ಬಹುದಿನಗಳ ನಂತರ ಸೇರಿದ್ದೆವು. ಮಾತಿನ ಮಧ್ಯ ತಮಾಷೆಯಾಗಿ ಅಣ್ಣ ಹೇಳಿದ ... ಶನಿಯ ಇನ್ನೊಂದು ಸಣ್ಣ ಕಥೆಯ.
ಒಮ್ಮೆ ಶನಿ ಹನುಮನಿಗೆ ಕಾಡಲು ಹೊರಟ. ಜೀವಮಾನದಲ್ಲೊಮ್ಮೆ ಯಾದರೂ ಕಾಡಲೇಬೇಕಲ್ಲ ಶನಿ! ....ಹಾಗಾಗಿ.
ಹನುಮ ಬೀಜಿ ಇದ್ದ. ಲಂಕೆಗೆ ಸೇತುವೆ ಕಟ್ಟುವ ಸಮಯವದು. ಕೆಲಸ ಭರದಿಂದ ಸಾಗಿತ್ತು. ಅಷ್ಟರಲ್ಲಿ ಶನಿ ಹನುಮನ ಎದುರು ಪ್ರತ್ಯಕ್ಷನಾದ. ಕೇಳಿದ.
'ಹನುಮಾ... ಜೀವಮಾನದಲ್ಲೊಮ್ಮೆಯಾದರೂ ಪ್ರತೀ ವ್ಯಕ್ತಿಯನ್ನು ಕಾಡುವುದು ನನ್ನ ಧರ್ಮ ಮತ್ತು ನಿಮ್ಮ ಖರ್ಮ. ಹಾಗಾಗಿ ನಿನ್ನನ್ನು ಈಗ ಕಾಡಲು ಬಂದಿದ್ದೇನೆ. ಹಾಗಾಗಿ ಹೇಳು ಎಲ್ಲಿಂದ ಪ್ರಾರ0ಭಿಸಲಿ?'
ಮೊದಲೇ ಹನುಮ ಕೆಲಸದ ತಲೆಬಿಸಿಯಲ್ಲಿದ್ದ... ಹಾಗಾಗಿ ಹೇಳಿದ.... 'ಥೋ ಮಾರಾಯಾ ... ನಿನಗೂ ಹೊತ್ತೂ ಗೊತ್ತೂ ವಂದೂ ಇಲ್ಲ... ಬಾ ನೀನೂ ನನ್ನ ತಲೆ ಮೇಲೆಯೇ ಕೂತಗೋ.'
ತಗಳಿ... ಶನಿಗೆ ಅಷ್ಟೇ ಸಾಕಿತ್ತು ಹನುಮನ ತಲೆಯೇರಿಯೇಬಿಟ್ಟ. ಹನುಮನಾದರೋ... ರಾಮ ಭಕ್ತ... ಒಡೆಯ ಹೇಳಿದ ಕೆಲಸ ಪೂರೈಸದೇ ಇನ್ಯಾವ ಕಡೆಯೂ ಗಮನವಿಲ್ಲ ಆತನಿಗೆ. ಸೇತುವೆಗಾಗಿ ಸಮುದ್ರ ದಡದಿಂದ ದೊಡ್ಡ ದೊಡ್ಡ ಕಲ್ಲನ್ನು ಹೊತ್ತು ತಂದು ಸೇತುವೆಗೆ ಹಾಕುವ ಕೆಲಸ... ಅವನಷ್ಟಕ್ಕೆ ಅವ ಮಾಡುತ್ತಿದ್ದ.
ದೊಡ್ಡ ಕಲ್ಲೊಂದನ್ನು ತಲೆಯ ಮೇಲಿಟ್ಟು ಹಾರಿ ಬರುವುದು ... ಸೇತುವೆಗೆ ಹಾಕುವುದು..ಮತ್ತೆ ಇನ್ನೊಂದು.. ಮತ್ತೊಂದು ಮಗದೊಂದು... ಹೀಗೆ... ನಡೆಯುತ್ತ ಇತ್ತು...
10-15 ಕಲ್ಲುಗಳಾಗುವಷ್ಟರಲ್ಲಿ ಅದೇ ಕುಂತಿದ್ದನಲ್ಲ, ತಲೆಯ ಮೇಲೆ ಶನಿ... ಕಲ್ಲಿನ ಭಾರ ಮತ್ತು ಪೆಟ್ಟಿನ ನೋವನ್ನು ತಾಳಲಾರದಾದ... ಇನ್ನೂ ಕಪ್ಪಗಾದ... 'ಯೇ ಮಾರಾಯಾ ಸಾಕೋ ನಿನ್ ಸಾವಾಸ... ನಿನ್ನ ಕಾಡಲು ಬಂದರೆ ನನ್ನನ್ನೇ ಕಾಡಿಬಿಟ್ಟೆ ಮಾರಾಯಾ... ಸಾಕು ಸಾಕು' ಎನ್ನುತ್ತ ತಡ ಮಾಡದೇ ಕೂಡಲೇ ಇಳಿದು ಹೊರಟುಹೋದ.
ಹೀಗೇ ಶನಿ ಬಹು ಬಾರಿ ಹನುಮಂತನನ್ನು ಕಾಡಲು ಪ್ರಯತ್ನ ಪಟ್ಟು, ವಿಫಲನಾಗಿ ಮರಳಿದ ಕಾರಣದಿಂದಾಗಿ ಇಂದು ಶನಿವಾರದಂದು ... ನಾವು (ಹುಲು ಮಾನವರು) ಪೂಜಿಸುತ್ತೇವೆ.
ಇದೊಂದು ಕಾಲ್ಪನಿಕ ಕಥೆಯಾಗಿರಲೂ ಬಹುದು. ಕಥೆಗೆ ಪ್ರೇರಣೆ ಅಣ್ಣ. ಆದರೆ ವಿವೇಚಿಸಿದರೆ ಕಥೆಗೊಂದು ನ್ಯಾಯಯುತ ನೀತಿ ಒದಗಿಸಬಹುದು ನಾವು. ನೋಡಿ... ನಮ್ಮ ಜೀವನದಲ್ಲಿ ಶನಿ ಯಾವಾಗಲೆಲ್ಲ ಕಾಡಿದ್ದಾನೆ? ನಮ್ಮ ಕಷ್ಟ ಕಾಲದಲ್ಲೆಲ್ಲ ಶನಿ ಯ ನೆನೆಸಿಕೊಂಡಿದ್ದೇವೆ ನಾವು ಅಲ್ಲವಾ?! ಅಂದರೆ ನಾವು ಬೀಜಿಯಾಗಿರುವಾಗ... ನಾವು ನಮ್ಮ ಕೆಲಸಗಳಲ್ಲಿ ನಿರತರಾಗಿರುವಾಗ... ಆ ಕೆಲಸದಲ್ಲಿ ತೃಪ್ತಿ ಕಂಡಿರುವಾಗ... ಆ ಕೆಲಸದಲ್ಲಿ ಮಗ್ನರಾಗಿ ಸಫಲರಾದಾಗ ಇದೇ ಶನಿ ನಮ್ಮನ್ನ 'ಕಾಡಿಲ್ಲ'. ಆವಾಗ ನಾವು 'ಓ ಶನಿ ಮಹಾರಾಜಾ... ನನ್ನ ಸಫಲ ಕಾರ್ಯಗಳಲ್ಲಿ ನೀನು ಹಸ್ತಕ್ಷೇಪ ಮಾಡದೇ ಇರುವುದರಿಂದ ನನ್ನ ಕಾರ್ಯ ಸಫಲವಾಗಿದೆ... ಇದೋ ನಿನ್ನ ಚರಣಗಳಿಗೆ ವಂದಿಸಿರುವೆ' ಎಂದು ನಾವು ಎಂದಾದರೂ ನೆನೆಗುಣದಲ್ಲಿ ಕಾಣಿಕೆ ಹಾಕಿ ಬಂದಿದ್ದೇವಾ?! ಇಲ್ಲ ಅಲ್ಲವಾ?!
ಬಹುಶಃ ನಮ್ಮ ಅಸಫಲ ಕಾರ್ಯಗಳಲ್ಲಿ... ನಮಗೆ ಕೆಲಸ ಇಲ್ಲದಿರುವಾಗ... ಮಾತ್ರ ನಮಗೆ ಶನಿ 'ಕಾಡಿದ್ದಾನೆ'. ಆಗ ನಾವು ಶನಿ ಮಂದಿರಕ್ಕೋ, ಹನುಮನ ಗುಡಿಗೋ ಹೋಗಿದ್ದೇವೆ... ಕಾಣಿಕೆ ಹಾಕಿದ್ದೇವೆ.. ಶನಿ ಜಪವೋ... ಹೋಮ ಹವನವೋ... ಶಾಂತಿಯನ್ನೋ ಮಾಡಿದ್ದೇವೆ...
ಯೋಚಿಸಿ.........
ಅಂದರೆ, ಅಣ್ಣ ಹೇಳಿದ ಈ ಮೇಲಿನ ಕಥೆಯ ಮೂಲ ಉದ್ದೇಶ ವ ಸಂದರ್ಭ ಏನೇ ಇರಲಿ ... ಕಥೆಯ ಹುರುಳು ಅದೇ...
ನಾವು ಯಾವತ್ತೂ ಕಾರ್ಯ ತತ್ಪರರಾಗಿರಬೇಕು... ಕಾಯಕವೇ ಕೈಲಾಸ ... ಕರ್ಮವ ಮಾಡು ಫಲ ತನ್ನಿಂತಾನೇ ಸಿಗುತ್ತದೆ. ಮಾಡುವ ಕಾರ್ಯದಲ್ಲಿ ಗಮನವಿದ್ದರೆ ಮತ್ತೆಲ್ಲೂ ಗಮನ ಹೋಗದು.
ಯೋಚಿಸಿ
ನಮಸ್ಕಾರ
19/01/2020, 8:47 PM (ವಿಮಾನದಲ್ಲಿ ಹಾರುತ್ತ)
No comments:
Post a Comment