"ತಮಾ ಚೌಡಿ ಪೂಜೆ ಮಾಡ್ಕ ಬಾ" ನನ್ನ ದೇವರ ಪೂಜೆಯ ಮಧ್ಯೆ ಆಯಿಯ ಅಶರೀರ ವಾಣಿ ಕೇಳಿಸಿತ್ತು. ಆಯಿ ಎಲ್ಲೇ ಇದ್ದರೂ ಅಲ್ಲಿಂದಲೇ ಕೂಗುವುದು ರೂಢಿ. ಕೇವಲ ಶಬ್ದ ಕೇಳುತ್ತಿತ್ತೇ ಹೊರತೂ ಶರೀರ ಬರುತ್ತಿರಲಿಲ್ಲವಾದ್ದರಿಂದ ಆ ಕೂಗಿಗೆ ಅಶರೀರ ವಾಣಿ ಎಂಬುದೇ ಸೂಕ್ತ. ತೋಟದ ತುದಿಯಲ್ಲಿ ಒಂದು ಚಿಕ್ಕ ಚೌಡಿಯಗೂಡು ಅದಕ್ಕೆಮನೆಯೆಂಬ ಹೆಸರು. ಪ್ರತೀ ಮಂಗಳವಾರ ಹಾಗೂ ಶುಕ್ರವಾರ ಚೌಡಿಗೆ ಪೂಜಿಸಿ, ಒಂದು ತೆಂಗಿನಕಾಯಿ ಒಡೆಯುವುದು ಅನಾದಿಕಾಲದಿಂದಲೂ ಬಂದ ರೂಢಿ.
ನಾನು ಚೌಡಿ ಮನೆಗೆ ಹೋದ ಸರಿಯಾದ ಸಮಯಕ್ಕೆ ತಿಮ್ಮಣ್ಣನೂ ಪೂಜೆಗೆ ಬಂದಿದ್ದ. ತಿಮ್ಮಣ್ಣ - ಸುಬ್ರಾಯ ಭಟ್ಟರ ಮನೆಯಲ್ಲಿ ಇದ್ದುಕೊಂಡು ಓದುತ್ತಿದ್ದ ಮಾಣಿ. ಇಡೀ ನಮ್ಮ ಹೈಕಳ ಕೇರಿಗೆ ಒಂದೇ ಚೌಡಿಯಾಗಿತ್ತಾದ್ದರಿಂದ ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ.. ಒಂದಲ್ಲ ಒಂದು ದಿನ ಆ ಚೌಡಿಗೆ ಪೂಜೆ ಸಲ್ಲಿಸುತ್ತಿದ್ದುದು ವಾಡಿಕೆ.
"ತಿಮ್ಮಣ್ಣ, ಹಾಂಗೇ ನನ್ನ ಕಾಯೂ ವಡೆದು ಕೊಟ್ಬುಡೊ, ಪುರೋಹಿತ ನೀನು" ಎಂದೆ. ವಯಸ್ಸಲ್ಲಿ ಸಣ್ಣವನಾದ್ದರಿಂದ ಏಕವಚನ ಪ್ರಯೋಗ. ಸರಿ ಆತ ಪೂಜೆ ಮುಂದುವರಿಸುತ್ತಿದ್ದಂತೇ ಕೇಳಿದೆ.. "ಭಟ್ರು ಹೆಂಗಿದ್ರಡೋ?"
ಸುಬ್ರಾಯ ಭಟ್ರು ಊರಿನ ಸುಮಾರು ೫೦ ಪ್ರತಿಶತ ಮನೆಗಳಿಗೆ ಪುರೋಹಿತರು. ಪುರೋಹಿತ್ಗೆ ಬಿಡುವ ಮನಸ್ಸಿಲ್ಲದ್ದಿದ್ದರೂ ಅನಾರೋಗ್ಯದ ಕಾರಣದಿಂದಲೂ.... ಇವರ ಅನಾರೋಗ್ಯವನ್ನರಿತು ಜನ ಕರೆಯುವುದ ಬಿಟ್ಟ ಕಾರಣದಿಂದಲೂ ಅನಿವಾರ್ಯವಾಗಿ ಪರಾನ್ನ ಬಿಟ್ಟು ಪರಾವಲಂಬಿಯಾಗಿದ್ರು. ಸದ್ಯ ಎರಡೇ ದಿನದ ಹಿಂದೆ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾದ್ದರಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಕೇಳಿದ್ದೆ. ಆದ್ದರಿಂದಲೇ ವಿಚಾರಿಸಿದೆ.
"ನಿನ್ನೆ ಆಪರೇಷನ್ ಆತಡಾ, ಇನ್ನೊಂದು ವಾರ ಬಕ್ಕು" ಎಂದ.
ಹಾಗೇ ಕಾಯಿ ಒಡೆಯಲು ಮುಂದಾದ. ಎಷ್ಟಂದ್ರೂ ಸಣ್ಣ ಮಾಣಿ... ಅವನ ತಪ್ಪಲ್ಲ.... ಒಂದು ಕಾಯಿಯ ಕಡಿ ಮಗುಚಿ ಬಿತ್ತು. ನನ್ನ ಬಾಯಿಯಿಂದ ಉದ್ಘಾರ ಹೊರಬಿತ್ತು "ಒಹ್.. ನಾ ಒಡೆಲನಾ?" ಇದು ಕಡಿ ಮಗುಚಿ ಬಿದ್ದ ಮೇಲೆ ಕೇಳುವ ಪ್ರಶ್ನೆಯೇ ಅಲ್ಲವಾದರೂ ಪರಾವರ್ತಿತ ಪ್ರತಿಕ್ರಿಯೆಯಾಗಿ ಬಾಯಿಂದ ಹೊರಬಿದ್ದಿತ್ತು.
ಮನೆಗೆ ಬಂದು ಊಟ ಮಾಡಿ ವಾಡಿಕೆಯಂತೇ ಚಾ ಕುಡಿಯುತ್ತಿದ್ದೆವು. ಶವವಾಹನದ ಸದ್ದು ಕಿವಿಗೆ ಹೊಕ್ಕಾಗ ..ಸೀದಾ ಮನಸ್ಸು ಎಣಿಸಿದ್ದು "ಸುಬ್ರಾಯ ಭಟ್ರು?!"
ಅಪ್ಪಯ್ಯ "ಅಬಾ ಯಾರಪಾ ಇದು! " ಎಂದು ಉದ್ಘರಿಸಿ ಅಂಗಿ ತೊಟ್ಟು ರಸ್ತೆಗೆ ಹೋಗಿ ಐದೇ ನಿಮಿಷಕ್ಕೆ "ಸುಬ್ರಾಯ ಭಟ್ರು ಹೋಗೋದ್ರು" ಎನ್ನುತ್ತ ವಾಪಸ್ಸು ಬಂದಾಗ ನಾನು ತಳಮಳವೋ ... ಅಶ್ಚರ್ಯವೋ .... ಗಾಬರಿಯೋ... ತಿಳಿಯದ ಸ್ಥಿತಿಗೆ ತಲುಪಿದ್ದೆ.
ಅಜ್ಜಿಯ... ಆಯಿಯ ನಂಬಿಕೆಗಳನ್ನು ಮೂಢನಂಬಿಕೆಗಳೆಂದುಕೊಂಡಿದ್ದೆ. ಈ ನಂಬಿಕೆಗಳು ಕೇವಲ ಮೂಢನಂಬಿಕೆಗಳಲ್ಲವಾ? ನಿಜಕ್ಕೂ ಇವೆಲ್ಲವನ್ನು ನಮ್ಮ ಹಿರಿಯರು ತಮ್ಮ ಅನುಭವಗಳಿಂದ ಕಲಿತಿದ್ದರಾ? ಒಂದೂ ಅರ್ಥವಾಗದ - ಉತ್ತರವಿಲ್ಲದ ಪ್ರಶ್ನೆಗಳು !!
(ಹಿಂದೊಮ್ಮೆ ಗೀಚಿದ್ದು)
(ಗೀಚಿದ ದಿನಾಂಕ - ಜುಲೈ ೧೯, ೨೦೦೯.)
No comments:
Post a Comment