Jul 2, 2022

ಸಸಾರವ ಸಂಸಾರ!

#ಪಟ್ಟಂಗ 
#ಸಸಾರವ_ಸಂಸಾರ !? 
~~~~~~~~~~~~
    ವಂದ್ ಚೀಟಿ ಮಾಡ್ ಕೊಟ್ಟೆ ನಾನು ಅಡಿಗೆ ಮನೆಲೆಯ.. ಸಾಮಾನು ಖಾಲಿಯಾದಂಗೆ ಹಂಬಲಾದಗಲೆಲ್ಲ ಬರೆದಿಡು ಹೇಳಿ. 
     ಅಯ್ಯ ಅವು ಬರೆದ್ರೆ ಹೆಂಗಸರೇ ಅಲ್ಲ 
😜
     ಮದುವೆಯಾಗಿ 2 ವರ್ಷ ಈ ಐಡಿಯಾ ನಡದ್ದಿಲ್ಲೆ.  ದಿನಾ ಯುದ್ಧ ಮನೇಲಿ.
     ಅದಕ್ಕೂ ನಂತರ "ನಾ ತಪ್ಪಂವ ಅಲ್ಲ... ನೀನೇ ಎಲ್ಲ ತಂದ್ಕಳವು" ತಿಂಗಳಿಗೆ ರೇಷನ್ನಿಗೆ, ಹಾಲಿಗೆ ಇಷ್ಟು ಹೇಳಿ ಕೊಡಲು ಶುರು ಮಾಡ್ದೆ. 
    ಆದರೂ ತಿಂಗಳ ಅಖೈರಿಗೆ 'ರೇಷನ್ ಬಜೆಟ್ ಖಾಲಿ' ಹೇಳಲ್ ಹಣಕ್ತು ಹೆಂಡ್ತಿಕೂಸು. ಬಜೆಟ್ ಏರ್ಸಕಾತು. ಸರಿ ಏರಸ್ದೆ.. ಎಲ್ಲ ಸಮಾ ಆತು ಅಂದ್ಕಂಡಿದ್ದೆ. 

     ಆಶ್ಚರ್ಯ ಆಗದ್ದು ನೋಟ್ ಬಂದಾದಾಗ! 😳😳 ನನ್ನ ಬ್ಯಾಂಕ್ ಬ್ಯಾಲೆನ್ಸ್ ಗಿಂತ ಸಾಸಿವೆ ಡಬ್ಬಿ ಬ್ಯಾಲೆನ್ಸೇ ಜಾಸ್ತಿ ಇತ್ತು😳😳

   ಅಪ್ನ ಮನೆಗೋಗ್ತ ಇವು. ಹೋಪ ಬಪ್ಪ ಏರ್ - ಬಸ್ - ಟ್ರೇನ್  ಟಿಕೆಟ್ಟೂ .. ತಿಂಬುಂಬ್ಲೆ ಕೊಟ್ಟೂ...  ಮೇಲಿಂದ ಸಲ್ಪ ಕ್ಯಾಶೂ ಕೈಯಲ್ಲಿ ಹಿಡಿಸಾಗ್ತು ನಾವು.

    ವಾಪಸ್ ಬಂದ ಮೇಲೆ ಲೆಕ್ಕ ಕೇಳಲೇ ಆಗ... ಕೇಳಿರೆ ಕೆಟ್ಟ. ನಮ್ ಕೈಯಿಂದನೇ ಹೋಗ್ತು. ನಾವು ಕೊಟ್ಟದ್ದಕ್ಕಿಂತ ಜಾಸ್ತಿ ಖರ್ಚು ಹೇಳೇ ತೋರಿಸ್ತು ಯಮ್ಮನೆದು. 
ಗಣಿತ ಅಷ್ಟ್ ಗಟ್ಟಿ ಅದರದ್ದು 😳
    ಆದರೆ ತನ್ನಿಂತಾನೇ ಆ ಸಾ.ಡ. ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಆಗಿರ್ತು. 🙄🙄

ಕೇಳಿರೆ... ಅಣ್ಣ, ಅಕ್ಕ, ಅಪ್ಪನ ಮನೇಲಿ ಕೊಟ್ಟಿದ್ದು. ಅದು ಗಂಡನ ಮನೆ ಖರ್ಚಿಗೆ ಸಂಬಂಧಿಲ್ಲೇ. 😳😳
   ಯಂಗೆ ಜೀ0ವ ಹೋತೂ ಅಂದ್ರೂ ಆ ಸಾ.ಡ. ಬ್ಯಾಲೆನ್ಸ್ ಸಿಗತಿಲ್ಲೆ. 

    ಹಂಗರೆ ಅದರ ಉಪಯೋಗ ಯಾವಾಗ?
ಅಪ್ನ ಮನೇಲಿ ಯಾರಿಗಾರೂ ಭತ್ತದ ಸುಂಗು ಹೆಟ್ಟಿದಾಗ. 
😳😳😝😅

(ಯಮ್ಮನೆದು ಮಾತ್ರ ಹಂಗೆ ಹಂ... ನಿಂಗವೆಲ್ಲ ಗನಾವು... ಎದಿಗೆ ತಗಳಡಿ 😀)

06/04/2022, #ಹವಿಹಾಸ್ಯ 

ಕುನ್ನಿದು ಕುನ್ನಿದು ಬಾರೇ


#ಕೂಸಿನ‌_ಯಾಪಾರಲ್ಲ

ನಮ್ಮನೆ ಕೂಸು ಹುಟ್ಟಿ ಬೆಳೆದಿದ್ದು ದಿಲ್ಲಿಲಿ. ಹೈಗ ಕನ್ನಡ ಬಂದ್ರೂವಾ ಹಿಂದಿ ಇಂಗ್ಲೀಷಲ್ಲಿ ಹಿಡಿತ ಜಾಸ್ತಿ ಅದ್ಕೆ. ಹವ್ಯಕದಲ್ಲಿ ಜಗಳ ಮಾಡೂಲಂತೂ ಬತ್ತೇ ಇಲ್ಲೇ ಪಾಪ. 

ಈಗ 2-3 ವರ್ಷದ ಹಿಂದೆ ಯುಗಾದಿ ಹಬ್ಬದ ದಿನ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಹಾಡು ಹಂಬಲಾತು ... ಗುನಗುನಸ್ತ ಇದಿದ್ದನ್ನ ಈ ಕೂಸು ಕೇಳ್ಬುಡ್ತು.
"ಇದ್ಯಾವ ಗಾನನಾ ಪಪ್ಪಾ?" ಪ್ರಶ್ನೆ .
"ಅದು ಕನ್ನಡ ಹಾಡೇ ಕೂಸೇ" ಹೇಳ್ವಲ್ಲಿವರೆಗೆ ಕೈಲಿದ್ದ ಮೊಬೈಲ್ ಒತ್ತಿ ಯೂ ಟೂಬ್ ಲ್ಲಿ ಆ ಹಾಡ ಹುಡುಕಿ ಕೇಳುಲೆ ಶುರು ಮಾಡ್ತು. 
ಯುಗಾದಿ ಹಾಡು ಮುಗತ್ತು. ಯೂ ಟೂಬ್ ಹಾಂಗೆಯ... ಹುಷಾರಿ. ನಂಗ ಎಂತಾ ನೋಡತ್ವ ಅದಕೆ ಸಂಬಂಧ ಪಟ್ಟ ಉಳಿದ ಹಾಡನ್ನೂ 'ನೋಡಿ' ಹೇಳಿ ಶಿಫಾರಸು ಮಾಡ್ತು. 

ಅಲ್ಲೇ ಮುಂದೆ 'ರವಿವರ್ಮನ ಕುಂಚ' ಕಂಡತು. ಅದನ್ನೂ ನೋಡ್ತು, ಕೇಳ್ತು ಕೂಸು.
ಅದಕ್ಕೂ ಮುಂದೆ ಮತ್ತೂ ಕೆಲವು ಹಾಡಿನ ಶಿಫಾರಸು ಬತ್ತಾ ಇದ್ದಿತ್ತು.‌ ಇದು ವಿಡಿಯೋದ ಕೆಳಗೆ ಇಂಗ್ಲಿಷ್ ನಲ್ಲಿ ಬರೆದ ಅಡಿಬರಹ ಎಲ್ಲ ದೊಡ್ಡಕೆ ಓದ್ತಾ ಓದ್ತಾ ಹೋತು.
'ಆಕಾಶದಿಂದಾ ಧರೆಗಿಳಿದ ಗೊಂಬೆ'
'ಎಂದೆಂದೂ ನಿನ್ನನು ಮರೆತು'
'ನೀರ ಬಿತ್ತು ನೆಲದ ಮೇಲೆ' ಇತ್ಯಾದಿ‌. 

ಕಡೇಗೆ 
'ಕುನ್ನಿದು ಕುನ್ನಿದು ಬಾರೆ' ಅಂತು. 🙄😳
ನಂಗೆ ಇದ್ಯಾವ ಹಾಡಪಾ ಹೇಳೇ ಅಂತ್ ಪಾರ್ ಹತ್ತಿದ್ದಿಲ್ಲೆ. ಕೆಮಿ ಚುರ್ಕಾದ್ರೂ
ಬೊಡ್ ತಲೆ ಯಂದು. 

ಅಲ್ಲೇ ಇದ್ದ ಯಮ್ಮನೆ ಪ್ರಾಣಿ ನಗ್ಯಾಡ್ತವ
"ಯೇ ಅದು 'ಕುನ್ನಿದು ಕುನ್ನಿದು' ಅಲ್ದೇ.... "ಕುಣಿದು ಕುಣಿದು ಬಾರೇ" 

ಎಚ್ಚರ ತಪ್ಪದೊಂದು ಬಾಕಿ ನಾನು. 🤩🤩😂😂 

🙏🙏
- ಶ್ಯಾಂ‌ ಭಟ್
22/03/2022, #ಹವಿಹಾಸ್ಯ ಲಘುನಗು

ನಂಬಿಕೆ


**ಅದೊಂದು ಯುಗಾದಿ **
"ತಮಾ..... 9 ಗಂಟ್ಯಾತು...‌ ಕಾಲಾವಧಿ ಹಬ್ಬಾಗಿ ಈ‌ ಮಾಣಿ ಇನ್ನೂ ಬಿದ್ವರಗ್ತೆ ಇದ್ದಾ ನೋಡಿ..‌..." ಹೇಳ ಅಶರೀರವಾಣಿಗೆ ಕಣ್ಬಿಟ್ಟಿ. ಯಂಗೊತಿದ್ದು ಯನ್ನ ಆಯಿ ಯೋಳೂಕಾಲಕ್ಕೇ ಒಂಬತ್ ಗಂಟ್ಯಾತು ಹೇಳ್ತೂ ಹೇಳಿ.. ಇವತ್ತೆಂತಕೆ ಕೂಗ್ತಿದ್ದಪಾ.. ಯುಗಾದಿ ರಜೆ ಮೇಲಿಂದವಾ ಹೇಳಿ ಯೋಳ‌ ಮನಸಿಲ್ದೋರೂ ಮೈ‌ಮುರ್ದು ಎದ್ದಿ... ಏಳಕಾತಲೀ. ಇಲ್ದೋರೆ ಯನ್ನಬ್ಬೆ ಅಬ್ಬೆಯಾಗಿರ್ತಿಲ್ಲೆ. 'ನವದುರ್ಗೆಯರೂ ಆಹ್ವಾಹನೆ ಅಪ್ಪ ಮುಂಚೇನೇ ಎದ್ಬುಡು ತಮಾ' ಹೇಳಿ ಯಂದೇ ಅಂತರಾಳ ಕೂಗ್ತು. 😀

ಎದ್ದು ಮಿಂದು ದೇವ್ರ ಪೂಜೆ ಮಾಡ್ತಿರಕಾರೇ "ತಮಾ  ಚೌಡಿ ಪೂಜೆ ಮಾಡ್ಕ ಬಾ" ಅಶರೀರವಾಣಿ ಮತ್ತೆ. ಅದ್ರ ಶರೀರ ಬತ್ತಿತ್ತಿಲ್ಲೆ ಯನ್ನತ್ರ... ಬರೀ ಆವಾಜ್‌ ಮಾತ್ರ ಬತ್ತಿತ್ತು ಅದ್ಕಾಗೇ ಅಶರೀರವಾಣಿ ಹೇಳ್ತಿ.

 ತ್ವಾಟದ ತುದಿಗೆ ಚೌಡಿಮನೆ.. ನಾನು ಚೌಡಿ ಮನೆಗೆ ಹೋದಷ್ಟೊತ್ತಿಗೇ ಸುಬ್ರಾಯ ಭಟ್ರ ಮನೆ ತಿಮ್ಮಣ್ಣ ಪೂಜೆಗೆ ಬಂದಿದ್ದ ಪೂಜೆ ಮಾಡ್ತಿದಿದ್ದ. 
"ಹಾ.. ಹಾಂಗೇ ನನ್ನ ಕಾಯೂ ವಡೆದು ಕೊಟ್ಬುಡೊ, ಪುರೋಹಿತ ನೀನು" ಅಂದಿ. ಅಂವ ಪೂಜೆ ಮಾಡ್ತಿರಕಾರೇ ಕೇಳ್ದಿ... "ಭಟ್ರು ಹೆಂಗಿದ್ರಡೋ?"
ಸುಬ್ರಾಯ ಭಟ್ರನ್ನ ವಾರದ ಹಿಂದೆ ಮಣಿಪಾಲಕ್ಕೆ ಕರ್ಕ ಹೋಗಿದಿದ್ದ.. ಸಿರಿಯಸ್ಸು.. 

"ನಿನ್ನೆ ಆಪರೇಷನ್ ಆತಡಾ, ಇನ್ನೊಂದು ವಾರ ಬಕ್ಕು" ಅಂದ ತಿಮ್ಮಣ್ಣ ಕಾಯಿ ವಡೆತವ... ಒಂದು ಕಡಿ ಕಮಚಡಿಗಾಗಿ ಬೀಳಸ್ಬುಟಾ ಮಾಣಿ. 
 "ಒಹ.. ನಾ ಒಡೆಲನಾ?" ಅಂದೆ.  ಕಡಿ ಕಮಚಿ ಬಿದ್ದ ಮೇಲೆ ಕೇಳ ಪ್ರಶ್ನೆ ಅಲ್ಲ ಅದೂ.. ಆದರೂ ಪರಾವರ್ತಿತ ಪ್ರತಿಕ್ರಿಯೆಯಾಗಿ ಯನ್ ಬಾಯಿಂದ ಬಂತಕು. 🙆

ಅಷ್ಟಾದ ಮೇಲೆ ಊಟ ಮಾಡಿ ಕವಳ ಹಾಕ್ತೇ ಇದಿದ್ದಿ... ಎಂಬುಲೆನ್ಸ್ ಶಬ್ದ ಕೇಳ್ತು... ನಂಗ ಎಲ್ಲಾ ಮಕಮಕ‌ ನೋಡ್ಕಂಡ್ಯ... ಸೀದಾ ಮನಸಲ್ಲಿ ಬಂದದ್ದೇ  "ಸುಬ್ರಾಯ ಭಟ್ರು?!" 

ಬಡಬಡ ಎದ್ದು ರಸ್ತೆಗೆ ಹೋದ್ರೆ ಹೌದು.. ಸುಬ್ರಾಯ ಭಟ್ರೇಯ..  !! ಓಂ ಶಾಂತಿ 🙏

ನಾ ಮದಲೆಲ್ಲ ನಂಬತಿದ್ನಿಲ್ಲೆ... ಅಜ್ಜಿಯ, ಆಯಿಯ ಈ ನಮ್ನಿ ನಂಬ್ಕೆ ಎಲ್ಲವಾ. ಇದೆಲ್ಲ  ಮೂಢನಂಬಿಕೆಗಳೇ ಹೌದ? ಅಥವ ಈ  ನಮ್ಮ ಹೆರಿತಲೆಗಳು ಅವರ ಅನುಭವದಿಂದ ಇದನ್ನೆಲ್ಲಾ ಹೇಳ್ತಿದ್ವ?  ಒಂದೂ ಅರ್ಥಾಗ್ತಿಲ್ಯಪ !!

🙏🙏
- ಶ್ಯಾಂ ಭಟ್, ಭಡ್ತಿ
21-03-2022
 #ಹವಿಹಾಸ್ಯ - 
ಲಘುನಗು

Nov 27, 2021

ಡಿಎನ್ಸಿ ಮಾಡ್ಸೂ

ತಲೆಬರಹ:
ಗುನಗನ ಕಷ್ಟ ಗುನಗಂಗೆ  ಎಂಬ ಒಂದು ಕಥೆ ಬರೆದಿದ್ದೆ ಕೆಲ ದಿನಗಳ ಹಿಂದೆ. ಅದನ್ನೋದಿದ ಓದುಗ ನನ್ನಣ್ಣ ಈ ವಿಷಯವ ನೆನಪು ಮಾಡಿದ.

ಹೌದು ನಮ್ಮಲ್ಲಿ ಈ ಕಥೆಯನ್ನೂ ಹಿರಿಯರು ಹೇಳ್ತಾರೆ. ಕೇಳಿ.. ನಡೆದ ಘಟನೆಯಂತೆ ಇದು.  (ನಾ ಕೇಳಿದಂತೇ ಗೀಚಿದ್ದೇನೆ)
-----

     ರೀತಿ ರಿವಾಜುಗಳಿಂದ ಆ ವರ್ಷದ ಹಬ್ಬ ನಡೆಯುತ್ತಿತ್ತು. ಕಲಶ ಹೊರುವ ಗುನಗ ಸಲ್ಪ ಅಕ್ಷರಸ್ತ. ವ್ಯಾವಹಾರಿಕ ಜ್ಞಾನವೂ ಇತ್ತು ಅವನಿಗೆ ಎನ್ನಿ.

   ಕಲಶ ಹೊರುವವನಿಗೆ 'ಭಾರ' ಬರ್ತದೆ. 'ಭಾರ' ಬರುವುದು, ಎಂದರೆ ಮೈಮೇಲೆ ಶ್ರೀ ದೇವರ ಆಹ್ವಾಹನೆಯಾಗುವುದು ಎಂಬ ನಂಬಿಕೆಯಿದೆ.
     ಕಲ್ಲಿನ ವಿಗ್ರಹ ವರ್ಷಪೂರ್ತಿ ಮಾತನಾಡದು. ಆದರೆ ಅದೊಂದು ದಿನ (ಹಬ್ಬದ ದಿನ) ಆ ದೇವರು ಕಲಶ ಹೊತ್ತವನ ಮೇಲೆ ಆಹ್ವಾಹನೆಯಾಗುತ್ತಾನೆ !  ಹಾಗಾಗಿ ತನ್ನ ಸಂಕಷ್ಟ, ಕಾರ್ಪಣ್ಯಗಳನ್ನೆಲ್ಲ ತೋಡಿಕೊಂಡರೆ ಆ ದೇವ ಪರಿಹರಿಸಬಹುದು... ಎಂಬ ನಂಬಿಕೆ ಹುಲುಮಾನವನಲ್ಲಿ.  ಹಾಗಾಗಿಯೇ 'ಹೇಳಾಣಿಕೆ' ಆಗ್ತದೆ ಆಗ. ಆ ಸಂದರ್ಭದಲ್ಲಿ ದೇವರ ಆಹ್ವಾಹನೆಯಾದ ಗುನಗನ ಬಾಯಿಂದ ಹೊರಟ ಪರಿಹಾರ ಕ್ರಮದಿಂದ ಭಕ್ತರ ಸಮಸ್ಯೆ ಪರಿಹಾರವಾದ ನಿದರ್ಶನಗಳೂ ಇಲ್ಲದಿಲ್ಲ. ಹಾಗಾಗಿ  "ಹೇಳಾಣಿಕೆ"ಯೇ ಭಕ್ತನ ಮನಸ್ಸಿಗೊಂದು ಆಶಾ ಕಿರಣ.

  ಮಕ್ಕಳಾಗದ ಬಡ ಭಕ್ತನೊಬ್ಬ ದೇವರಲ್ಲಿಯೇ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳುವ ಬಯಕೆಯಲ್ಲಿ ಅಂದು ಬಂದಿದ್ದ. 

ಹಾಗೆಯೇ ಈ ಭಕ್ತ ತೋಡಿಕೊಂಡ ತನ್ನ ಅಳಲ - "ದೇವರೇ ನನಗೆ ಮಕ್ಕಳಾಗಲಿಲ್ಲ.. ಮದುವೆಯಾಗಿ ಐದು ವರ್ಷ ಆಯ್ತು .. ಪರಿಹಾರ ಕೊಡಬೇಕು"

ತಕ್ಷಣ ಕಲಶ ಉಲಿಯಿತು.
"ಡಿ ಎನ್ ಸಿ ಮಾಡಸೂ"  !!

ಅಡಿಬರಹ :
D&C ಅಂದ್ರೆ Dilation & Curettage is a procedure to clear uterine lining after miscarriage or abortion

ಸುಮಾರು 70- 80 ರ ದಶಕದಲ್ಲಿ .. ಪದೇ ಪದೇ ಗರ್ಭ ನಿಲ್ಲದ ಸಂದರ್ಭಗಳಲ್ಲಿ ಈ ಚಿಕಿತ್ಸೆ ಚಾಲ್ತಿಗೆ ಬಂತು.

06/09/2021
ದಿಲ್ಲಿ