Dec 13, 2019

ನಲವತ್ತರ ನಲಿವು

ಮಾನವನ ಆಯುಮಾನದಲ್ಲಿ ವಯಸ್ಸಿಗೂ ಆರೋಗ್ಯಕ್ಕೂ ಒಂದು ನಂಟಿದೆ.  ಎಷ್ಟೇ ಆರೋಗ್ಯವ ಕಾಪಾಡಿಕೊಂಡು ಬಂದ ಮನುಷ್ಯರಲ್ಲೂ ವಯೋಸಹಜವಾದ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಉದಾ: 'ಚಾಲೀಸು' ಹೆಸರೇ ಸೂಚಿಸುವಂತೇ ನಲವತ್ತು ಆಗುತ್ತಿದ್ದಂತೆ ನಮಗೆ ಓದಲು ಚಸ್ಮಾ ಬೇಕು.

ದಿಲ್ಲಿಯಲ್ಲಿ ಒಬ್ಬರು ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರು.  ಕನ್ನಡಿಗರು... ನಮ್ಮ ಕಡೆಯವರು. ಹೆಸರು ರಮೇಶ ವರ್ಧನ್. 

ಮಾತಿನಲ್ಲಿ ಚತುರ... ಅವರ ಮಾತನ್ನು ಕೇಳುವ ಸುಸಂದರ್ಭವೊಂದು ಒದಗಿ ಬಂದಿತ್ತು ನನಗೆ. 
ಅವರು ಹೇಳ್ತಾರೆ...
ಪಂಚೇಂದ್ರಿಯಗಳಲ್ಲಿ ಕಣ್ಣು ವಿಶೇಷವಾದುದು. ಎಲ್ಲಾ ಪಂಚೇಂದ್ರಿಯಗಳ ಕಾರ್ಯಗಳ ಒಟ್ಟಿಗೇ ನಾವು ಕಣ್ಣಿನ ಕಾರ್ಯವನ್ನೂ ಜೋಡಿಸುತ್ತೇವೆ. ಉಳಿದ ಪಂಚೇಂದ್ರಿಯಗಳಾದ ಮೂಗು, ಕಿವಿ, ನಾಲಿಗೆ ಮತ್ತು ಚರ್ಮ ಗಳ ಎಲ್ಲ ವಿಷಯಗಳಲ್ಲೂ ನಾವು ನೋಡುತ್ತೇವೆ ಅಥವಾ 'ನೋಡು' ಎಂಬ ಪದಬಳಕೆ ಮಾಡುತ್ತೇವೆ.
ಉದಾ: 
1. ಊಟ ಚೆನ್ನಾಗಿದೆ.. ಉಂಡು ನೋಡು. (ನಾಲಿಗೆ)
2. ಹಾಡನ್ನು ಕೇಳಿ ನೋಡು (ಕಿವಿ)
3. ಈ ಪರಿಮಳ ಚೆನ್ನಾಗಿದೆ.. ಮೂಸಿ ನೋಡು (ಮೂಗು)
4. ಬಟ್ಟೆ ಚೆನ್ನಾಗಿದೆ ಮುಟ್ಟಿ ನೋಡು (ಸ್ಪರ್ಶ)
ಹಾಗಾಗಿ ಕಣ್ಣು  ದೇವರು ನಮಗೆ ಕೊಟ್ಟ ವರ. ಅದರಿಂದಾಗಿಯೇ ಈ ಜಗ ಸುಂದರ.
ಈಗ ಯೋಚಿಸಿ ನೋಡಿ. (ಮಿದುಳು)  ಕಣ್ಣಿನ ಕಾರ್ಯದ ಒಟ್ಟಿಗೆ ಇತರ ಇಂದ್ರಿಯಗಳ ಕಾರ್ಯವ ಸೇರಿಸಬಹುದೇ?! (ನಮ್ಮ ವಿವೇಚನಾ ಶಕ್ತಿಗೆ ಅದನ್ನು ಬಿಡುತ್ತಾರವರು)

ಇನ್ನೂ ಮುಂದರಿದು ಅವರು ಹೇಳ್ತಾರೆ...
ಎಲ್ಲ ಮಶೀನುಗಳಿಗೂ ಎಲ್ಲ ಸಾಧನಗಳಿಗೂ ಒಂದು ವಾರಂಟಿ ಪೀರಿಯಡ್ ಇರ್ತದೆ. ಟಿವಿ, ವಾಷಿಂಗ್ ಮಷೀನ್, ಕಾರು, ಬೈಕು ಇತ್ಯಾದಿಗಳು. ಅವೆಲ್ಲವಕ್ಕೂ ವಾರಂಟಿ ಪೀರಿಯಡ್ ನಂತರ ಸರ್ವೀಸ್ ಸೆಂಟರ್ ಗೆ ಕೊಂಡೊಯ್ಯಬೇಕಾಗುತ್ತದೆ. ಅಷ್ಟೇ ಅಲ್ಲ ಸರ್ವೀಸ್ ಚಾರ್ಜ್ ಅನ್ನೂ ತೆರಲೇಬೇಕು. ಅಲ್ಲವೇ? 
ಹಾಗೇನೇ ನಮ್ಮ ದೇಹ. ಆ ದೇವರೆಂಬ ಮ್ಯಾನುಫ್ಯಾಕ್ಚರರ್ ನಮ್ಮನ್ನೆಲ್ಲ ತಯಾರಿಸಿ ಬಿಟ್ಟಿದ್ದಾನೆ. ವಂದು ವಾರಂಟಿ ಅಂತ ಕೊಟ್ಟಿದ್ದಾನೆ. ಆ ವಾರಂಟಿ ಪೀರಿಯಡ್ಡೇ 40 ವರ್ಷಗಳು. ಅದಕ್ಕೂ ನಂತರ ಈ ದೇಹವೆಂಬ ಗಾಡಿ.. ಆಸ್ಪತ್ರೆ ಎಂಬ ಸರ್ವಿಸ್ ಸೆಂಟರಿಗೆ ..  ಡಾಕ್ಟರೆಂಬ ಮೆಕ್ಯಾನಿಕ್ ಹತ್ತಿರ ಹೋಗಲೇಬೇಕು. ಚಾರ್ಜ್ ತೆರಲೇಬೇಕು. ಹಾಗಾದಾಗ ಮಾತ್ರ ದೇಹವೆಂಬ ಗಾಡಿ ಮುನ್ನಡೆಯುತ್ತದೆ. ಓಡದಿದ್ದರೂ ನಡೆಯಬಹುದು !!

ಹಾಗೇನೇ ಚಶ್ಮಾ, ನಲವತ್ತರ ನಂತರ ಬರುವ ಕನ್ನಡಕ ದಿಂದ ಬೇಸರಿಸದಿರಿ. 40 ವರ್ಷ ನಡೆಯಿತಲ್ಲ ಎಂದು ಹೆಮ್ಮೆಪಡಿ. ಬಿಪಿ ದಯಾಬಿಟೀಸು ಬಂತಲ್ಲಾ ಎಂದು ಬೇಸರ ಬೇಡ... 40 ರ ವರೆಗೆ ಇದೇನೂ ಇರಲಿಲ್ಲವಲ್ಲ ಎಂದು ಖುಷಿಪಡಿ. 40 ವರ್ಷದವರೆಗೆ ಖರ್ಚಿಲ್ಲದೆ ಬದುಕಿದೆವಲ್ಲ ಎಂದು ಸಂತೋಷವಿರಲಿ. ಇನ್ನು ಮುಂದೆ ಕೊಡಲ್ಪಡುವ ಚಾರ್ಜುಗಳ ಬಗ್ಗೆ ಗಮನವಿರಲಿ ಆದರೆ ಖೇದ ಪಡಬೇಡಿ. ಜೀವನವ ಆನಂದಿಸುವುದ ಕಲಿಯೋಣ. ಗ್ಲಾಸೊಂದರಲ್ಲಿ ಅರ್ಧ ಖಾಲಿ ಎನ್ನುವ ಬದಲಿಗೆ ಅರ್ಧ ನೀರು ತುಂಬಿದೆ ಎನ್ನುವ ಮನಸ್ಥಿತಿ ನಮ್ಮದಾಗಲಿ. 

"ನಲವತ್ತರ ನರಳು" "ಅರವತ್ತರ ಮರುಳು" ಎಂಬ ಗಾದೆಗಳ ಸುಳ್ಳಾಗಿಸಿ  "ನಲವತ್ತರ ನಲಿವು", "ಅರವತ್ತರ ಅರಳು" ವ "ಅರವತ್ತರ ಅರಿವು" ನಮ್ಮದಾಗಲಿ.

ನನ್ನಂತಹ ಕಿಡಿಗೇಡಿ ಬುದ್ಧಿಯವರಿಗೆಲ್ಲ ತಲೆಯಲ್ಲೊಂದು ಹುಳ ಬಿಟ್ಟು ನಡೆದರು ವರ್ಧನರು. 40 ರ ಮೊದಲೇ ಅನಾರೋಗ್ಯ ಪೀಡಿತರಾದವರು, ತಲೆಯ ಕೂದಲು ಉದುರಿ ಬೊಕ್ಕಲಾದವರೆಲ್ಲ ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟುಗಳೇ?!  

ನಮಸ್ಕಾರ
ಶ್ಯಾಮ್ ಭಡ್ತಿ
-13/12/2019 ಶುಕ್ರವಾರ ರಾತ್ರಿ 10 ಗಂಟೆ. 



Dec 1, 2019

ಸುಟ್ ಅರಿಸುಟ್ಟು

ನಾ 2ನೇತ್ತಿ ಲಿ ಇರಕಾರೇ 

ಒಂದಿನ... ಬೆಳಬೆಳಗ್ಗೆ...
ಛಳಿ ಎಂದು ವಲೆಯ ಮೇಲೆ ದೋಸೆ ಎರೆತಾ ಕುಂತ ಅಮಮ್ಮನ(ಅಜ್ಜಿ) ಹತ್ರ ಹೋಗಿ ವಲೇ ಮೂಲೆಲಿ ನಾನೂ ಕುಂತೆ. ನನ್ನ ದಿನದ ದಿನಚರಿ ಅದು. 

'ತಮಾ ಬಂದ್ಯಾ? ಇಕ' ಹೇಳಿ ಅಜ್ಜಿ ಅಲ್ಲೇ ಒಂದು ಸಣ್ಣ ಬಾಳೆ ಕೀಳೆ ಹರ್ದು ನನ್ನ ಮುಂದೆ ಇಟ್ತು. "ನಿಂಗೆ ಕಣ್ ಕಣ್ ದ್ವಾಸ್ಯ... ಬಟನ್ ದ್ವಾಸ್ಯ.. ಕಕ್ಕೋಡ್ ದ್ವಾಸ್ಯ ?" ಅಂತು. 

ಕಣ್ ಕಣ್ ದ್ವಾಸೆ ಅಂದ್ರೆ ದಪ್ಪ ದೋಸೆ ವ ಸೆಟ್ ದೋಸೆ.
ಬಟನ್ ದ್ವಾಸೆ ವಂದು ಹುಟ್ಟು ಹಿಟ್ಟಿನಲ್ಲಿ 10 ದ್ವಾಸೆ .. ಸಣ್ಣ ಮಕ್ಕಳಿಗೆಂದೇ ಮಾಡುವ ಪುಟ್ಟ ಪುಟ್ಟ ದೋಸೆಗಳು.
ಕಕ್ಕೋಡ್ ದ್ವಾಸೆ ಅಂದ್ರೆ ಘಟ್ಟದ ಮೇಲಿನ ತೆಳ್ಳೇವು..

ಘಟ್ಟವನ್ನೆಂದೂ ನೋಡದ, ಹೋಗದ, ಕೇವಲ ಘಟ್ಟದ ಹೆಸರ ಕೇಳಿದ ನನ್ನ ಅಜ್ಜಿಗೆ ಈ 'ತೇಳ್ಳೇವು' ಎಂಬುದರ ಕಲ್ಪನೆ ಯ ಕೊಟ್ಟಿದ್ದೇ ನಾನು. 
 ಹುಟ್ಟಿ ಬೆಳೆದ ಕಕ್ಕೋಡು  ಮತ್ತಲ್ಲಿನ ದೋಸೆ ನಾನ್ಯಾವಾಗಲೂ ಬಯಸಿದ್ದೆ. ಎಂದೂ ಆ ಅಜ್ಜಿ ಕಕ್ಕೋಡ್ ದ್ವಾಸೆ ಮಾಡಲೇ ಇಲ್ಲ. ಮಾಡಲೂ ಬರ್ತಿರಲಿಲ್ಲ ಎಂಬುದು ವಾಸ್ತವ.
ಇರಲಿ....

"ಬಟನ್ ದ್ವಾಸೆ" ಎಂದೆ. ಇಷ್ಟವಾದುದು ತೆಳ್ಳೇವೇ ಆದರೂ ಮಾಡಲು ಬರದ ಅಜ್ಜಿಯ ಹರುಕು ದೋಸೆ ತಿನ್ನುವ ಇಷ್ಟ ನನಗಿರಲಿಲ್ಲ. ಹಾಗಾಗಿ "ಬೆಲ್ಲ ತುಪ್ಪ" ಎಂದೆ. 
ಸರಿ ... ಪಕ್ಕದಲ್ಲೇ ಇದ್ದ ಡಬ್ಬಗಳಿಂದ ಅವೂ ಬಾಳೆ ಕೀಳೆಗೆ ಅಜ್ಜಿಯಿಂದ ಬಡಿಸಲ್ಪಟ್ಟವು. ದೋಸೆ ಇನ್ನೂ ಬೆಂದಿರಲಿಲ್ಲ. ಅದರಲ್ಲಿ ಬೀಳುತ್ತಿದ್ದ ಕನ್ನು ಗಳು ಕಣ್ಣು ಬಿಡುತ್ತಿದ್ದವು 😳 ಅಷ್ಟೇ. 
ಒಂದು ಒಲೆಯ ದೋಸೆ ಬಂಡಿಯ ಮೇಲೆ ನನ್ನ ಬಟನ್ ದೋಸೆ ಕಣ್ಣು ಬಿಡುತ್ತಿದ್ದರೆ, ಇನ್ನೊಂದು ಒಲೆಯ ಮೇಲೆ ಚಾ ಪಾತ್ರೆ ಯಲ್ಲಿ ತನಗೆ ಸೇರಿಸುವ ಹಾಲನ್ನು ಕಾಯುತ್ತ ಚಾ 'ಕಣ್ಣು' ಬಿಡುತ್ತಿತ್ತು.... ಹಾಲು ಇನ್ನೂ ಬರಲಿಲ್ಲವೆಂದು  ಕೆಂಪಾಗುತ್ತಲಿತ್ತು. 
ನಾ ಇವೆರಡರ ಜೊತೆ.. ಎಲ್ಲ ಕೆಲಸ ಒಟ್ಟಿಗೇ ಮಾಡುವ multitasking ಅಜ್ಜಿಯ ಕೈ ಚಳಕವನ್ನೂ ಈಕ್ಷಿಸುತಲಿದ್ದೆ. 
ಅಷ್ಟರಲ್ಲಿ.....

ದೋಸೆ ಬೆಂದಿತು.. ಅಜ್ಜಿಯ ಕಾವಲಿ ಸೊಟಗ ದಿಂದ ಕಮುಚಿ ಅಡಿಯಾಗಿ ಬಿತ್ತು. ಮತ್ತೆ  ಅರೆಬರೆ ಕಂದು ಬಣ್ಣಕ್ಕೆ ತಿರುಗಿ ನನ್ನ ಬಾಳೆ ಕೀಳೆಗೆ ನೇರವಾಗಿ ಕಾಲಿಸೊಟ್ಗ ದಿಂದ ಬಿತ್ತು. 


ಬಿಸಿಯಾದ ಬಟನ್ ದೋಸೆಗೆ ಬೆಲ್ಲ ತುಪ್ಪ ಮೆತ್ತಲು ಕೈ ಹಿಂಜರಿದರೂ ನೀರ್ ಸುರಿಸುವ ನಾಲಿಗೆ ಕೈಗೆ ಒತ್ತಾಯ ಮಾಡುತ್ತಿತ್ತು.. ಇನ್ನು ಅದು ಬೆಲ್ಲ ತುಪ್ಪ ಮೆತ್ತಿಕೊಂಡು ಇನ್ನೇನು ನನ್ನ ಬಾಯಿಗೆ  ಬೀಳಬೇಕು. 
ಇಂಥ ಉದ್ವೇಗದಲ್ಲಿ ನಾನಿರುವಾಗ.....
 ಅಚಾನಕ್ಕಾಗಿ ಅಜ್ಜಿಯ ಕೈಯಿಂದ ಚಾ ಸೋಸುವ "ಅರಿಸುಟ್ಟು" ಜಾರಿ ನೇರವಾಗಿ ಒಲೆಗೆ ಬಿತ್ತು. ಹಾಗೆ ನಾನಂದುಕೊಂಡೆ. ಆದರೆ ನಿಜಾಂಶ ಹಾಗಿರಲಿಲ್ಲ. 

"ಅಮಮ್ಮಾ..... ಎಂತಾ ಆತೂ.....?!" ಎಂದೆ... ಹೆದರಿ ವಂದಡಿ ಹಿಂದೆ ಸರಿದಿದ್ದೆ. 

ಅಜ್ಜಿ ಬೊಚ್ಚು ಬಾಯಲ್ಲಿ ನಕ್ಕಳು.. ಅವಳ ಆ ನಗೆ ಅರ್ಥವಾಗಲಿಲ್ಲ ನನಗೆ.
'ಅರಿಸುಟ್ಟು' ಬುರಬುರನೆ ಗರಟೆಯ ತರ ಉರಿಯತೊಡಗಿತ್ತು. ನಾನಂದೆ 'ಅರಿಸುಟ್ ಹೋತು ಅಮಮ್ಮಾ'

"ಯೇ ಇಲ್ಯ, ಹೆದರಡಾ ಮಗಾ... ಅರಿಸುಟ್ಟು ಕಟ್ಟೋಗಿತ್ತು .. ವಂದ್ ಗಳಗೆ (ಘಳಿಗೆ) ಸುಟ್ರೆ ಸಮಾ ಆಗ್ತು ... ಅದ್ಕೇ ಬೆಂಕಿಲ್ ಹೊತಾಕಿದ್ದೆ" ಅಂತು ಅಜ್ಜಿ.

ವಂದರೆಕ್ಷಣ ನನಗೇನೂ ಹೊಳೆಯಲೇ ಇಲ್ಲ... ಕೀಳೆಯಲ್ಲಿದ್ದ ಬಟನ್ ದ್ವಾಸೆ ತಣ್ಣಗಾಗಿತ್ತು... ಹಾಕಿದ್ದ ದಪ್ಪನೆಯ ತುಪ್ಪ ಬೆಂಕಿಯ ಶಾಖಕ್ಕೆ ಕರಗಿ, ನನ್ನ ತೋರುಬೆರಳಿನಿಂದ ತಿರುಗಿ ಬೆಲ್ಲದ ಜೊತೆ ಸೇರಿ ಹೋಗಿತ್ತು.

ಅಜ್ಜಿ ಅರಿಸುಟ್ಟು ತೆಗೆದು ಟಪಟಪನೆ ನೆಲಕ್ಕೆ ಬಡಿದಳು.. ಕರಿ ಕರಿ ಬೂದಿ ಕರಿನೆಲದಲ್ಲೂ ಕರಿದಾಗಿ ಕಂಡವು. ಬಳಿಕ ಅದೇ ಒಲೆಯ ಬೆಳಕಿನಲ್ಲಿ ಅರಿಸುಟ್ಟ ತೋರಿಸಿದಳು "ನೋಡು ಎಷ್ಟ್ ಮಡೀದಾತು ಹೌದಾ?!"

ನಿಜವಾಗಲೂ ಅಜ್ಜಿ ಜಾದೂ ಮಾಡಿದ್ದಳು. 

ಅದೇ ಅರಿಸುಟ್ಟಿನಲ್ಲಿ ಚಾ  ಸೋಸುತ್ತ ಕೇಳಿದಳು "ನೀಚಾ ಕುಡಿತ್ಯಾ?"

ನನ್ನ ಬಾಯಿ ತೆರೆದೇ ಇತ್ತು. 

🙏🏻
(ವಂದನಾರ್ಹರು ಮತ್ತು ಕಾರಣೀಭೂತರು ಮತ್ತು ಪ್ರಚೋದನೆ:
ಕಥೆಗೆ ವಿಷಯ ಒದಗಿಸಿದ ಮತ್ತು ಬರಹದ ಮಧ್ಯೆ ಲೇಖನಿಯೆಳೆದು ತಿದ್ದಿದ ಹಲ್ಬಣದ ರವ್ಯಣ್ಣ, ಅನ್ಸತಗೆ, ಡಾಪೂ,
ಜವಿಕದ ಅರ್ಚಕ್ಕ, ಸುಭಾಸಣ್ಣ, ಸುಶ್, ಮತ್ತು ಇತರರು
ಎಲ್ಲರಿಗೂ ಧವಾ)

01/12/2019 

Feb 8, 2019

ಮೂಷಕ ರಾಜ (ಲಲಿತ ಪ್ರಬಂಧ)

ಮೂಷಕರಾಜ (ಇಲಿ ಬುಡ್ಕ )

      ಕಳೆದ ಕೆಲ ದಿನಗಳಿಂದ ನಮ್ಮ ಮನೆಯಲ್ಲಿ ವಂದು (ವಂದೇ ವಂದು) ಇಲಿ ರಾಯನ ಕಾರುಬಾರು ನಡೀತಿತ್ತು. ಕಂಡಕಂಡಲ್ಲಿ ಯಾವುದೇ ಭಯ ಇಲ್ಲದೇ ಅದು ಓಡಾಡ್ತದೆ. ನಮ್ಮ ಮನೆಯ ಎಲ್ಲಾ ವಸ್ತುಗಳೂ ಅದಕ್ಕೆ ಪ್ರಿಯವಲ್ಲವಾದರೂ ನಮ್ಮ ಊಟ ತಿಂಡಿಯಲ್ಲೇ ಆತನದ್ದೂ ವಂದು ಪಾಲು ಅಂದುಕೊಂಡಿದ್ದಾನೆ ಆತ. (ಇಲ್ಲಿಂದ ಶುರುವಾಯ್ತು ನೋಡಿ 'ಅದ'ನ್ನು 'ಅವ'ನೆಂದು ಕರೆಯುವ ರೂಢಿ!) 

ಆತನ ಪ್ರವೇಶ ಹೇಗಾಯ್ತು? 
     ವಂದು ಸಂಜೆ ನಾನು ಸುಮ್ಮನೇ ಮೊಬೈಲ್ ವತ್ತುತ್ತ ಕುಂತಿದ್ದೆ. ನನ್ನ ಅರ್ಧಾಂಗಿ 'ಅಗ್ನಿಸಾಕ್ಷಿ'ಯಾಗಲೂ ಠೀವಿಯಿಂದ ಟಿವಿ ನೋಡುತ್ತಿದ್ದಳು. ನನ್ನ 9 ವರ್ಷದ ಮಗಳಿಗೆ ದಿನಾಲೂ ಆಟದ ಸಮಯವದು... ಆಟ ಮುಗಿಸಿ ಬರುವಾಗ ಮನೆಯ ಹೆಬ್ಬಾಗಿಲನ್ನು ತೆರೆದಿಟ್ಟೇ ಬಂದಳು. ಅವಳ ಹಿಂದೇ ಹಿಂದೇ ಏನೋ ಸರಿದು ಬಂದಂತಾಯ್ತೆಂದು ನನ್ನ ಕಣ್ಣುಗಳಿಗರಿವಾದಂತಾಯ್ತು. ಏನೆಂದು ಸರಿಯಾಗಿ ನೋಡುವಷ್ಟರಲ್ಲಿ ಪುಟ್ಟ ಇಲಿಯೆಂದು ತಿಳಿಯಲು ತುಂಬ ಸಮಯ ಬೇಕಾಗಲಿಲ್ಲ. ಅಷ್ಟರಲ್ಲಿ ಇಲಿಯರಾಯನಿಗೆ ಅಡುಗೆಮನೆ ಸೇರಿಯಾಗಿತ್ತು.

      ಮುಂದೆ ಇದ್ದಿದ್ದೇ.. ಇಡಿ ದಿನ ಯಾರಿರಲೀ ಇಲ್ಲದಿರಲೀ ಆತನ ಆಟಾಟೋಪ ಹೇಳತೀರದು. ನೆನೆಸಿಟ್ಟ ಬಾದಾಮಿ ತಿಂಬ....  ತಂದಿಟ್ಟ ತರಕಾರಿ ಹೆರೆವ... ಅಡುಗೆ ಮಾಡಿಟ್ಟ ಪಾತ್ರೆಯ ಮಗುಚುವ ಭೂಪ.

    ಒಂದು ದಿನ ಹೋಗೀ ಹೋಗೀ ನಮ್ಮ ಮನೆಯ ದೇವರ ಕೋಣೆ ಸೇರಿಕೊಂಡ. ಪ್ರತಿದಿನ ಬೆಳಿಗ್ಗೆ ದೇವರ ಪೂಜೆ ಮಾಡುವಾಗ ದೇವರ ಪೀಠದಲ್ಲಿದ್ದ ಗಣೇಶನ ವಿಗ್ರಹ ಅಡ್ಡ ಬಿದ್ದಿರುತ್ತಿತ್ತು. ತಲೆಯ ಮೇಲಿದ್ದ ದೂರ್ಬೆಯ ಕಡ್ಡಿಗಳು ನಾಪತ್ತೆಯಾಗಿರ್ತಿದ್ದವು. ಇದನ್ನರಿತ ನನ್ನ ಮಗಳಿಗೆ ಈತ ಮೂಷಕರಾಜನಾಗಿ ಕಾಣತೊಡಗಿದ!.

     ಹೇಗಾದರೂ ಮಾಡಿ ಈ ಇಲಿಬುಡ್ಕಕನ ಹೊರಹಾಕುವ ನನ್ನ ಉಪಾಯಕ್ಕೆ ತಡೆಯೊಡ್ಡಿದಳು ಮಗಳು. ನನಗೇ ಸಮಝಾಯಿಶಿ ಕೊಟ್ಟಳು ... 'ಪಪ್ಪಾ, ಅದು ಸಚ್ ಮೇ ಮೂಷಕರಾಜನೇಯ, ನಹಿ ತೋ ಅಂವ ಗಣಪತಿ ಮೂರ್ತಿ ಕಾ ದೂರ್ಬೆ ತಿಂದಿಕ್ಕಿ ಹೋಗತಿದ್ನಿಲ್ಲೆ'
(ಅವಳ ಕನ್ನಡ ಭಾಷೆಯ ಮೇಲಿನ ಹಿಡಿತವೇ ಹಾಗೆ. ಅದೂ ಜಗಳವಂತೂ ಪಕ್ಕಾ ಕಂದಿಯಲ್ಲಿಯೇ, ಕನ್ನಡ ಮತ್ತು ಹಿಂದಿಗಳ ಮಿಶ್ರಣ. ದಿಲ್ಲಿಯಲ್ಲಿಯೇ ಹುಟ್ಟಿ ಬೆಳೆದಿದ್ದು ಅವಳು)
    'ಹೋಗೇ ಕೂಸೇ, ಮೂಷಕರಾಜನಡ. ಖರೇ ಮೂಷಕರಾಜನೇ ಆಗಿದ್ರೆ ಅದೆಂತಕೆ ಗಣಪತಿ ಯ ದೂಡಾಕಿಕ್ಕೇ ಹೋಗತು ?' ನನ್ನ ಅನುಮಾನ.
    'ಅಲ್ದಾ ಪಪ್ಪಾ, ಗಣಪತಿ ದೂಡಾಕಿದ್ನಿಲ್ಲೆ ಅಂವ, ದೂರ್ಬೆ ತಿನ್ನಕಾರೆ ಬಿದ್ದೋಗ್ತು ಮೂರ್ತಿ' ಮಗಳ ಬುದ್ವಂತಿಕೆ !
     ಒಟ್ಟೂ ವಂದು ಸಣ್ಣ ಯುದ್ಧವೇ ನಡೆದು ಹೋಯ್ತು ಮನೆಯಲ್ಲಿ. ಆ ಇಲಿಯ ಹೊಡೆದಟ್ಟಬೇಕು ಎಂಬ ತೀರ್ಮಾನವ ಕೈ ಬಿಟ್ಟೆ. 

     ಅಷ್ಟರಲ್ಲಿ ದೀಪಾವಳಿ ಬಂತು ನೋಡಿ. ಉತ್ತರ ಭಾರತದಲ್ಲಿ ದಿನಾ ಮನೆಯನ್ನು ಸಾರಿಸಿ ಬಳಿದು ರಂಗೋಲಿ ಹಾಕುವ ಜಾಯಮಾನವಿಲ್ಲ. ವರ್ಷಕ್ಕೊಂದು ಸಲಿ ದೀಪಾವಳಿಗೂ ಮೊದಲು ಮನೆಯನ್ನೊಮ್ಮೆ ಸ್ವಚ್ಛ ಮಾಡಿಬಿಡ್ತಾರೆ. ಹುಟ್ಟಾ ಆಲಸಿಯಾದ ನಮಗೂ ಅದೇ ಸರಿ ಅನಿಸಿದ್ದೂೂ ಅದೇ ಚಟ ಹತ್ತಿದ್ದೂ ಆಶ್ಚರ್ಯವೇನಲ್ಲ.

      ಮನೆ ಬಳಗುವ ಕಾರ್ಯಕ್ರಮದಲ್ಲಿ ದೇವರ ಕೋಣೆಯೂ ಸ್ವಚ್ಛವಾಯ್ತು.... ಮೂಷಕನ ಠಿಕಾಣಿಯೂ ಪತ್ತೆಯಾಯ್ತುು. ಮೂಷಕರಾಜ ಹೆದರಿ ಓಡಿದ. ಆತನ ಠಿಕಾಣಿಯಲ್ಲಿ ಕೇಜಿಗಟ್ಟಲೆ ದೂರ್ಬೆಯ ಜೊತೆ ಗಜ್ಜರಿ, ಬಾದಾಮಿ, ಗೋಡಂಬಿಗಳೂ ಬರಾಮತ್ತಾದವು. ಮೂಷಕ ಓಡಿದ ಎಂದು ನಾನು ಖುಷಿಪಟ್ಟರೆ ಮಗಳು ಬೇಸರಗೊಂಡಳು. 'ಪಾಪಾ ಇನ್ನೆಲ್ಲಿ ಹೋಗ್ತನನ ಅಂವ...'  ಎಂದು ಲೊಚಗುಟ್ಟಳು. ಜೊತೆಯಲ್ಲೇ ನನ್ನನ್ನೂ ತರಾಟೆಗೆ ತಗೊಂಡಳು 'ಪಪ್ಪಾ ಎಂತಕೆ  ಭಗಾಯಾ ಉಸ್ ಕೋ ನೀನು ?!'
      'ಎಲಾ ಇಸ್ಕಾ ?! ನಾ ಯಂತ ಮಾಡವೇ? ಮನೆ ಚೊಕ್ಕ ಮಾಡುದು ಬೇಡದನೇ? ಹೋಗ್ಲಿ ಬಿಡು ಹೋಳಿ ಮಾಡ್ತಿದ್ದ... ನಂಗಳ ಬಾದಾಮಿ ಗೋಡಂಬಿ ಎಲ್ಲ ಹೊತ್ಕ ಹೋಜ ನೋಡು ನಿನ್ನ ಮೂಷಕರಾಜ'  ಸಂಕಷ್ಟ ತೊಲಗಿದ ದನಿಯಿತ್ತು.
      'ನಂದಲ್ಲ, ಗಣೇಶ್ ಜೀ ಯ ಮೂಷಕರಾಜ ಅಂವಾ, ಅಂವನ ಭಗಾಯಸಿದ್ದೆ ನೀನು ಪಾಪ' ಅಂದ ಕೂಸಿನ ಕಣ್ಣಲ್ಲಿ ನೀರಿತ್ತು... ನಮ್ಮವರನ್ನು ಕಳಕೊಂಡ ದುಃಖವಿತ್ತು.  
       ಮಕ್ಕಳ ಮುಗ್ದ ಮನಸ್ಸೇ ಹಾಗೆ, ಎರಡು ದಿನಗಳಲ್ಲಿ ವಿಷಯ ಮರೀತಾಳೆ ಅಂದುಕೊಂಡು ಸುಮ್ಮನಾದೆ. 

      ಆ ದಿನ ಹಾಗೇ ಕಳೆಯಿತು. ಆದರೆ ಹೋದೆಯ ಪಿಶಾಚಿ ಅಂದರೆ ಬಂದೆ ಗವಾಕ್ಷಿಲಿ ಎಂಬಂತೇ ಮರುದಿನವೇ ಹಾಜರಾಗಿಬಿಟ್ಟಿದ್ದ ಆಸಾಮಿ!! 

      ಅಂದು ಬೆಳ ಬೆಳಗ್ಗೆ ಸ್ನಾನಕ್ಕೆ ಹೋಗಿದ್ದಳು ಮಗಳು. ಬಚ್ಚಲಮನೆಯಿಂದ ಕಿರುಚಿದ್ದು ಕೇಳಿಸಿತು. 'ಅಮ್ಮಾ... ಪಪ್ಪಾ... ಮೂಷಕರಾಜ್ ವಾಪಿಸ್ ಆಯಾ....' ಎನ್ನುತ್ತಲೇ ಹುಟ್ಟುಡುಗೆಯಲ್ಲೇ ಬಚ್ಚಲಿನಿಂದ ಓಡಿ ಬಂದಿದ್ದಳು. ಬಚ್ಚಲಿನಲ್ಲಿ ಅಚಾನಕ್ಕಾಗಿ ಕಂಡ ಮೂಷಕನಿಂದ ಆದ ಭಯ ವಂದೆಡೆಯಾದರೆ... ಆತ ಮರಳಿ ಬಂದ ಖುಷಿ ಇನ್ನೊಂದೆಡೆ. ನಾನೂ ನನ್ನ ಪ್ರಾಣಿ ಇಬ್ಬರೂ ಹೋಗಿ ನೋಡಿ ಇಲಿಯೇ ಹೌದೆಂದು ದೃಡೀಕರಿಸಿಕೊಂಡೆವು. ಜೊತೆಯಲ್ಲೇ ನಾನು ಅದನ್ನು ಓಡಿಸಲು ಕೇಜ್ರೀವಾಲನ ಹಿಡಿದು ಮುಂದಾಗಿ.... ಮತ್ತೆ ಮಗಳ ವಿರೋಧಕ್ಕೆ ತಲೆಬಾಗಿ ಆಸೆ ಬಿಟ್ಟೆ. 

      ಯಾಕೋ ಏನೋ ಗೊತ್ತಿಲ್ಲ... ಮತ್ತೆರಡು ದಿನ ಆ ಮೂಷಕರಾಜ ಬಚ್ಚಲಿನಿಂದ ಹೊರಬರಲೇ ಇಲ್ಲ. ಕೂಸು ಆತನನ್ನು ಪುನಃ ದೇವರ ಕೋಣೆ ಸೇರಿಸುವ ಹರಸಾಹಸ ಮಾಡಿ ಸುಸ್ತಾಯ್ತು. ಬಚ್ಚಲಿನಲ್ಲಿಯೇ ಆತನಿಗೆ ರೊಟ್ಟಿ, ಬಾದಾಮಿ, ಗಜ್ಜರಿಗಳನ್ನು ಸಪ್ಲಾಯ್ ಮಾಡಿದಳು. ಆದರೆ ಬಹುಶಃ ನಾನು ಹೊರಗಟ್ಟಿದ್ದೇನೆಂಬ ಬೇಸರವೋ ಏನೋ ಆಸಾಮಿ ಅಗುಳನ್ನೂ ಮುಟ್ಟಲಿಲ್ಲ. ಎರಡು ದಿನ ಅಲ್ಲೇ ಉಪವಾಸ ಸತ್ಯಾಗ್ರಹ ಹೂಡಿದ್ದೇನೆ ಎಂಬಂತೇ ಇದ್ದ. 

      ಎರಡ್ನೇ ದಿನ ರಾತ್ರಿ ನಾನು ಬಚ್ಚಲಿಗೆ ಹೋದಾಗ ಕಾಣಿಸಿಕೊಂಡ. ಯಾಕೋ ಆತನ ಹೊಟ್ಟೆ ಉಬ್ಬಿರುವಂತೇ ಭಾಸವಾಯ್ತು ನನಗೆ. ಓಹೋ ಹಸಿವಾಗಿ ಎಲ್ಲವನ್ನೂ ತಿಂದಿರಬೇಕೆಂದುಕೊಂಡೆ. ಆದರೆ ಪ್ಲೇಟಿನಲ್ಲಿ ಸಕಲ ಮೃಷ್ಟಾನ್ನಗಳೂ ಹಳಸುತ್ತಲೇ ಇದ್ದವು. 

     ಮೂರನೇ ದಿನ ಬೆಳಿಗ್ಗೆ ಮೂತ್ರಕ್ಕೆ ಹೋದಾಗ ಅಚ್ಚರಿಯೊಂದು ಕಾದಿತ್ತು. ಮೂಷಕರಾಜ ದೊಡ್ಡ ಹೊಟ್ಟೆ ಮೇಲೆ ಮಾಡಿ ಕಾಲು ಮೇಲಾಗಿ ಬಿದ್ದಿದ್ದ. ಉಸಿರಾಡುತ್ತಿರುವ ತರ ಕಾಣಲಿಲ್ಲ. ಏನೋ ವಂತರ ಸಮಾಧಾನವಾದಂತೆನಿಸಿ ಸುಮ್ಮನೆ ಹೋಗಿ ಮಲಗಿದೆ. 

      "ಪಪ್ಪಾ.. ಉಠೋ, ಮೂಷಕರಾಜ ಸತ್ತೋದ, ನೋಡು ಬಾರಾ ಜಲ್ದೀ..." ಎಂಬ ಮಗಳ ಚೀರಾಟಕ್ಕೆ ಎಚ್ಚರಾಗಿ ಎದ್ದು ಹೋಗಿ ನೋಡಿದೆ. ಬೆಳಿಗ್ಗಿನ ಆಸನದಲ್ಲೇ ಇದ್ದ. 
      'ಪಾಪ ಊಟನೂ ಮಾಡಿದ್ನಿಲ್ಲೆ, ನಮ್ಮನಿಂದ ಎಲ್ಲೋ ಹೊರಗೆ ಹೋಗಿ ಕುಛ್ ತೋ ತಿಂದಿಕ್ಕಿ ಬಂಜ ಶಾಯದ್. ಎಂತಕೆ ಹೋಗಕಾಗಿತ್ತು ಅಂವಂಗೆ?! '  ಆಗಲೇ ಸಾವಿನ ತನಿಖೆ ಮಾಡಿ ಮುಗಿಸಿಬಿಟ್ಟಿದ್ದಳೋ ಎಂಬಂತೇ ರಿಪೋರ್ಟ್ ಕೊಟ್ಟಳು ಮಗಳು.

        'ಮಗಳೂ, ಬೇಜಾರು ಮಾಡಕಳಡ.. ಪಾಪ ಅವನ ಆಯುಷ್ಯ ಅಷ್ಟೇ ಆಗಿತ್ತಕು .. ಎಂತ ಮಾಡೂಲ್ ಬತ್ತು... ನಮ್ಮನೇಲೆ ಬಂದು ಸಾಯ ಹೇಳಿ ಅವನ ಹಣೇಬರದಲ್ಲಿ ಬರ್ಕಂಡಿತ್ತಕು..  ಇನ್ನು ಮುಂದಿಂದು ಯೋಚನೆ ಮಾಡ್ವ.. ಬಾ ಅದಕೊಂದು ಅಂತ್ಯಸಂಸ್ಕಾರ ಮಾಡ್ವ' ಎಂದೇ ಸಮಾಧಾನಪಡಿಸಿದೆ. 

      ಕೂಸಿನ ಮುಖ ನೋಡಿ ಒಮ್ಮೆ"ಪಾಪ ಮೂಷಕರಾಜ ಸಾಯಬಾರದಿತ್ತು" ಅನಿಸಿದ್ದು ಸುಳ್ಳಲ್ಲ. 



08-02-2019 @ Delhi