ ಡ್ರೈವರ" ... ಅಂವ ಬಸ್ ಹತ್ತದಾ ಅಂದ್ರೆ 'ಇವತ್ ಹೆಬ್ಬಾನಕೆರೆ ಬಸ್ಸು ಲೇಟು' ಹೇಳೇ ಅರ್ಥ.

ಅಸಲಿಗೆ ಬಸ್ ಲೇಟಾಗ್ತಿತ್ತಿಲ್ಲೆ. ಸರಿಯಾದ ಟೈಮಿಗೆ ಹೊರಡ್ತಿತ್ತು ಬಸ್ಸು. ಸರಿಯಾದ ಸಮಯಕ್ಕೇ ಗಂತವ್ಯವ ಮುಟ್ಟಸ್ತಿದ್ದ ಅಂವ‌. ಆದರೆ  ಬೇರೆ ಡ್ರೈವರಂದಿಕ್ಕ ಇದ್ದಾಗ 5 ಗಂಟೆಗೆ ಕೂಪನಂಗಡಿಗೆ ಬಪ್ಪ ಬಸ್ಸು ಆ ದಿನ  ಐದೂಕಾಲಾಗ್ತಿತ್ತು.

ಇಲ್ಲಿ ಕೆ‍ಎಸ್ಸಾರ್ಟೀಸೀ ಬಸ್ಸಿನ ಬಿಡುವ ಸಮಯ ಮತ್ತು ತಲುಪುವ ಸಮಯದ ಬಗ್ಗೆ (ನಿಂಗಕ್ಕೆಲ್ಲ ಅರಿವಿದ್ದು ಆದ್ರೂವ) ಆ ರೂಟ್ ಗೊತ್ತಿಲ್ಲದವರಿಗಾಗಿ ಚುಟುಕಾಗಿ ಹೇಳವು.

ಬಿಡುವ ನಿಲ್ದಾಣದಿಂದ  ತಲುಪುವ ನಿಲ್ದಾಣದವರೆಗಿನ  ದೂರ ಮತ್ತು ನಡುವಣ ರಸ್ತೆಯ ಪರಿಸ್ಥಿತಿ ಮತ್ತು ನಡುವಣ ನಿಲುಗಡೆ ಮತ್ತು ಹೋಗುವ ಬಸ್ಸಿನ ಮಾದರಿಯನ್ನವಲಂಬಿಸಿ ಕಾಲನಿರ್ಣಯ ಮಾಡಿಟ್ಟಿರ್ತ.
ಅಂದ್ರೆ  ಕುಮಟಾದಿಂದ ಹೊರಟ ಬಸ್ಸು ವಾಲಗಳ್ಳಿ, ಕೂಜಳ್ಳಿ,  ಚಂದಾವರ, ಕೆಕ್ಕಾರ, ಕಡತೋಕ, ಹೆಬ್ಬಾನಕೆರೆ, ನೀಲಕೋಡ, ಅರೆಅಂಗಂಡಿ, ಸಂತೆಗುಳಿ, ಚಾಂದ್ರಾಣಿ  ಮಾರ್ಗವಾಗಿ ಹೊನ್ನಾವರ ತಲುಪಲೆ ಎಷ್ಟು ಸಮಯ ಬೇಕೋ ಅಷ್ಟು + ನಿಲುಗಡೆಯ ಸಮಯ + ರಸ್ತೆಯ ಪರಿಸ್ಥಿತಿಯಿಂದಾಗಿ ಅಪ್ಪ  ತಡ ಇದನ್ನೆಲ್ಲ ಸೇರಿಸಿ ಕಾಲನಿರ್ಣಯ ಮಾಡ್ತಿದ್ದ ಆವಾಗೆಲ್ಲವ. ಇದಕೆಲ್ಲ ಭಾರೀ ಟೀಮೇ ಇತ್ತನಪ !

ಹೌದು
ಸುಬ್ರಾಯ ಶೆಟ್ಟಿ ಹಂಗೇ  ಆಗಿದ್ದ

5 ಗಂಟೆಯ ಬಸ್ಸು ಹೇಳಾದ್ರೆ 10 ನಿಮಿಷ ಮೊದಲೇ ಬಂದು ಗಾಡಿ ಸ್ಟಾರ್ಟ್ ಮಾಡಿ... ಡುರ್ಡುರ್ ಗೆಡಸಿ... ಅದರ ಆವಾಜ್ ಮೇಲೇ ಗಾಡಿ ಸರಿ ಇದ್ದ ಇಲ್ಯ ನೋಡಿ ಗೊತ್ತಾಗ್ತಿತ್ತು ಅಂವಂಗೆ. ಸ್ಟಾರ್ಟ್ ಮಾಡಿದ ಮೇಲೆ ಮತ್ತೆ ಕೆಳಗಿಳದು ಹೋಗಿ ಪ್ರತೀ ಸಲ ಆರೂ ಚಕ್ರ ಸಮಾ ಇದ್ದ ಇಲ್ಯ ನೋಡ್ಕಂಡು... ಅದರ ಹವಾ ಚೆಕ್ ಮಾಡ್ಕ ಬಂದು ಮತ್ತೆ ಡ್ರೈವರ ಸೀಟಲ್ಲಿ ಕೂತ್ಗತಿದ್ದ ಪುಣ್ಯಾತ್ಮ ಅದು.

ಇಲ್ಲಿ‌ ಕೆಲವು ಮಾಹಿತಿಗಳು :
ಕುಮಟಾ ಡಿಪೋ
ಕೆ‍ಎಸ್ಸಾರ್ಟೀಸಿಯ ಕುಮಟಾ ಡಿಪೋ ಅಂದ್ರೆ ಕುಮಟಾ ಮತ್ತು ಹೊನ್ನಾವರ ಎರ್ಡೂ ತಾಲೂಕುಗಳೂ ಸೇರಿ ಒಂದು ಡಿಪೋ.

ಹೆಬ್ಬಾರ್ನಕೆರೆ ಬಸ್ಸು ಅಂದ್ರೆ -  ಕುಮಟಾ ಹೆಬ್ಬಾರ್ನಕೆರೆ ಮಾರ್ಗವಾಗಿ  ಹೊನ್ನಾವರ

ಚಿಪ್ಪಿಹಕ್ಕಲ ಬಸ್ಸು ಅಂದ್ರೆ - ಕುಮಟಾ ಚಿಪ್ಫಹಕ್ಕಲ ಹೆಬ್ಬಾರ್ನಕೆರೆ ಮಾರ್ಗವಾಗಿ ಹೊನ್ನಾವರ

ಎರ್ಡೂ ಬಸ್ಸುಗಳು ಈ ದೇವತೆಕೆರೆಯ ನಂತರ ರಾಮತೀರ್ಥದವರೆಗಿನ ಜನಕ್ಕೆ ಅನುಕೂಲವೇಯ.

ಕಥೆ ಅರ್ಥ ಅಪ್ಪಲೆ ಹೆಬ್ಬಾನಕೆರೆ ಯ ಗುರ್ತಿಲ್ದೋದವಕೆ ಈ ವಿವರ ಅಗತ್ಯ ಆದ್ದರಿಂದ ಹೇಳ್ದೆ‍.
ಆಗಲಿ
ಮುಂದೋಪನ ?

ಈ ಸುಬ್ರಾಯಶೆಟ್ಟಿಗೆ ಅದೊಂದು ಕರಾಳ ದಿನ.   ಆ ದಿನ ಯಾವಾಗನಂಗೇಯ ಸಮಯಾನುಸಾರ 5 ಗಂಟೆಯ ಹೆಬ್ಬಾನಕೆರೆ ಬಸ್ಸ್ ಹತ್ತಿ, ಸ್ಟಾರ್ಟ್ ಮಾಡಿ ತನ್ನ ದಿನಚರಿಯ ಕೆಲಸ ಮುಗಸಿ ಹೊರಟ - ಕುಮಟಾ ಬಸ್ ನಿಲ್ದಾಣದಿಂದವ.
ವಿಪರೀತ ಉಹೆಚ್ಚು ಮಳೆ ಆ ದಿನ.‌

ಕಂಡಕಂಡಲ್ಲಿ ರಸ್ತೆಯ ಮೇಲೆ ನೀರು ತುಂಬಿ ಹರೀತಿದ್ದದ್ದು ಚಂದಾವರ ಹೊಳೆಯ ನೆಗಸ ಮುಂದೆ ದೊಡ್ಡ ವಿಷ್ಯವೇ ಅಲ್ಲ.

ಚಂದಾವರ ಹೊಳೆಗೆ ಆಗ ಈಗಿಪ್ಪ ದೊಡ್ಡ ಬ್ರಿಜ್ ಆಗಿತ್ತಿಲ್ಲೆ. ಆಗ್ತಾ ಇದಿತ್ತು. ಕಟ್ಟುವ ಕೆಲಸ ನಡೀತಾ ಇತ್ತು. ಈಗಲೂ ಹೊಸ ಬ್ರಿಜ್‌ನಿಂದ ಕಾಂಬ ಹಳೇ ಸಣ್ಣ ಬ್ರಿಜ್ಜೇ ಆವಾಗಿನ ಸಂಪರ್ಕ ಸಾಧನ.

ತಗ ಸುಬ್ರಾಯ ಶೆಟ್ಟಿ ತನ್ನದೇ ವೇಗದಲ್ಲಿ  ವಾಲಗಳ್ಳಿ, ಕೂಜಳ್ಳಿ, ಮಲ್ಲಾಪುರ, ಚಂದಾವರ ನಾಕಾ ದಾಟಿ  ಹೊಳೆಯ ಹತ್ರ ತಂದ ತನ್ನ ಪ್ರೀತಿಯ ಬಸ್ಸ.‌

ಚಂದಾವರ ಹೊಳೆಯ ಪೂಲ್‌ ಮೇಲೇ  ನೆಗಸಿನ ನೀರು ತುಂಬಿ ಹರೀತಾ ಇದ್ದದ್ದ ಕಂಡ ಸುಬ್ರಾಯ ಶೆಟ್ಟಿ ಕಣ್ಣಳತೆಯಲ್ಲೇ ನೆಗಸ ಅರಿತು ಗಾಡಿ ನಿಲ್ಲಸದ್ದೊಂದೇ ಅಲ್ಲ.  ಸೈಡಿಗೆ ಹಚ್ಚಿ ಬಂದ್ ಮಾಡೇಬುಟ.

ಸಾಮಾನ್ಯವಾಗಿ ಆ ಬಸ್ಸಲ್ಲಿಪ್ಪದು 75% ಕಾಲೇಜ ಹುಡಗ್ರು. ನನ್ನ ಥರದ ಬಿಶಿರಕ್ತ ಮೇಲಿಂದ ಮ್ಯಾಣ.

"ಬಸ್ ದಾಟದೋದಂಥಾ ಮಹಾ ದೊಡ್ ನೆಗಸೆಲ್ಲ ಅಲ್ಲ ..‌ ದಾಟಿ ಹೋಗಲಕ್ಕ" ಅಂದ ವಬ್ಬಂವಾ

"ಬಸ್ಸಿನ ವಜ್ಜೆಗೆಲ್ಲ ನೆಗಸಲ್ವಾ.. ನಮ್ಮ ಗುಡ್ನಕಟ್ ನೆಗಸ ಮುಂದೆ ಇದೆಲ್ಲ ನೆಗಸ?!" ಅಂದ ನಾಯ್ಕರ ಪೋರ

"ತೊಂದ್ರಿಲ್ರಾ ದಾಟೋಗ್ತದೇ ಶೆಟ್ರೇ ..‌ಹೆದರುದ್ ಬೇಡ... ಹೊಡೀರಿ ಗಾಡಿ" ಅಂದ ಗಾಣಗರ ಪೋರ ಶ್ರೀನಾಥ.

" ಮಂಯಾತಾ... ಅಯ್ಯ ಸುಬ್ರಾಯ್ ಶೆಟ್ರು ಈ‌ ನೆಗಸಲ್ಲೆಲ್ಲ ಗಾಡಿ ಹೊಡದ್ರೆ.... ನರಿಯಣ್ಣ ಕಥೆ ಹೇಳ್ತದ್ಯೋ " ಅಂದ ಅಗ್ನೇತ್ರಿ ಮಾಣಿ.

"ಶೆಟ್ರಗೆ ಜೀಂವದ ಹೆದ್ರಕ್ಯ" ಅಂದ ನರಸಪ್ಪನ ಮನೆ ಮಾಣಿ.

"ನಾ 34 ವರ್ಷ ಡ್ರೈವರಕೆ ಮಾಡಿ ಅನುಭವ ಇದಿದ್ರೆ ಬಸ್ ನಿಲ್ಸೂದೇ ಇಲ್ಲಾಗಿತ್ತು" ಅಂದ ಎಲೆ ಸುಬ್ಬಣ್ಣ.

"ಅದಕೆಲ್ಲ ದಮ್ ಬೇಕಾ" ಅಂದ ಕೆಕ್ಕಾರ್ ಗಜು ಅಣ್ಣ.
ತಗ

ಪ್ವಾರಗಳ ಇಂಥ ಹಲವದ್ನೆಂಟು ಮಾತು ಮತ್ತೆ ಮೇಲಿಂದ ಕಂಡಕ್ಟರನೂ ಈ ಹುಡ್ಗಾಟಗತಿ ಹುಡುಗ್ರ ಸಾಥ್ ಕೊಟ್ನ ಇಲ್ಯ....
ಮೇಲಿಂದ ಅಲ್ಲೇ ನೆಗಸಿನ ಮಜ ನೋಡ್ತ ಇದ್ದ ಕೆಲವು ಲೋಕಲ್ ಮುಸಲ್ಮಾನ ಹುಡಗ್ರು "ಈಗ ಮಾತ್ರ ಮೋಹನ್ ಹೆಗಡ್ರ್ ಚಿಪ್ಪಿನ ಲಾರಿ ದಾಟಸ್ಗ ಹೋಗದೆ ಡ್ರೈವರೂ" ಅಂದ್ವ ಇಲ್ಯ...
ಸುಬ್ರಾಯ ಶೆಟ್ರ ಬಿಪಿ ಯೇರೋತು, ಸಹನೆ ಮೀರೋತು.

  ಹತ್ತೇಬುಟ್ರು ಗಾಡಿಯ.
ಸ್ಟಾರ್ಟ್ ಮಾಡಿ ಗುರ್ಗೆಡಸಿ ಫಸ್ಟ್ ಗೇರ್ ಹಾಕೇಬುಟ್ರು.

ಗಾಡಿ ಹೋತು ಮದಲು  ರಸ್ತೆಯ ಮೇಲೆ ....‌ಮತ್ತೆ ಆ ಶಿಥಿಲ ಸಣ್ಣ ಬ್ರಿಜ್ ಮೇಲೆ ..‌ ಸುಮಾರು ಅರ್ಧ ಬ್ರಿಜ್ ದಾಟದ್ದೇ ಆ ನೆಗಸಿನ ರಭಸಕ್ಕೆ ತಡದ್ದಿಲ್ಲೆ ಬಸ್ಸು. ಹೋಗೀ ಹೋಗಿ ತೇಲೋತು.

ಪುಣ್ಯಕ್ಕೆ ಹೊಸಾ ಬ್ರಿಜ್ ನ ಕನಸ್ಟ್ರಕ್ಷನ್ ನಡೀತಾ ಇತ್ತು. ಹೊಸ ಬ್ರಿಜ್ಜಿನ ಕಂಬಗಳು ಗಟ್ ಮುಟ್ಟಾಗಿತ್ತು... ಹೋಗಿ ಹೋಗಿ ಬಸ್ಸು ಆ ಹೊಸಾ ಬ್ರಿಜ್ಜಿನ (ಈಗಿನ ಬ್ರಿಜ್ಜು) ಕಂಬಕ್ಕೆ ತಾಡತು...

ದೇವರ ದಯವೋ,
ಸುಬ್ರಾಯ ಶೆಟ್ಟರ ಇಷ್ಟು ವರ್ಷಗಳ ಪ್ರಾಮಾಣಿಕ‌ ಸೇವೆಯ ಪುಣ್ಯದ ಫಲವೋ ವಂದೂ ಸಾವು ನೋವಾಜಿಲ್ಲೆ

ಅಕ್ಕ ಪಕ್ಕದ ಜನ ಬಂದು ಎಲ್ಲ ಪ್ರಯಾಣಿಕರನ್ನೂ ಬಚಾವ್ ಮಾಡದ.
ಆಗಬಹುದಿದ್ದ ಮಹಾ ದೊಡ್ಡ ದುರಂತವೊಂದು ತಪ್ಪಿತ್ತು.

ಆದರೆ ಈ ಘಟನೆಯಿಂದ ಇಡೀ ಜೀವಮಾನದ ಸೇವೆಯಲ್ಲಿ ವಂದೂ ತಪ್ಪು ಮಾಡದ, ಸೇವಾನಿವ್ರತ್ತಿಗೆ ಐದೋ ಆರೋ ತಿಂಗಳುಗಳು ಮಾತ್ರ ಬಾಕಿ ಇದ್ದ  ಸುಬ್ರಾಯ ಶೆಟ್ಟರ ವೃತ್ತಿ ಜೀವನದಲ್ಲೊಂದು ಕಪ್ಪು ಚುಕ್ಕೆ ಬಿದ್ದಾಗೋಗಿತ್ತು.

ಈ ಕಥೆಯ ನೀತಿ..
ನಮಗೆ ಸರಿಯಾಗಿ ಗೊತ್ತಿರುವ ಕೆಲಸದಲ್ಲಿ ಬೇರೆಯವರ ಸಲಹೆ ಅಥವಾ ಚಿತಾವಣೆಗೆ ಹೆಚ್ಚಿನ ಬೆಲೆ ಕೊಡಬಾರದು

ಅಡಿಬರಹ :
ಇದು ಸತ್ಯ ಘಟನೆ
ದಿನ ದಿನಾಂಕ ವರ್ಷ ಎಲ್ಲ ನೆನಪಿಲ್ಲೆ ಯಂಗೆ
ಹುಂ  ಆದರೆ ಕೆಲವು ಹೆಸರುಗಳು ಕಾಲ್ಪನಿಕ ( ಸೇರ್ಸಿದ್ದಿ)
ಜನ ಹೇಳ್ತ
ಹೇಳೂದೇ ಅವರ ಧರ್ಮ
ಹೇಳ್ಕಳ್ಳಿ ನಮಗೇನಡ !
ಆದರೆ ಕೊನೆಯಲ್ಲಿ ನಮಗೆ ಏನನಿಸ್ತೋ .. ನಮ್ಮ ಆತ್ಮ ಸಾಕ್ಷಿ ಏನು ಹೇಳ್ತೋ ಅದನ್ನೇ ಮಾಡವು ನಾವು

ನಮಸ್ಕಾರ
- ಶ್ಯಾಂ ಭಟ್
13/10/21
ದಿಲ್ಲಿ 

May 17, 2020

ಗುನಗನ ಕಷ್ಟ ಗುನಗಂಗೆ

ಹಣೆಬರಹ:
        'ಗುನಗ' ಎಂಬ ಅಡ್ಡ ಹೆಸರಿನ (Sirname) ಒಂದು ಪಂಗಡ ಇದೆ ಘಟ್ಟದ ಕೆಳಗೆ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ವಾಲಗಕ್ಕೆ ಬಂಡಾರರು ಇರುವಂತೆಯೇ ಮೂಲತಃ ಈ ಗುನಗರೂ ಕೂಡ ದೇವರ ಸೇವೆಗಾಗಿಯೇ ಮುಡಿಪಾದ ಪ್ರಾಮಾಣಿಕ ಜನಾಂಗ.
     ಕೆಲವು ದೇವಸ್ಥಾನ ಗಳಲ್ಲಿ ಅದೂ ಸಾಮಾನ್ಯವಾಗಿ ಹೊರಾಂಗಣದ ದೇವರುಗಳಾದ ಜಟಗ, ಮಾಸ್ತಿ, ನಾಗರ,
ಚೌಡಿ ಇತ್ಯಾದಿಗಳನ್ನು ಕ್ಷುದ್ರ ದೇವತೆಗಳು ಅಥವಾ ಪರಿವಾರ ದೇವತೆಗೆಂದು ಕರೆಯುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಕೀಳ್ ದೇವರು ಅಂತಾರೆ. ಆ ವಿಷಯಕ್ಕೆ ನಾ ಹೋಗುವುದಿಲ್ಲ.
       ಸಾಮಾನ್ಯವಾಗಿ ಈ ಕ್ಷುದ್ರದೇವತೆಗಳ ಸ್ಥಾನಗಳಲ್ಲಿ ವಾರ್ಷಿಕವಾಗಿ ಬಂಡಿ ಹಬ್ಬವೆಂಬ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ಬಂಡಿ ಹಬ್ಬದ ಆಕರ್ಷಕ ಸಂಪ್ರದಾಯ ವಿಶೇಷವೆಂದರೆ ಶ್ರೀ ದೇವರ ಕಲಶ ಮತ್ತು ಕೆಂಡ ಹಾಯುವ ಪ್ರಕ್ರಿಯೆ.       
       ಸಾಮಾನ್ಯವಾಗಿ ಈ ಶ್ರೀ ದೇವರ ಅಲಂಕೃತ ಕಲಶ ಹೊರುವವರು ಮೂಲತಃ ಗುನಗರ ವಂಶಜರು. ಇನ್ನು ಕೆಲವೆಡೆ ಬ್ರಾಹ್ಮಣರೇ ಗುನಗರ ಕೆಲಸ ಮಾಡುವುದೂ ಇದೆ. 
      ಕೆಂಡ ಹಾಯುವವರು ಸಾಮಾನ್ಯವಾಗಿ ಗೌಡರು ಮತ್ತೆ ಪಟಗಾರರು.
------

     ವಂದಾನೊಂದು ಕಾಲದಲ್ಲಿ ಹೀಂಗಿರ್ಪ ವಂದು ಬಂಡಿ ಹಬ್ಬದಲ್ಲಿ ... ಗುನಗನ ಕಷ್ಟದ ಕಥೆ ವ್ಯಥೆ ಇದು.
      ಈ ಕಲಶ ಹೊರುವ ಗುನಗರು ಸಾಮಾನ್ಯವಾಗಿ ವಂದ್ ವಾರ ಮದಲೇ ಎಲ್ಲಾ ತರದ ವೃತ ಮಾಡಿಕೊಂಡು... ದೇವಸ್ಥಾನ ಭಟ್ಟರೇ ಮಂತ್ರಿಸಿಕೊಟ್ಟ ಹೊಸ ಜನಿವಾರ ಧರಿಸಿ ಕಲಶ ಹೊರಲು ಸನ್ನದ್ಧರಾಗ್ತಾರೆ.
ಅವರ ಮಾತಿನಲ್ಲೇ ಹೇಳುವುದಾದರೆ "ರಾಶೀ ನಮನಿ ವೃತ ಅದೇ" ಎನ್ನುತ್ತಾರವರು.
ಆದರೆ ದೇವಸ್ಥಾನ ಭಟ್ಟರ ಕೇಳಿದರೆ "ಎಂತದೂ ಇಲ್ಲೇ ಬೆಳಿಗ್ಗೆ ಮಿಂದ್ಕ ಬಂದ್ರಾತು" ಎಂಬ ಉತ್ತರವಿರುತ್ತಿತ್ತು.

      ಆ ವರ್ಷದ ಬಂಡಿ ಹಬ್ಬದ ಸಮಯದಲ್ಲಿ ಪ್ರತೀ ವರ್ಷದಂತೇ ಕಲಶ ಹೊರುವ ಮುದುಕ ಗುನಗನ ಆರೋಗ್ಯ ಸರಿಯಿಲ್ಲದ ಕಾರಣ ಆತ ತನ್ನ ಮಗನಿಗೆ ಆ ಜವಾಬ್ದಾರಿ ವಹಿಸಿದ. ಈ ವರ್ಷ ಮೊದಲ ಬಾರಿಗೆ ಕಲಶ ಹೊರುವ ಅವಕಾಶ ಸಿಕ್ಕ ಮಗನಿಗಾದರೋ ಒಂಥರ ಹೆಮ್ಮೆ, ನೆಲದ ಮೇಲಿರಲಿಲ್ಲ ಆತ. ಹಾಗಾಗಿ ಈ ಮರಿ ಗುನಗ ಬಂಡಿ ಹಬ್ಬದ ದಿನ ಬೆಳಗಾ ಬೆಳಗ್ಗೆ ಎದ್ದು ಮಿಂದು ಗಿಂದು ತಯಾರಾದ.. ಅವಂಗೆ ಆ ದಿನ ಜೀವನದಲ್ಲೇ ಸಿಗದ ರಾಜ ಮರ್ಯಾದೆ. ಹಾರ ತುರಾಯಿ ಹಾಕಿ ದೇವರ ಹಂಗೇ ನೋಡುತ್ತಾರಲ್ಲ. ಆತನ ಖುಷಿಗೆ ಪಾರವೇ ಇಲ್ಲ.

     ಬೆಳಗಾ ಬೆಳಗ್ಗೆ ಎದ್ದು ಹೊಸದಾಗಿ ಖರೀದಿಸಿದ ಮಡಿಯನ್ನು ಭಟ್ಟರ ಹಂಗೇ ಉಡುವ ವಿಫಲ ಪ್ರಯತ್ನ ಮಾಡಿ.. ಅಂತೂ ಅಪ್ಪನ ಸಹಾಯದಿಂದ ಉಟ್ಟು... ದೇವಸ್ಥಾನದ ಬಾಗಿಲಲ್ಲಿ ಬಂದು ಕುಂತ ಮರಿ ಗುನಗ.
       ಭಟ್ಟರು ಯಾವಾಗಲೂ 'ಸಣ್ಣ ಗುನಗಾ ಬಂದ್ಯನಾ' ಎಂದು ಏಕವಚನದಲ್ಲಿ ಕರೆವವರು.. ಇಂದು ಮಡಿ ಉಟ್ಟ ಗುನಗಂಗೆ ಸಲ್ಪ ಜಾಸ್ತಿನೇ ಮರ್ಯಾದೆ ಕೊಟ್ಟು ಮಾತಾಡಿಸಿದರು.
"ಸಣ್ಣ ಗುನಗರೇ.. ಬಂದ್ರಾ?" ಎಂದು
"ಹೌದ್ರಾ ಭಟ್ರೇ" ಅಂದ ಗುನಗ.
"ಇಷ್ಟ್ ಬೇಗ ಮಡಿ ಹಚ್ಗ ಎಂತಾ ಮಾಡ್ತ್ರಿ ಗುನಗರೇ... ಮಧ್ಯಾಹ್ನ 4 ಗಂಟೆಗೆ ಮಡಿ ಹಚ್ಚಿರೆ ಸಾಕಾಗಿತ್ತನ" ಅಂದ್ರು ಭಟ್ಟರು
ಈತ ಇನ್ನೂ ಮೂರಿಂಚು ಏರಿ ಹೋದ.
"ಇಲ್ಲ ಇಲ್ರಾ.. ತೊಂದರಿಲ್ರಾ" ಅಂದ.
"ಸರಿ" ಅಂದ್ರು ಭಟ್ರು.
       ಸರಿ ಮಧ್ಯಾಹ್ನ ಕಲಶ ಹೊರುವ ಹೊತ್ತಾಯಿತು. ಮಡಿಯ ಸಮಸ್ಯೆ ಗೊತ್ತಿದ್ದ ಭಟ್ರು ಹೇಳಿದ್ರು... "ಗುನಗರೇ... ಮೂತ್ರ ಗೀತ್ರಕ್ಕೆ ಹೋಗುದಿದ್ರೆ ಮಡಿ ಬಿಚ್ಚಾಯ್ಕಂಡು ಹೋಗ್ ಬಂದ್ ಬುಡಿ.. ಕಡೆಗೆ ಕಲಶ ಹೊತ್ತ ಮೇಲೆ ಆಗೂದಿಲ್ಲ"
"ಇಲ್ರಾ ತೊಂದ್ರಿಲ್ಲರಾ" ಅಂದ ಗುನಗ

        ತಲೆಗೆ ಮಡಿಯನ್ನೇ ಮುಂಡಾಸಿನಂತೆ ಕಟ್ಟಿ ಕಲಶ ಇವನ ತಲೆ ಮೇಲಿಡಲಾಯ್ತು.
        ತಲೆಗೆ ಕಲಶ ಏರಿದ್ದೇ ತಡ... ತಗಳಿ ಗುನಗನಿಗೆ ಶುರುವಾಯ್ತು - 'ಭಾರ'.
'ಹುಂ ಹು ಹುಂ' ಎಂದು ನುಲಿತ ಶುರು ಮಾಡಿಕೊಂಡ.
         ಖಾಯಂ ಪದ್ದತಿ ಅದು ... ಅವನ ಅಜ್ಜನೂ.. ಅಪ್ಪನೂ ಹಾಗೆಯೇ ಮಾಡುವುದ ಚಿಕ್ಕಂದಿನಿಂದ ಕಂಡಿದ್ದ. ಹಾಂಗಾಗಿ ಇವನೂ ಮಾಡ್ದ.
         ಈ ಕಲಶ ಅಂದ್ರೆ .. ದೇವರ ಸಣ್ಣ ಮೂರ್ತಿಯ ಕಲಶದಲ್ಲಿಟ್ಟು ಶೃಂಗಾರಲಂಕಾರ ಮಾಡಿ ತಲೆಯ ಮೇಲೆ ಹೊತ್ತು ಇಡೀ ಊರ ತುಂಬ ನಿಗದಿತ ಸ್ಥಳಕ್ಕೆ ನಡೆದು ಹೋಗಿ... ಅಲ್ಲಲ್ಲಿ ಅದಕ್ಕೇ ಆದ ವಿಶೇಷ ಪೂಜೆ ಸ್ವೀಕರಿಸಿ ವಾಪಸ್ ಬರುತ್ತದೆ ಕಲಶ.
         ಈ ಪೂರಾ ಪ್ರಕ್ರಿಯೆಗೆ ಸುಮಾರು 5-6 ತಾಸಾದರೂ ಆಗುತ್ತದೆ. ಕಲ್ಪನೆ ಮಾಡಿಕೊಳ್ಳಿ... ಹೊತ್ತವನ ಅವಸ್ಥೆಯ. ಆ ಕಲಶ ಹೊತ್ತಷ್ಟು ಹೊತ್ತೂ ಆತ ಬಹಿರ್ದೆಶೆಗೆ ಕೂಡ ಹೋಗುವ ಹಾಗಿಲ್ಲ ಪಾಪ. ಅದಕ್ಕಾಗಿಯೇ ಭಟ್ಟರು ಆಗಲೇ ಹೇಳಿದ್ದರು. ಎಷ್ಟಂದ್ರೂ ಪೂಜೆ ಪುನಸ್ಕಾರಗಳ ಅನುಭವ ಅವರದ್ದು.

        ಹೀಗೆ ಕಲಶ ಹೊತ್ತು ಹೊರಟ ಗುನಗನಿಗೆ ಎರಡು ಮೂರು ಬದಿಯ ಪೂಜೆ ಪುನಸ್ಕಾರ ಮುಗಿಯುವಷ್ಟರಲ್ಲೇ ಮೂತ್ರ ಭಾಧೆ ಶುರುವಾಯ್ತು. ಪಾಪ ಬೆಳಗಿನಿಂದ ಭಟ್ರು ಹೇಳಿದರೂ ಕೇಳದೇ ಮಡಿ ಉಟ್ಟು ಕುಂತ ಪರಿಣಾಮ.
ಇಂಥ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದನ್ನು ಅನುಭವಿಯಾದ ಆತನ ಅಪ್ಪನೂ ಹೇಳಿರಲಿಲ್ಲ. ಹೇಳಬೇಕಿತ್ತು ... ಆದರೆ ಮರೆತಿರಬೇಕು. ಇವನೇನು ಮಾಡಬೇಕು ಪಾಪ. ಗುನಗನಿಗೆ ತಡೆಯಲಾರದ ಒತ್ತಡ ಶುರುವಾಯ್ತು.
ತಲೆಯ ಮೇಲೆ ಶ್ರೀ ದೇವರ ಕಲಶ. ಭಕ್ತಿ ಭಾರ ಎರಡೂ ಬರ್ತ್ತಾ ಇಲ್ಲ. ಧ್ಯಾನವೆಲ್ಲ ಆ ಒತ್ತಡದ ಕಡೆಯೇ.

          ಆಗ ಅಚಾನಕ್ಕಾಗಿ ಆತನ ತಲೆಯಲಿ ಒಂದು ಉಪಾಯ ಹೊಳೆಯಿತು !!
       ಸಾಮಾನ್ಯವಾಗಿ ಕೆಲವು ಬಾರಿ ಕಲಶ ಹೊತ್ತಾಗ 'ಭಾರ' ಬರುತ್ತದೆ ಹೊತ್ತವನಿಗೆ. ಭಾರ ಅಂದ್ರೆ ದೇವರೇ ಮೈ ಮೇಲೆ ಆಹ್ವಾಹನೆಯಾಗುವುದು.

         ಅಲ್ಲೇ ದಾರಿಯ ಪಕ್ಕದಲ್ಲಿನ ಒಂದು ಕೆರೆಯ ಹತ್ತಿರ ಬಂದಿದ್ದೇ ತಡ.. ಕಲಶಕ್ಕೆ ವಿಪರೀತ 'ಭಾರ'ದ ಆಹ್ವಾಹನೆಯಾಯ್ತು. ಮುಂದೆ ಹೋಗದೇ ಅಲ್ಲೇ ಸುತ್ತ ಗಿರಿಗಿರಿ ಸುತ್ತಲು ಶುರು ಮಾಡಿದ ಗುನಗ.
ಏನೇ ಪ್ರಯತ್ನ ಮಾಡಿದರೂ ಮುಂದೆ ಹೋಗುತ್ತಿಲ್ಲ ಕಲಶ.
         ಇಂಥ 'ಭಾರ' ಬಂದ ಪರಿಸ್ಥಿತಿಯಲ್ಲಿ ಅರ್ಚಕರು ಆ ದೇವರ ಹತ್ರ ಹೇಳಾಣೇಳಿಕೆ ಮಾಡಿಕೊಳ್ಳುತ್ತಾರೆ.... ಅವರಿಗೆ ದೇವರ ಭಾಷೆ ಅರ್ಥ ಆಗ್ತದೆ.
         ಸರಿ... ಭಟ್ಟರು ಹೇಳಾಣೇಳಿಕೆ ಶುರು ಮಾಡಿಕೊಂಡರು.
"ಶಾಂತ ಆಗಬೇಕು.. ಶಾಂತ ಆಗಬೇಕು... ಎಂತಾ ತಪ್ಪು ಆಯ್ತು ಹೇಳಿ ಹೇಳಬೇಕು.. ಯಾರು ನೀವು?"
"ಚೌಡೀ" ಅಂತು ಕಲಶ.
"ಯಾವ ಚೌಡಿ? ಏನಾಯ್ತು? ಸರಿಯಾಗಿ ಹೇಳಬೇಕು" ಭಟ್ರು ಮತ್ತೆ ಕೈ ಮುಗಿದರು.
"ಪ್ರತಿಷ್ಠೆ... ಚೌಡಿ" ಎಂದಿತು ಮತ್ತೆ ಕಲಶ ಕುಣಿಯುತ್ತ.
"ಕಳೆದ ವರ್ಷ ಅಷ್ಟೇ.. ಕಳಾಹೀನ ಆದ ಚೌಡಿಯ ಮೂರ್ತಿ ತೆಗದು ಹೊಸ ಮೂರ್ತಿ ಯಥಾ ಯೋಗ್ಯ ಪ್ರತಿಷ್ಠೆ ಮಾಡಿ ಆಗದೆ.. ಮತ್ತೆಂತ ಆಗಬೇಕು ಸ್ವಾಮಿನ್" ಅಂದ್ರು ಭಟ್ರು.
"ಹಳೇ ಮೂರ್ತಿ..." ಎಂದಿತು ದೇವರು.

ಆಗ ಭಟ್ಟರಿಗೆ 'ಧಸಕ್' ಎಂದು ಅರ್ಥ ಆಗಿ ಹೋಯ್ತು. ಎಷ್ಟಂದ್ರೂ ಮಂತ್ರ ತಂತ್ರಗಳ ಅರಿವಿದ್ದ ಅನುಭವಸ್ತ ಪೂಜಾರಿ ಅವರು.
"ಹೌದು ಮಹಾ ದೇವರೇ.. ಹಳೇ ಮೂರ್ತಿ ಇಲ್ಲೇ ಇದೇ ಕೆರೆಯಲ್ಲೇ ವಿಸರ್ಜನೆ ಮಾಡಿ ಆಗದೆ... ಈಗ ಎಂತಾ ಆಗಬೇಕು?" ಭಟ್ಟರ ಪ್ರಶ್ನೆ ಮತ್ತೆ.
"ಸೊಂಟ ಮುಳುಗುವಷ್ಟು ಎದೆ ಮಟ್ಟಕ್ಕೆ ನಿಲ್ಸೂ" ದೇವರ ಆಗ್ರಹ
ತಗಳಿ, ಅಷ್ಟು ಹೇಳಿದ್ದೇ ತಡ... ಭಟ್ರು ಬಂಡಾರಿಗಳಿಗೆ ಸಂಜ್ಞೆ ಮಾಡಿದರು.
ಕಲಶ ಕೆರೆಯತ್ತ ಹೊರಟಿತು. 

....ಅಲ್ಲಿಗೆ.....
ಎದೆಮಟ್ಟ ನೀರಿನಲ್ಲಿ ನಿಂತ ಕಲಶ ಹೊತ್ತ ಗುನಗನ ಜಲಬಾಧೆಯೂ ತೀರಿತ್ತು... ಚೌಡಿಯೂ ಶಾಂತವಾಗಿದ್ದಳು.

ಹಾಗಾಗಿ ಅದಕ್ಕೂ ನಂತರ ಈ ಗಾದೆ ನಮ್ಮಲ್ಲಿ ಚಾಲ್ತಿಯಲ್ಲಿದೆ.
"ಗುನಗನ ಕಷ್ಟ ಗುನಗಂಗೆ"
-------

ಅಫಿಡವಿಟ್:
ಇದು ಕಥೆಯಲ್ಲ ... ನಡೆದ ಘಟನೆ ಎಂದು ಹಿರಿಯರು ಹೇಳ್ತಿದ್ದರು. ಹಲವು ದಿನಗಳ ಹಿಂದೆ ಹಿರಿಯ ಶ್ರೀಕಾಂತ ಭಟ್ಟರು ಅವರದ್ದೇ ಮೂಡ್ ನಲ್ಲಿ ಈ ಕಥೆ ಹೇಳಿ ಮತ್ತೆ ನೆನಪಿನ ಮೆಲುಕು ಹಾಕಿದ್ದರು. ಮತ್ತೆ ಮೊನ್ ಮೊನ್ನೆ ಆದಿತ್ಯ ಸುಬ್ರಹ್ಮಣ್ಯ ಮತ್ತೆ ನೆನಪು ಮಾಡಿಕೊಟ್ಟ. ಅವರೆಲ್ಲರಿಗೂ ಧನ್ಯ.
ಇಂತಹ ಗ್ರಾಮೀಣ ಕಥೆಗಳ ಕಾಪಿಡುವ ಪ್ರಯತ್ನ ಅಷ್ಟೇ. ಯಾವುದೇ ಜನಾಂಗವ ಟೀಕಿಸುವುದಾಗಲೀ ... ವಿಮರ್ಶಿಸುವುದಾಗಲೀ ಅಥವಾ ಪರಿಚಯಕ್ಕಾಗಲೀ ಈ ಬರಹ ಅಲ್ಲ.

ನಮಸ್ಕಾರ.
ಶ್ಯಾಂ ಭಟ್, ಭಡ್ತಿ
17-05-2020


Jan 22, 2020

ಮುಂಬಯಿ

ಮಾಯಾನಗರಿ ಮುಂಬಯಿಯ ಜೀವಾಳ (ಲೈಫ್ ಲೈನ್) ಎಂದೇ ಕರೆಸಿಕೊಳ್ಳುವ ಲೋಕಲ್ ರೈಲಿನ ಪ್ರಯಾಣ ಅದೂ ಮಹಿಳೆಯರಿಗೆ ಎಷ್ಟು ಕಷ್ಟವೆ೦ಬುದನ್ನು ದಿನವೂ ಪ್ರಯಾಣಿಸುವ ನನ್ನ೦ತಹವರು ಮಾತ್ರವೇ ಹೇಳಬಲ್ಲರು. . ದಾದರ್ ನ ಆ ಜನನಿಭಿಢ ಸೆ೦ಟ್ರಲ್ ರೈಲ್ವೇ ಸ್ಟೇಶನ್ನಿನ ಪ್ಲಾಟ್ ಫಾರ್ಮ್ ನ ಕಡೆಗೆ ಲೋಕಲ್ ’ಹಿಡಿಯುವ’ ತರಾತುರಿಯಲ್ಲಿ ಓಡತೊಡಗಿದ್ದೆ. ಬಾ೦ದ್ರಾ ದಿ೦ದ ಥಾಣೆ ಗೆ ದಿನವೂ ಪ್ರಯಾಣ ನನ್ನ ನಿತ್ಯಕರ್ಮ. 8:14ರ ಫಾಸ್ಟ್ ಲೋಕಲ್ ತಪ್ಪಿದರೆ ನಾನು ಸಮಯಕ್ಕೆ ಸರಿಯಾಗಿ ನನ್ನ ಕರ್ತವ್ಯಕ್ಕೆ ತಲುಪಲಾರೆ. ತಲುಪಿಲ್ಲವೆ೦ದಾದರೆ.. ಎಂದೆಲ್ಲ ಮನದಲ್ಲಿ ಬ೦ದು ಓಡುವ ವೇಗ ತನ್ನಿ೦ತಾನೇ ಜಾಸ್ತಿಯಾಯ್ತು. ಮನೆ ಬಿಡಲು ಮೊದಲೇ ತಡವಾಗಿತ್ತು. ಬೆಳ್ಳಿಗ್ಗೆ ಜಗಳ ಮಾಡಿದ ತಮ್ಮನ ಮೇಲಿನ ಸಿಟ್ಟು ಇನ್ನೂ ತಣಿದಿರಲಿಲ್ಲ.

ಗಾಡಿ ಬ೦ದು ನಿ೦ತುಬಿಟ್ಟಿತ್ತಾದ್ದರಿ೦ದ... ಮಹಿಳೆಯರ ಕ೦ಪಾರ್ಟ್ಮೆ೦ಟ್ ವರೆಗೆ ತಲುಪುವುದು ಅಸಾಧ್ಯವೆ೦ದುಕೊ೦ಡು ಸಾಮಾನ್ಯ ಡಬ್ಬಕ್ಕೇ ನುಗ್ಗುವುದೆ೦ದುಕೊ೦ಡೆ . ಆ ತರಾತುರಿಯಲ್ಲಿ ಅಕ್ಕಪಕ್ಕದವರು ಗಮನಕ್ಕೆ ಬರುವುದಿಲ್ಲ. ಗಮನಿಸಿದರೆ ನೀವು ಗಾಡಿ ತಪ್ಪಿಸಿಕೊಳ್ಳುವುದು ಪಕ್ಕಾ... ನುಗ್ಗಾಟದ ಭರದಲ್ಲಿ ನನ್ನ ಬಲಗಡೆಯಿ೦ದ ಯಾರೋ ಒಬ್ಬ ನನ್ನನ್ನು ದಬ್ಬಿದ.. ಸಾಮಾನ್ಯವಾಗಿ ಲೋಕಲ್ ನಲ್ಲಿ ಇದು ಸಾಮಾನ್ಯವೇ ಆದರೂ ಹುಡುಗಿಯೊಬ್ಬಳನ್ನು ಹುಡುಗನೊಬ್ಬ ತಳ್ಳಿದನೆ೦ದರೆ ಅದು ಸಾಮಾನ್ಯ ವಿಷಯವಾಗಲಾರದು.

ತಮ್ಮನ ಮೇಲಿನ ಸಿಟ್ಟು ಇಮ್ಮಡಿಯಾಯ್ತು. ತಳ್ಳಿದ ಅನಾಮಧೇಯನಿಗೆ ಬಯ್ಯುವ ವಿವೇಚನೆಗೂ ಮೊದಲೇ ನನ್ನ ಕೈ ’ಚಟಾರ್’ ಎ೦ಬ ಶಬ್ದದೊ೦ದಿಗೆ ಆತನ ಕೆನ್ನೆಯನ್ನ ತಾಡಿಸಿತ್ತು. ಆತನ ಕಣ್ಣಿಗೆ ಹಾಕಿದ್ದ ಕಪ್ಪು ಗಾಜಿನ ಕನ್ನಡಕ ಬಿದ್ದು ಚೂರಾಯ್ತು.
ಆಗಲೂ ನನ್ನ ಸಿಟ್ಟು ಕಮ್ಮಿಯಾಗಲಿಲ್ಲ... ಮತ್ತೊ೦ದು ಬಿಡೋಣವೆ೦ದು ಅವನ ಕೆನ್ನೆಯ ಕಡೆಗೇ ಕೈ ಚಲಿಸಲಿತ್ತು. ಆಗಲೇ ನಾನು ಆತನ ಮುಖದತ್ತ ನನ್ನ ಗಮನ ಹರಿಯಿತು. -
ಎಡ ಪಾರ್ಶ್ವದ ಕಣ್ಣೇ ಇರಲಿಲ್ಲವಲ್ಲ ಅವನಿಗೆ. !!!!
ಆದ್ದರಿ೦ದಲೇ ಮು೦ದಿನ ಎಡ ಪಾರ್ಶ್ವ ಕಾಣುತ್ತಿರಲಿಲ್ಲ !!! ಅವನು ದಬ್ಬಿದ್ದರಲ್ಲಿ ಆತನ ತಪ್ಪಿರಲಿಲ್ಲ. "sorry ಮೇಡಮ್" ಎ೦ದ ಆತ ಒಡೆದುಹೋದ ಕನ್ನಡಕ ಹಾಗೂ ಅದರ ಚೂರುಗಳನ್ನು ಆಯ್ದುಕೊಳ್ಳತೊಡಗಿದ.

ಒಮ್ಮೆಲೇ ಕುಸಿದು ಹೋದೆ. ಸಿಟ್ಟಿನ ಭರದಲ್ಲಿ ವಿವೇಕ ಕಳೆದುಕೊ೦ಡೆನಲ್ಲ ಎನ್ನಿಸಿತು. ಮನಸ್ಸು ’ಛೀ’ ಎ೦ದ೦ತಾಯಿತು ಒಮ್ಮೆ.
ಕನ್ನಡಕದ ಚೂರುಗಳನ್ನು ಆಯ್ದು ಹೆಕ್ಕಿ ಕಸದ ಬುಟ್ಟಿಗೆ ಹಾಕಿಬ೦ದು "ಕ್ಷಮಿಸಿ ಮೇಡಮ್" ಎ೦ದ ಆತನ ಆ ಬಲಗಣ್ಣಿನ ಹೊಳಪಿನಲ್ಲಿ ತಪ್ಪಿನ ಭಾವ ಸರಿಯಾಗಿಯೇ ವ್ಯಕ್ತವಾಗುತ್ತಿತ್ತು.

  ನನ್ನ ಕಣ್ಣುಗಳು ತೇವವಾಗಿದ್ದವು... ಮ೦ಜಾಗಿದ್ದವು. ಮು೦ದಿನ ೩ ಟ್ರೈನ್ ಗಳನ್ನು ಹಿಡಿಯದಾದೆ.

12/06/2011 (ಹಿಂದೊಮ್ಮೆ ಇನ್ನೆಲ್ಲೋ ಗೀಚಿದ್ದು )

ಒಲವಿನ ಓಲೆ

ಪ್ರೀತಿಯ ಪುಟಾಣಿ ...


ನನ್ನ ಪ್ರೀತಿಯ ಹೇಗೆ ವರ್ಣಿಸಲಿ? ವರ್ಣನೆ ಬಿಡು - ಹೇಗೆ ತಿಳಿಸಿ ಹೇಳಲಿ ? ನಾನೆಷ್ಟು ನಿನ್ನ ಪ್ರೀತಿಸುವೆನೆಂದು ನಿನಗೆ ಅರ್ಥ ಮಾಡಿ ಹೇಳುವಷ್ಟು ಬುದ್ಧಿಯೂ ನನಗಿಲ್ಲ ಎನ್ನಲೇ? ಅಥವಾ ನನ್ನ ಭಾಷೆ ನಿನಗೆ ಅರ್ಥವಾಗದಷ್ಟು ಕೆಟ್ಟದಾಗಿದೆ ಎನ್ನಲೇ? ನಿನ್ನನ್ನೆಷ್ಟು ಪ್ರೀತಿಸುತ್ತೇನೆಂದು ಹೇಗೆ ಹೇಳಲಿ ಚಿನ್ನಾ?


ಹಾಗಂತ ನಿನ್ನ ನನ್ನ ಪ್ರೇಮ ಎಷ್ಟು ಗಾಢವಾದದ್ದೆಂದು ನಾವಿಬ್ಬರೇ ಅಲ್ಲ ನಿನ್ನಮ್ಮನೂ ಬಲ್ಲಳು. ನಿನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖ ನಾನಲ್ಲ. ನಿನ್ನೆ ನನ್ನೆದೆಯ ಮೇಲೆ ಮಲಗಿ ನಿದ್ದೆ ಹೋದೆಯಲ್ಲ ಆಗಲೇ ಗೊತ್ತಾಯ್ತ ನಿನ್ನ ಪ್ರೀತಿಯ ಆಳ. ಇಂದು ನಿನ್ನ ಆ ಪುಟ್ಟ ಕೈಗಳ ಮೇಲೆ ನ ತಲೆಯಿಟ್ಟು ಮಲಗಿ ನಿನ್ನ ಭವಿಷ್ಯದ ಕನಸು ಕನಸಿದೆನಲ್ಲ - ನಿನ್ನ ಅದ್ಯಾವುದೋ ಭಾಷೆಯಿಂದ ನೀ ಏನೇನೋ ಗೊಣಗಿದೆಯಲ್ಲ... ಆ ಭಾಷೆ ನನಗರ್ಥವಾಗದಿದ್ದರೂ ನಿನ್ನ ಪ್ರೀತಿಯ ಅರಿತೆ ಮುದ್ದೂ . ಆ ನಿನ್ನ ಮೂಕ ಭಾಷೆಯಲ್ಲಿ ಎಷ್ಟೊಂದು ಒಲವಿತ್ತು !! ಆ ನಿನ್ನ ಒಂದೇ ಒಂದು ನಗು ನನ್ನ ಎಲ್ಲ ಚಿಂತೆಗಳನ್ನ ದೂರ ಮಾಡುತ್ತಲ್ಲ !! ಆಶ್ಚರ್ಯವಾಗ್ತಿದೆ ನನಗೆ.


ನಿನ್ನ ಮೇಲಿನ ನನ್ನ ಪ್ರೀತಿ.. ಅದು ಪ್ರೀತಿಯಾ?? ಪ್ರೇಮವಾ? ವಾತ್ಸಲ್ಯವಾ? ಅರಿಯಲಾರದಷ್ಟು ಅಜ್ಞಾನಿ ನಾನು. ನಿನಗೇನಾದರೂ ಅರ್ಥವಾದರೆ ದಯವಿಟ್ಟು ನನ್ನ ಭಾಷೆಯಲ್ಲಿ ... ನಂಗೆ ಅರ್ಥವಾಗುವ ತರಾ ಹೇಳ್ತೀಯ? ನಿನ್ನ ಭಾಷೆಯನ್ನು ಅರ್ಥೈಸಿಕೊಳ್ಳುವಷ್ಟು ಜ್ಞಾನ ನನಗಿಲ್ಲ ಪುಟ್ಟೀ.


I Love u .


27/3/2009 (ಹಿಂದೊಮ್ಮೆ ಇನ್ನೆಲ್ಲೋ ಗೀಚಿದ್ದು)