Jan 31, 2012

ಶಿವರಾಂ ಭಟ್ಟರ ಕಾಯಿ ಕೊಯ್ಲು

ಪೀಠಿಕೆ :
ಸಂಬಂಧದಲ್ಲಿ ದಾಯಾದಿ ದೊಡ್ಡಪ್ಪ ದಿll ವಿ. ಜಿ. ಭಟ್ಟ, ಭಡ್ತಿ  ಇವರನ್ನು ಕಣ್ಣಾರೆ  ಕಂಡು ಮಾತಾಡಿಸುವ ಯೋಗವಂತೂ ಕೂಡಿ ಬರಲಿಲ್ಲ ನನಗೆ.  ಆದರೂ ಜೀವನ ಚಿತ್ರಗಳ ಚಿತ್ರಿಸುವ ಅವರ ಮೋಡಿಗೆ ಮಾರು ಹೋಗಿದ್ದೇನೋ ಸತ್ಯ.
ಮುನ್ನುಡಿಯಲ್ಲಿ ವಿಷ್ಣು ಭಟ್ರು ಹೇಳುತ್ತಾರೆ
  "ನಮ್ಮ ಜಿಲ್ಲೆಯ ಮಾತೆತ್ತಿದೊಡನೆಯೇ ಹೊರಗಿನವರು ನಮ್ಮ ಸೃಷ್ಟಿ ಸೌಂದರ್ಯವನ್ನು ಬಣ್ಣಿಸಬಹುದು. ನಿಜ, ಪಂಪನನ್ನು ಹುಚ್ಚು ಹಿಡಿಸಿದ ನಾಡೂ ನಮ್ಮದು.ಆದರೆ ನನಗೆ ನಿಸರ್ಗಕ್ಕಿಂತ ಮಾನವ ಹೃದಯಸೌಂದರ್ಯ - ಕುರೂಪಗಳೇ ಹೆಚ್ಚು ಸೇರುತ್ತವೆ. ಆದ್ದರಿಂದ ಈ ಸಂಗ್ರಹದಲ್ಲೆಲ್ಲೂ ಸೂರ್ಯ ಚಂದ್ರರು ಮೂಡಿಲ್ಲ; ಹಕ್ಕಿ ಹಾಡಿಲ್ಲ; ಹಸಿರು ಹೊಳೆದಿಲ್ಲ."
ನಾನು ಮುಂಬಯಿಯಲ್ಲಿದ್ದಾಗ ಇವರ ಕೃತಿಗಳಿಗಾಗಿ ಬಹಳ ಹುಡುಕಿದ್ದೇನೆ. ಮಾಟುಂಗಾದ ವಾಚನಾಲಯದಲ್ಲಿ ತಲಾಶಿ ಮಾಡಿದ್ದೇನೆ. ಆದರೂ ಇವರ ಕೃತಿಗಳನ್ನು ಸಂಪಾದಿಸಲಾಗಲಿಲ್ಲ. ಅಜ್ಜಿಯ ಕಾಲದಿಂದಲೂ ಮನೆಯಲ್ಲಿದ್ದ ಒಂದೇ ಒಂದು ಪುಸ್ತಕವೇ ಅವರ ನೆನಪಿಗಾಗಿ ನನ್ನಲ್ಲಿರುವ ಆಸ್ತಿಯೆನ್ನಬೇಕು. ಅವುಗಳಲ್ಲಿ ವಂದು ಈ "ಶಿವರಾಂ ಭಟ್ಟರ ಕಾಯಿ ಕೊಯ್ಲು"

 ಷ್ಟೇ ಸ್ವಾತಂತ್ರ್ಯ ವೃತ್ತಿಯವರಾದರೂ ತೆಂಗಿನ ತೋಟದ ಮಟ್ಟಿಗೆ ಬ್ರಾಹ್ಮಣರು ಶೂದ್ರರಿಗೆ ಋಣಿಯಾಗಲೇಬೇಕು. ಸ್ವತಃ ಕುಳಿ ತೆಗೆದು ಸಸಿ ನೆಡಬಹುದು; ಸ್ವತಃ ನೀರು ಹಾಕಬಹುದು. ಅವುಗಳಿಗೆ ಬೇಕಾಗುವ ಗೊಬ್ಬರ ತೆರಕುಗಳನ್ನೂ ತಂದು ಹಾಕಬಹುದು. ಕಾಯಿಯನ್ನು ಬೇಕಾದರೆ ಕುಮಠೆಗೆ ಹೊತ್ತುಕೊಂಡು ಹೋಗಿ ಮಾರಬಹುದು. ಆದರೆ ಮರ ಹತ್ತಿ ಕೊಯ್ಯುವುದು ಮಾತ್ರ ಬ್ರಾಹ್ಮಣರಿಗೆ ಸಾಧ್ಯವಿಲ್ಲ; ಎಷ್ಟೇ ಶ್ರಮಜೀವಿ ಬ್ರಾಹ್ಮಣನಿಗೂ ಸಾಧ್ಯವಿಲ್ಲ.

ನಮ್ಮ ಕೇರಿಯ ಪುಟ್ಟ ಭಟ್ಟರು ಗಡ್ದ ಬೋಳಿಸಿಕೊಳ್ಳುವುದರಿಂದ ಹಿಡಿದು ಗುಡ್ಡ ಕಡಿಯುವ ಕೆಲಸಗಳನ್ನೂ ಸ್ವತಃ ಮಾಡುತ್ತಾರೆ. ಆದರೂ ಅವರ ಮನೆಯ (ತೆಂಗಿನ) ಕಾಯ್ಕೊಯ್ಲಿಗೂ ’ಹರಿ’ಯೇ ಬರಬೇಕು. ಭಟ್ಟರು ಅಡಿಕೆಮರಗಳ ಮೇಲೆ ಹಾರಾಡುತ್ತಾರೆ. ಆದರೆ ಒಂದೊಂದಾಗಿ ತೆಂಗಿನ ಮರಗಳನ್ನು ಹತ್ತಿ ಕೊಯ್ಯುವುದು ಅವರಿಗೂ ಅಸಾಧ್ಯ.


ಹರಿ ನಮ್ಮ ಮೂರು ನಾಲ್ಕು ಕೇರಿಗಳ ಕಾಯ್ಕೊಯ್ಲು ಮಾಡುತ್ತಾನೆ. ಮರಕಸಬಿನಿಂದಲೇ ಅವನ ಜೀವನ. ಮರ ಹತ್ತುವುದರಲ್ಲಿ ಅವನು ಥೇಟ್ ಸೌಳಿ. ಕಡ್ಡಿಯಂಥ ಆಳು ಅವ. ಬೆರಳಿನಷ್ಟು ಸಪುರ ಹೆಗೆಯ ಮೇಲೂ ಅವನು ಹರೆದಾಡುತ್ತಾನೆ. ದೊಡ್ಡ ದೊಡ್ಡ ಮರಗಳ ಭೀತಿಯಂತೂ ಅವನಿಗೆ ಇಲ್ಲವೇ ಇಲ್ಲ. ಅಡಿಕೆಗೆ ಮದ್ದು ಹೊಡೆಯುವಾಗ, ಕೊಟ್ಟೆ ಕಟ್ಟುವಾಗ, ಕೊಯ್ಯುವಾಗ ಅವನು ಮರದಿಂದ ಮರಕ್ಕೆ ಸುಲಭವಾಗಿ, ಹಗುರಾಗಿ, ಹಾರುವುದನ್ನು ನೋಡಿದರೆ ಮಾನವರ ಮೂಲ ಮಂಗನೆಂಬ ಮಾತು ಸ್ಪಷ್ಟವಾಗುತ್ತದೆ. ಮಾವಿನಕಾಯಿ ಆಗಲು ಶುರುವಾದ ಕೂಡಲೇ "ಉಪ್ಪಿನಕಾಯಿಗೆ ಮಿಡೀ ಕೊಯ್ಕೊಡೋ ಹರಿ" ಎಂದು ಕರೆಯದವರಿಲ್ಲ. 


ನಮ್ಮೂರಿನಲ್ಲಿ - ಹೆಚ್ಚಾಗಿ ನಮ್ಮ ಕೆಲವು ಕೇರಿಗಳಲ್ಲಿ - ಹೀಗೆ ತನ್ನ ಕೆಲಸದಿಂದ ಪ್ರಸಿದ್ದನಾದ ಹರಿಗೆ ’ತನ್ನ ಹೊರತೂ ಇವರಿಗೆ ಬೇರೆಯವರು ಗತಿಯಿಲ್ಲ’ವೆಂದು ತೋರಿತೋ ಏನೋ. ಏಳು ಮರಗಳ ಕಾಯಿ ಕೊಯ್ದರೆ ಒಂದು ಕಾಯಿ ಅವನಿಗೆ ಸಂಬಳ ಇದ್ದುದನ್ನು ನಿಲ್ಲಿಸಿ ಐದು ಮರಗಳಿಗೆ ಒಂದು ಕಾಯಿ ಕೊಡಬೇಕೆ೦ದು ಕೇಳಹತ್ತಿದನು. "ಜೀವಮಾನವೂ ಕಷ್ಟ. ಪಾಪ ಹಾಂಗೇ ತಗಳ್ಲಿ" ಅಂದರು ಕೆಲವು ಉದಾರ ಬುದ್ಧಿಯ ತೋಟಿಗರು. "ಹೋಗ್ಲೋ, ಕಾಯ್ಧಾರ್ಣ್ಯೂ ಬ೦ಜು, ಹಾಂಗೇ ಕೊಟ್ರೂ ದೊಡ್ದಲ್ಲ". ಅಂದರು ಕೆಲವರು. "ಇಷ್ಟ್ ದಿನ ಹೇಗೇ ಕೊಟ್ಕತ್ಬಂದಾಯ್ದು. ಈಗ ಹೆಚ್ಮಾಡೂಲೆ ಸಾಧ್ಯವೇ ಇಲ್ಲೆ." ಎಂದು ತಕರಾರು ಮಾಡಿದವರೂ ಕಡಿಮೆ ಇಲ್ಲ.


ನಮ್ಮ ಕೇರಿಯ ಶಿವರಾಂ ಭಟ್ಟರಿಗಂತೂ ಹರಿಯು ಐದು ಮರಕ್ಕೆ ಒಂದು ಕಾಯಿ ಮಾಡಿದ್ದು ಸೇರಲೇ ಇಲ್ಲ. ತಮಗೆ ಉಪ್ಪಿನಕಾಯಿಗಾಗಿ ಅವನು ’ಮಾಯ್ಮಿಡಿ’ ಕೊಯ್ದು ಕೊಟ್ಟಿದ್ದಿಲ್ಲವೆಂಬ ಕೊರಗೂ ಬೇರೆ ಇತ್ತು. ಶಿವರಾಂ ಭಟ್ಟರ ಮನೆಯ ಮಾವಿನ ಮರದ ಸೌಳಿಗೆ ಹೆದರಿ ಹರಿಯು ಕೊಯ್ದುಕೊಟ್ಟಿದ್ದಿಲ್ಲ. ಆದರೆ ಅವನಿಗೆ ಭಟ್ಟರ ಮೇಲೆ ಯಾವ ವೈರವೂ ಇತ್ತಿಲ್ಲ. 


 ಶಿವರಾಂ ಭಟ್ಟರು ಹರಿಯ ಹೊಸ ಲೆಕ್ಕಕ್ಕೆ ಒಪ್ಪಿಕೊಳ್ಳದೇ ತಾವೇ ಕಾಯಿ ಕೊಯ್ದುಕೊಳ್ಳುವೆನೆಂದು ಸಾರಿದರು. ಕಾಯಿಗೆ ಧಾರಣೆಯೂ ಬ೦ದಿತ್ತು. ಹರಿಗೆ ಒಂದು ದಿನಕ್ಕೆ ಮೂರು ರೂಪಾಯಿ ಸಂಬಳ ಸಿಗುವುದೂ ಅವರಿಗೆ ಸರಿ ದೋರಲಿಲ್ಲ. ತಾವು ಕೆಲಸದಲ್ಲಿ ಗಟ್ಟಿಗರೆಂಬ ಹೆಮ್ಮೆ, ಹೊಸದಾಗಿ ಮರ ಕಸುಬು ಕಲಿತ ಗರ್ವ ಅವರಿಂದ "ನನ್ನ ಹತ್ತಿರ ನೂರು ತೆಂಗಿನ ಮರದ ಕೊಯ್ಲು ಮಾಡಲು ಸಾಧ್ಯವಿಲ್ಲವೇ?" ಎಂದು ಕೇಳಿಸಿದವು. 

ಅಂತೂ ಮುಂದಿನ ಕೊಯ್ಲಿನಲ್ಲಿ ತಾವೇ ತಳೇಬಳ್ಳಿ ಹಾಕಿದರು. ಆರೆಂಟು ಮರಗಳ ಕೊಯ್ಲು ಮುಗಿಸಿ ಚಹ ಕುಡಿದು ಉತ್ಸಾಹದಿ೦ದ ನೆರೆಮನೆಗೆ ಹೋಗಿ "ಹೋಯ್ ಭಟ್ರೆ, ಯಾನೇ ಕೊಯ್ಲೆಲ್ಲಾ ಮುಗೀಸ್ತೆ ಅಂದೆ!" ಅಂದು ಬಂದರು. ಮತ್ತೆ ಮರ ಹತ್ತಲು ಸುರು ಮಾಡಿದರು. ಚಹದ ಹುರುಪಿನಿಂದ ಒಂದೆರಡು ಮರ ಮುಗಿಯಿತು. ಮೂರನೆಯ ಮರ ಅರ್ಧಕ್ಕೆ ಹತ್ತುವುದರೊಳಗಾಗಿ ಸಾಕೋ ಬೇಕಾಯಿತು. ಕೀಲುಗಳೆಲ್ಲ ತಪ್ಪಿ ಹೋಗುವಂತೇ ಅನ್ನಿಸಿತು. ಆದರೂ ಬಿಡಲಿಲ್ಲ. ಹೇಗೋ ತುದಿಗೆ ಮುಟ್ಟಿದರು. ಹೆಡೆಯ ಮೇಲೆ ಕುಳಿತು ’ಉಶ್’ ಎಂದು ವಿಶ್ರಾಂತಿ ತೆಗೆದುಕೊಂಡರು. ಅಲ್ಲಿಯೇ ಒ೦ದು ಕಪ್ ಚಹ ಯಾರಾದರೂ ತಂದು ಕೊಟ್ಟಿದ್ದರೆ ಸುಖವಾಗಿ ಇಳಿಯುತ್ತಿದ್ದೆನೆಂದು ಅಂದುಕೊಂಡರು. ಬೆಳೆದ ಕಾಯಿಗಳನ್ನು ಕೊಯ್ದಾಯಿತು. ’ಇನ್ನೊಂದು ಸಲ ಈ ಮರ ಹತ್ತಿ, ಆಗ ಬೆಳೆಯುವ ಈ ಸೀಯಾಳ ಕೊಯ್ಯುವುದು .... ಬಹಳ ತ್ರಾಸಿನ ಕೆಲಸ. ಸೀಯಾಳವನ್ನೇ ಕೊಯ್ದು ಕುಮಟೆಗೆ ಸಾಗಿಸಿದರೆ ಹೇಗೆ?’ ಎಂಬ ವಿಚಾರ ಮೂಡಿತು. ಹಾಗೇ ನಿಶ್ಚಯಿಸಿ ಸೀಯಾಳಗಳನ್ನೂ ಉದುರಿಸಿದರು. ತೀರ ಎಳೇ ಸೀಯಾಳಗಳು ಬೀಳುವ ಮುಂಚೇ ಒಡೆದು ಹೋದವು ! ಬಿದ್ದ ಕಾಯಿಗಳು ಒಡೆಯುವ ಸದ್ದು ಕೇಳಿ ಆಚೆಯ ತೊಟದಲ್ಲಿ ಕಾರಿಗೆ ಬರಗುತ್ತಿದ್ದ ಸುಬ್ರಾಯ್ ಭಟ್ಟರು "ಹ್ವಾಯ್. ಶಿವ್ರಾಂ ಭಟ್ರೆ, ಏನು ಸೀಯಾಳನೇ ಕೊಯ್ತ್ರಿ? " ಅಂದರು. "ಬೇಕು ಹೇಳೇ ಕೊಯ್ದೆ." ಅಂದರು ಭಟ್ಟರು. ಅವರಿಗೆ ಇಳಿಯುವ ಮನಸ್ಸೇ ಬಾರದು. ಅಲ್ಲೇ ಹೆಡೆಯ ಮೇಲೇ ಕುಳಿತು ವಿಶ್ರಮಿಸುತ್ತಿರುವಾಗಲೇ "ಕೂ ಹೂಯ್......... ಉಂಬ್ಲಾತ್ರೋ" ಎಂದು ಮನೆಯಿಂದ ಕರೆಯಬಂದಿತು. ಅಂತೂ ಇಂತೂ ಇಳಿದರು 


ಸೀಯಾಳಗಳನ್ನು ಕುಮಟೆಗೆ ಒಯ್ಯುವ ಮುಂಚೆ ಎಲ್ಲಾ ಮರಗಳ ಕೊಯ್ಲನ್ನು ಮುಗಿಸಬೇಕಲ್ಲ? ಮುಂದೇನು ಮಾಡುವುದು? ಸ್ವತಃ ಹತ್ತುವದಂತೂ ಸಾಧ್ಯವಿತ್ತಿಲ್ಲ. ಒಂದು ಉಪಾಯ ಹೊಳೆಯಿತು. ಎಲೆಬಳ್ಳಿಗೆ ತಂದಿದ್ದ ಏಣಿಯನ್ನು ತಂದು ತೆಂಗಿನ ಮರಕ್ಕೆ ಸಾಚಿದರು. ಇದನ್ನೂ ನೆರೆಮನೆಯ ಗ್ರಾಸ್ತ ನೋಡುತ್ತಿರಬೇಕೆ ? "ಹ್ವಾಯ್ ಭಟ್ರೆ, ಯೇನು ತೆಂಗಿನ ಮರಕ್ಕೆ ಏಣೀ ಸಾಚ್ದ್ರಿ?" ಅಂದನು. "ಅಲ್ಲ ಭಟ್ರೆ, ಈ ತೆಂಗಿನ ಮರಾನೂ ಅಡ್ಕೇ ಮರದಷ್ಟೇ ಎತ್ತರ ಮಾಡಿದ್ರೆ ದೇವ್ರು..." ಅಂದರು ಶಿವರಾಂ ಭಟ್ಟರು. ನೆರೆಮನೆಯ ಗ್ರಾಸ್ತನಿಗೆ ನಗೆ ಬಂತು. "ಅಥ್ವಾ ತೆಂಗ್ನ ಮರ್ದಷ್ಟೇ ಎತ್ರ ಮನ್ಶ್ನೂ ಮಾಡಿದ್ದ್ರೆ ಮತ್ತೂ ಚೊಲೋ ಆಗ್ತಿತ್ತಿಲ್ಯ ?" ಎಂದು ಕೇಳಿದರು. "ಮಜಾ ಮಾಡ್ತ್ರೋ ನೋಡ್ತೆ ?" ಅಂದರು ಇವರು.


 ಏಣಿ ತೆಂಗಿನ ಮರದ ತುದಿಗೆ ಮುಟ್ಟುವುದುಂಟೇ? ಮರುದಿನ ಶಿವರಾಂ ಭಟ್ಟರು ತೆಂಗಿನಮರಕ್ಕೆ ಏಣಿ ಸಾಚಿದ ಸುದ್ದಿ ಕೇರಿ ತುಂಬ ಹಬ್ಬಿತು. ಭಟ್ಟರು ಉಳಿದ ಮರಗಳ ಕೊಯ್ಲು ಮಾಡಲಾಗದೇ, ಒಂದೇ ಮರದ ಸೀಯಾಳ ಕುಮಟೆಗೆ ಒಯ್ಯಲಾಗದೇ ( ಕೇವಲ ಆರೆಂಟು ಸೀಯಾಳ ಎಂದು) ಫಜೀತಿಯಲ್ಲಿ ವಿಚಾರಿಸಹತ್ತಿದರು. 

ಕೇರಿಯ ಕೆಲವು ತುಂಟರಿಗೆ ಇಷ್ಟೇ ಸಾಕಯಿತು. ಒಬ್ಬೊಬ್ಬರಾಗಿ ಒಂದೊಂದು ಸಲಹೆ ಕೊಡಲು ಬಂದರು. 

"ಏನು ಶಿವರಾಂ ಭಟ್ರೆ, ತೆಂಗಿನ ಮರಕ್ಕೆ ಏಣಿ ಸಾಚ್ದ್ರಡ?.... ಏಣೀ ಸಾಚೂದ್ಕಿಂತ ಕಲ್ಹೊಡ್ದು ಮಾವಿನ ಮಿಡೀ ಉದರ್ಸ್ದ ಹಾಗೆ ಕಾಯ್ನೂ ಉದ್ರ್ಸಿ ಹಾಕ್ದ್ರೆ ಹೆಂಗೆ?"... 
"ಅಲ್ದ್ರ, ಅಷ್ಟೆಲ್ಲಾ ಕಷ್ಟಪಡೂದ್ ಎಂತಕ್ಕೆ?ನಿಮ್ಗೆ ಯಾನು ಒಂದು ಸಸಾರ್ದ ಉಪಾಯ ಹೇಳ್ತೆ ಕೇಳಿ. ಕಾಯಿ ಬೆಳ್ದ ಕೂಡ್ಲೇ ಮರಾನೇ ಕಡ್ದು ಕೆಡ್ಗಿ ಹಾಕ್ದ್ರೆ, ನೆಲ್ದ ಮೇಲೆ ಕೂತ್ಗಂಡೇ ಕಾಯ್ ಕೊಯ್ಲಕ್ಕು! ಅಲ್ದಾ?"
ಎಂದು ಸಲಹೆಗಳನ್ನು ಕೊಡುತ್ತಾ ಅಂಗಳದಲ್ಲಿ ರಾಶಿ ಹಾಕಿದ ಸೀಯಾಳಗಳನ್ನು ತೀರಿಸಹತ್ತಿದರು.ಸೀಯಾಳಗಳನ್ನು ತಿನ್ನಬೇಡೀ ಎನ್ನಲೂ ಆಗದೇ, ತನ್ನ ಚೇಷ್ಟೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳದೇ ಇರಲೂ ಆಗದೇ, " ಓ ಹೌದನೇ, ಒಂದಿಷ್ಟು ಗೊಜ್ ಬೆಲ್ಲ ತಕಂಬಾ. ಸೀಯಾಳ ತಿನ್ತೋ ಯಂಗೋ" ಎಂದು ಗೊಜ್ಬೆಲ್ಲ ತರಿಸಿ ಎಲ್ಲರ ಜತೆಗೆ ತಾವೂ ಸೀಯಾಳ ತಿಂದು ಹಾರಿಸಿದರು.!

ಅವರ ಫಜೀತಿ ಕೇರಿಯವರಿಗೆ ಗೊತ್ತಾಯಿತು. ಹರಿಗೆ ತಮ್ಮ ಮನೆಯ ಕಾಯಿಕೊಯ್ದು ಕೊಡುವುದು ಬೇಡವೆಂದು ಹೇಳಿಬಿಟ್ಟಿದ್ದರು. ತಮ್ಮ ಹತ್ತರ ಕೊಯ್ಯಲು ಸಾಧ್ಯವಿಲ್ಲವೆಂಬುದನ್ನು ಕಲಿತಿದ್ದರು. ಹರಿಯನ್ನು ಮತ್ತೆ ಕರೆದು "ಕಾಯಿ ಕೊಯ್ದುಕೊಡು" ಎಂದು ಹೇಳುವುದು ಹೇಗೆ? ಒಮ್ಮೆ ಬೇಡವೆಂದು ಹೇಳಿ ಮತ್ತೆ ದಮ್ಮಯ್ಯ ಅಂದರೆ..... ಆದರೆ ಹರಿಯೇ ಬಂದು ಕೊಯ್ಯುತ್ತೇನೆಂದರೆ ಎಲ್ಲರಂತೇ ೫ ಮರಕ್ಕೆ ೧ ಕಾಯಿ (೪ ಮರಕ್ಕೆ ಬೇಕಾದರೂ ೧ ಕಾಯಿ) ಕೊಡಲು ಅವರು ತಯಾರಾಗಿದ್ದರು. ಸೀಯಾಳ ಬೆಲ್ಲ ತಿಂದು ಬಂದ ಗ್ರಾಸ್ತರಿಗೆ ಇದು ತಿಳಿಯದೇ ಹೋಗಲಿಲ್ಲ 


ಅವರು ತಮ್ಮಷ್ಟಕ್ಕೇ ನಕ್ಕು, ಭಟ್ಟರ ಚೇಷ್ಟೆ ಮಾಡಿದರು. ಕೊನೆಗೆ ಮಾತ್ರ      "ಪಾಪ, ಅವ್ನ ಫಜೀತಿ!" ಅನ್ನದೇ ಹೋಗಲಿಲ್ಲ. ಮರುದಿನ ಅವರು ಹರಿಯನ್ನು ಕರೆದು, ವಿಷಯವನ್ನು ತಿಳಿಸಿ, ಕರೆಯವಿಲ್ಲದೇ ಶಿವರಾಂ ಭಟ್ಟರ ಮನೆಗೆ ಹೋಗಿ ಕಾಯಿ ಕೊಯ್ಯಬೇಕೆಂದೂ - ಅವರು ಕೊಟ್ಟಷ್ಟು ತೆಗೆದುಕೊಳ್ಳಬೇಕೆಂದೂ ಹೇಳಿದರು. ಕತೆಯನ್ನು ಕೇಳಿಕೊಂಡ ಹರಿ ಮೈ ಮೇಲೆ ಕವಳದ ಜೊಲ್ಲು ಚೆಲ್ಲುವಷ್ಟು ನಕ್ಕ. 


ಮರುದಿನ ಭಟ್ಟರ ಮನೆಗೆ ಹರಿಯು ಬಂದು "ನೀವು ತಿಳ್ದಷ್ಟು ಕೊಡಿ." ಅಂದು ಕಾಯಿ ಕೊಯ್ಯಹತ್ತಿದ. ಭಟ್ಟರು ಪಿಟ್ಟೆಂದು ಮಾತಾಡಲಿಲ್ಲ. 


ಸಂಜೆಯ ಮುಂದೆ ಚಕಾರ ಮಾತಾಡದೆ ಐದು ಮರಕ್ಕೆ ಒಂದರಂತೇ ಹಿಡಿದು ತಾವೇ ದೊಡ್ಡ ದೊಡ್ಡ ಕಾಯಿಗಳನ್ನು ಆರಿಸಿಕೊಟ್ಟರು. ಅದರ ನಂತರದ ಎಲ್ಲ ಕೊಯ್ಲುಗಳಿಗೂ ಹರಿಯೇ. 


ಈಗ ನಮ್ಮೂರಿನಲ್ಲಿ ಯಾರಾದರೂ ಆಶೆಗಾಗಿ ತಮ್ಮ ಕೈ ಮೀರಿದ ಕೆಲಸಕ್ಕೆ ಕೈ ಹಾಕಿದರೆ " ಶಿವರಾಂ ಭಟ್ಟರು ತೆಂಗಿನ ಮರಕ್ಕೆ ಏಣಿ ಸಾಚಿದ ಹಾಗೆ..." ಅನ್ನುತ್ತಾರೆ.





(ಹಿಂದೊಮ್ಮೆ ಭಟ್ಟಿ ಇಳಿಸಿದ್ದು - ದಿನಾಂಕ - ಸಪ್ಟೆಂಬರ್ ೯, ೨೦೦೯)

No comments:

Post a Comment